ಕೊಲಂಬೊ: ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾದಲ್ಲಿ ಜನರ ಆಕ್ರೋಶ ಮೇರೆ ಮೀರಿದೆ. ಈ ಮಧ್ಯೆ, ದೇಶ ಬಿಟ್ಟು ತೆರಳಲು ಯತ್ನಿಸಿದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಸಹೋದರ ಮತ್ತು ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸ ಅವರನ್ನು ತಡೆದು ನಿಲ್ಲಿಸಿರುವುದಾಗಿ ಕೊಲಂಬೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ವಲಸೆ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕ ಪೌರತ್ವವನ್ನೂ ಹೊಂದಿರುವ ಬಸಿಲ್ ರಾಜಪಕ್ಸ ಎಲ್ಲಿಗೆ ಹೋಗಲು ಪ್ರಯತ್ನ ನಡೆಸಿದ್ದರು ಎಂಬುದು ಸದ್ಯ ಸ್ಪಷ್ಟವಾಗಿಲ್ಲ. ಆಹಾರ, ಇಂಧನ ಮುಂತಾದ ಅಗತ್ಯ ವಸ್ತುಗಳ ಕೊರತೆ ಖಂಡಿಸಿ ಜನರು ಬೀದಿಗಿಳಿದು ಉಗ್ರ ಹೋರಾಟ ನಡೆಸಿದ ಬಳಿಕ ಏಪ್ರಿಲ್ನಲ್ಲಿ ಬಸಿಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೂನ್ನಲ್ಲಿ ಸಂಸದ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು.
ಅವರ ಹಿರಿಯ ಸಹೋದರ ಅಧ್ಯಕ್ಷ ಗೊಟಬಯ ರಾಜಪಕ್ಸ ನಾಳೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಶನಿವಾರ ಅವರ ಅಧಿಕೃತ ನಿವಾಸಕ್ಕೆ ನುಗ್ಗಿ ಮನೆಯನ್ನು ವಶಕ್ಕೆ ಪಡೆದಿರುವ ಪ್ರತಿಭಟನಾಕಾರರು, ರಾಜೀನಾಮೆ ಕೊಡದ ಹೊರತು ನಿವಾಸವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಪ್ರತಿಭಟನೆಯ ಸೂಚನೆ ಅರಿತು ಶುಕ್ರವಾರವೇ ಕಾಲ್ಕಿತ್ತಿದ್ದ ಗೊಟಬಯ ಎಲ್ಲಿದ್ದಾರೆ ಎಂಬ ಬಗ್ಗೆ ಈವರೆಗೆ ಮಾಹಿತಿ ಸಿಕ್ಕಿಲ್ಲ.
ಈ ಮಧ್ಯೆ, ದೇಶದ ಅಗ್ರ ನಾಯಕರಿಗೆ ದೇಶ ಬಿಟ್ಟು ತೆರಳಲು ಅನುವು ಮಾಡಿಕೊಡದಂತೆ ವಲಸೆ ಅಧಿಕಾರಿಗಳ ಮೇಲೆ ತೀವ್ರ ಒತ್ತಡವಿದೆ ಎಂದು ವಲಸೆ ಅಧಿಕಾರಿಗಳ ಸಂಘದ ಅಧ್ಯಕ್ಷ ಕೆಎಎಸ್ ಕನುಗಾಲ ಹೇಳಿದ್ದಾರೆ.
‘ನಮ್ಮ ಭದ್ರತೆ ದೃಷ್ಟಿಯಿಂದಲೂ ಸಹ ಯೋಚಿಸಿ ದೇಶದ ಆರ್ಥಿಕ ಸಮಸ್ಯೆ ಬಗೆಹರಿಯುವವರೆಗೂ ವಿಐಪಿ ಲಾಂಜ್ ಸೇವೆ ಸ್ಥಗಿತಗೊಳಿಸಲು ನಮ್ಮ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಬಸಿಲ್ ರಾಜಪಕ್ಸ ವಿಮಾನ ನಿಲ್ದಾಣದ ಲಾಂಜ್ನಲ್ಲಿರುವ ಚಿತ್ರವನ್ನು ಸ್ಥಳೀಯ ಮಾಧ್ಯಮವೊಂದು ಪ್ರಸಾರ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಇವನ್ನೂ ಓದಿ..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.