ನವದೆಹಲಿ: ಎರಡು ವಾರಗಳಲ್ಲಿ ರಾಜಕೀಯ ಪಕ್ಷಗಳು ದೇಶದಲ್ಲಿ ಸ್ಥಿರತೆ ಖಚಿತಪಡಿಸದಿದ್ದರೆ ತಮ್ಮ ಸ್ಥಾನ ತ್ಯಜಿಸುವುದಾಗಿ ಶ್ರೀಲಂಕಾದ ಕೇಂದ್ರ ಬ್ಯಾಂಕ್ನ ಗವರ್ನರ್ ಬುಧವಾರ ಹೇಳಿದ್ದಾರೆ.
ರಾಜಕೀಯ ಪರಿಸ್ಥಿತಿ ಸುಧಾರಿಸದೇ ಇದ್ದರೆ ಸದ್ಯದ ಆರ್ಥಿಕ ಬಿಕ್ಕಟ್ಟಿನ ಪರಿಹಾರಕ್ಕೆ ಕೇಂದ್ರ ಬ್ಯಾಂಕ್ ಕೈಗೊಳ್ಳುವ ನಿರ್ಧಾರಗಳು ಫಲ ಕೊಡುವುದಿಲ್ಲ ಎಂದು ಗವರ್ನರ್ ಪಿ. ನಂದಲಾಲ್ ವೀರಸಿಂಘೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟನ್ನು ಖಂಡಿಸಿ ಶ್ರೀಲಂಕಾದಲ್ಲಿ ಜನ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತಿದ್ದಾರೆ.
ಜನರ ಆಕ್ರೋಶದಿಂದ ಬೆದರಿದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಟ್ರಿಂಕೋಮಲ್ಲಿ ನೌಕಾನೆಲೆಯಲ್ಲಿ ಆಶ್ರಯ ಪಡೆದಿದ್ದಾರೆ.
‘ಟ್ರಿಂಕೋಮಲ್ಲಿ ನೌಕಾ ನೌಕಾನೆಲೆಗೆ ಅವರನ್ನು(ಮಹಿಂದಾ ರಾಜಪಕ್ಸ) ಸ್ಥಳಾಂತರಿಸಲಾಗಿದ್ದು, ಭದ್ರತೆ ಒದಗಿಸಲಾಗಿದೆ’ ಎಂದು ರಕ್ಷಣಾ ಕಾರ್ಯದರ್ಶಿ ಕಮಲ್ ಗುಣರತ್ನೆ ಆನ್ಲೈನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟನ್ನು ಖಂಡಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ಮೇಲೆ ಸರ್ಕಾರದ ಬೆಂಬಲಿಗರು ಕಳೆದ ವಾರ ಹಲ್ಲೆ ನಡೆಸಿದ ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಪರಿಸ್ಥಿತಿ ನಿಭಾಯಿಸಲು ದೇಶದಾದ್ಯಂತ ಕರ್ಫ್ಯೂ ವಿಧಿಸಿದ್ದ ಅಧಿಕಾರಿಗಳು ಭದ್ರತೆಗೆ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳನ್ನು ನಿಯೋಜಿಸಿದ್ದರು. ಈ ನಡುವೆ ಮಹಿಂದಾ ರಾಜಪಕ್ಸ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹಿಂಸಾಚಾರದಲ್ಲಿ ಕನಿಷ್ಠ 8 ಮಂದಿ ಮೃತಪಟ್ಟರೆ, 250ಕ್ಕೂ ಅಧಿಕ ಜನರ ಗಾಯಗೊಂಡಿದ್ದಾರೆ. ಆಡಳಿತ ಪಕ್ಷದ ಹಲವು ನಾಯಕರ ಆಸ್ತಿಗಳಿಗೆ ಹಾನಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.