ಕೊಲಂಬೊ: ಶ್ರೀಲಂಕಾ ಅಧ್ಯಕ್ಷರಾಗಿದ್ದ ಗೊಟಬಯ ರಾಜಪಕ್ಸ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಅಲ್ಲಿನ ಸಂಸತ್ತಿನ ಸ್ಪೀಕರ್ ಪ್ರಕಟಿಸಿದ್ದಾರೆ.
ಗುರುವಾರದಿಂದಲೇ ಜಾರಿಗೆ ಬರುವಂತೆ ‘ಗೊಟಬಯ ಕಾನೂನಾತ್ಮಕವಾಗಿ ರಾಜೀನಾಮೆ’ ನೀಡಿದ್ದಾರೆ ಎಂದು ಸ್ಪೀಕರ್ ಮಹಿಂದ ಯಪ ಅಬೆವರ್ದನ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನಾಕಾರರ ಆಕ್ರೋಶಕ್ಕೆ ಹೆದರಿ ಮಾಲ್ಡೀವ್ಸ್ ಮಾರ್ಗವಾಗಿ ಗೊಟಬಯ ರಾಜಪಕ್ಸ ಸಿಂಗಪುರಕ್ಕೆ ತೆರಳಿದ್ದು, ನಿನ್ನೆ ರಾತ್ರಿ ಅಲ್ಲಿಂದಲೇ ರಾಜೀನಾಮೆ ಸಲ್ಲಿಕೆ ಮಾಡಿದ್ದರು.
ಈ ಮಧ್ಯೆ, ಪ್ರತಿಭನಾಕಾರರಿಂದ ರಾಜೀನಾಮೆ ಒತ್ತಡ ಎದುರಿಸುತ್ತಿರುವ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು, ಶ್ರೀಲಂಕಾ ಸಂವಿಧಾನದ ಅನ್ವಯ ಹೊಸ ಅಧ್ಯಕ್ಷರ ಆಯ್ಕೆಯಾಗುವವರೆಗೂ ಪ್ರಭಾರಿ ಅಧ್ಯಕ್ಷರಾಗುತ್ತಾರೆ. ಸಂಸತ್ತಿನ ಉಳಿದ ಅವಧಿಗೆ ಸಂಸದರು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ.
‘ಶನಿವಾರ ಅಧಿವೇಶನ ಕರೆಯಲಾಗಿದ್ದು. ಹೊಸ ಅಧ್ಯಕ್ಷರ ಆಯ್ಕೆ ಏಳು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ನಾನು ನಂಬುತ್ತೇನೆ. ಸಾಂವಿಧಾನಿಕ ಪ್ರಕ್ರಿಯೆ ಪೂರ್ಣಗೊಳಿಸಲು ಸಂಬಂಧಪಟ್ಟ ಎಲ್ಲರ ನೆರವನ್ನು ಕೋರುತ್ತೇನೆ’ಎಂದು ಸ್ಪೀಕರ್ ಅಬೇವರ್ದನ ಹೇಳಿದ್ದಾರೆ.
ಇವನ್ನೂ ಓದಿ..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.