ಕಠ್ಮಂಡು: ಕಳೆದ ತಿಂಗಳು ನೇಪಾಳದ ಪೊಖರಾ ಬಳಿ ಪತನಗೊಂಡ ಯೇತಿ ಏರ್ಲೈನ್ಸ್ನ ವಿಮಾನವು ಇಳಿಯುತ್ತಿದ್ದ ಸಮಯದಲ್ಲಿ ಅದರ ಪ್ರೊಪೆಲ್ಲರ್ಗಳಿಗೆ ವಿದ್ಯುತ್ ಪೂರೈಕೆ ಇದ್ದಿರಲಿಲ್ಲ ಎಂದು ಸರ್ಕಾರ ನೇಮಕ ಮಾಡಿರುವ ತನಿಖಾ ತಂಡ ಹೇಳಿದೆ.
‘ವಿಮಾನ ಇಳಿಯುತ್ತಿದ್ದ ಸಂದರ್ಭದಲ್ಲಿ ಎರಡೂ ಎಂಜಿನ್ಗಳ ಪ್ರೊಪೆಲ್ಲರ್ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಎಂಬುದು ವಿಶ್ಲೇಷಣೆ ಹಾಗೂ ತನಿಖೆಯಿಂದ ತಿಳಿದುಬಂದಿದೆ’ ಎಂದು ತನಿಖಾ ತಂಡದ ಹೇಳಿಕೆಯನ್ನು ಉಲ್ಲೇಖಿಸಿ ‘ಮೈ ರಿಪಬ್ಲಿಕಾ’ ದೈನಿಕ ವರದಿ ಮಾಡಿದೆ.
ಯೇತಿ ಏರ್ಲೈನ್ಸ್ಗೆ ಸೇರಿದ ಎಟಿಆರ್–72 ವಿಮಾನವು ಜನವರಿ 15ರಂದು ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಹೊರಟಿತ್ತು. ಫೊಖರಾದ ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯ ಬೇಕಿತ್ತು. ರನ್ವೇ ತಲುಪಲು ಕೇವಲ 12ರಿಂದ 15 ಸೆಕೆಂಡ್ಗಳಿರುವಾಗ ಅದು ಪತನವಾಗಿತ್ತು. ಈ ಘಟನೆಯಲ್ಲಿ ಐವರು ಭಾರತೀಯರು ಸೇರಿ 71 ಮಂದಿ ಮೃತಪಟ್ಟಿದ್ದರು.
ಈ ಅವಘಡಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಸಿಬ್ಬಂದಿಯ ತಪ್ಪಿನಿಂದ ಇದು ಸಂಭವಿಸಿದೆಯೇ ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿದಿದೆ ಎಂಬುದಾಗಿ ತನಿಖಾ ತಂಡದ ಸದಸ್ಯರಾದ ದೀಪಕಪ್ರಸಾದ್ ಬಸ್ತೋಲಾ ಹೇಳಿದ್ದಾರೆ ಎಂದು ‘ಹಿಮಾಲಯನ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.