ಕೊಲಂಬೊ: ಶ್ರೀಲಂಕಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ದೇಶದಾದ್ಯಂತ ಪ್ರಯಾಣದ ಮೇಲೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ರೈಲು ಮತ್ತು ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಶುಕ್ರವಾರ ರಾತ್ರಿಯಿಂದ ಈ ನಿಯಮ ಜಾರಿಗೆ ಬಂದಿದ್ದು, ಮಂಗಳವಾರ ಮುಂಜಾನೆವರೆಗೆ ಇರಲಿದೆ. ಆರೋಗ್ಯ, ಆಹಾರ, ವಿದ್ಯುತ್ ವಿಭಾಗದ ಸಿಬ್ಬಂದಿ ಮತ್ತು ಚಿಕಿತ್ಸೆಗೆ ತೆರಳುವವರಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್ಡೌನ್ ಹೇರಬೇಕು ಎಂದು ಶ್ರೀಲಂಕಾದ ವೈದ್ಯಕೀಯ ಸಂಘಗಳು ಒತ್ತಾಯಿಸಿದ್ದವು. ಇದರ ಬೆನ್ನಲ್ಲೇ ಸರ್ಕಾರವು ಈ ಕ್ರಮ ಕೈಗೊಂಡಿದೆ. ಈಗಾಗಲೇ ಸಾರ್ವಜನಿಕ ಸಭೆ, ಸಮಾರಂಭ, ವಿವಾಹಗಳನ್ನು ನಿಷೇಧಿಸಲಾಗಿದ್ದು, ಶಾಲೆ, ಕಾಲೇಜುಗಳನ್ನು ಮುಚ್ಚಲಾಗಿದೆ.
‘ಕಳೆದ ತಿಂಗಳಲ್ಲಿ ಸಾಂಪ್ರಾದಾಯಿಕ ಹೊಸ ವರ್ಷಾಚರಣೆಗಾಗಿಜನರು ಸೇರಿದ್ದರು. ಹಾಗಾಗಿ ಮುಂದಿನ ಎರಡು ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ’ ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
‘ಶ್ರೀಲಂಕಾದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,54,786ಕ್ಕೆ ಏರಿಕೆಯಾಗಿದ್ದು, 1,089 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ’ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.