ಕೊಲಂಬೊ: ಪ್ರತಿಭಟನಕಾರರ ಮೇಲೆ ಪೊಲೀಸರ ಗುಂಡಿನ ದಾಳಿ ನಡೆದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದರಿಂದಶ್ರೀಲಂಕಾದ ರಂಬುಕ್ಕಾನಾದ ನೈರುತ್ಯ ಪ್ರಾಂತ್ಯದಲ್ಲಿ ಕರ್ಫ್ಯೂ ಮುಂದುವರಿಯಲಿದೆ ಎಂದು ಶ್ರೀಲಂಕಾದ ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಿಂದ ಗಾಯಗೊಂಡ 13 ಪ್ರತಿಭಟನಕಾರರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ, ‘ಶ್ರೀಲಂಕಾ ಪ್ರಜೆಗಳ ಪ್ರತಿಭಟಿಸುವ ಹಕ್ಕನ್ನು ತಡೆಯಲಾಗುವುದಿಲ್ಲ. ಗುಂಡಿನ ದಾಳಿಯ ಘಟನೆಯ ಬಗ್ಗೆ ನಾನು ತೀವ್ರ ದುಃಖಿತನಾಗಿದ್ದೇನೆ. ಶ್ರೀಲಂಕಾ ಪೊಲೀಸರು ಘಟನೆಯ ಬಗ್ಗೆ ಯಾವುದೇ ಪಕ್ಷಪಾತವಿಲ್ಲದ ಹಾಗೂ ಪಾರದರ್ಶಕವಾದ ತನಿಖೆ ನಡೆಸುತ್ತಾರೆ. ಪ್ರತಿಭಟನೆಯ ಸಮಯದಲ್ಲಿ ಪ್ರತಿಭಟನಕಾರರು ಹಿಂಸೆಯಿಂದ ದೂರವಿರಲು ಕೋರುತ್ತೇನೆ’ ಎಂದು ತಿಳಿಸಿದ್ದಾರೆ.
ಇನ್ನು ಶ್ರೀಲಂಕಾದ ಪ್ರಧಾನಿ ಮಹಿಂದ ರಾಜಪಕ್ಸೆ, ‘ರಂಬುಕ್ಕಾನದಲ್ಲಿ ನಡೆದ ದುರಂತದಿಂದ ತೀವ್ರ ಯಾತನೆಗೆ ಒಳಗಾಗಿದ್ದೇನೆ. ಶ್ರೀಲಂಕಾದ ಪೊಲೀಸರು ಕಟ್ಟುನಿಟ್ಟಾದ, ನಿಷ್ಪಕ್ಷಪಾತ ತನಿಖೆಯನ್ನು ನಡೆಸುತ್ತಾರೆ ಎಂಬ ನಂಬಿಕೆ ನನಗಿದೆ. ಎಲ್ಲ ಪ್ರತಿಭಟನಕಾರರು ಸಮಾನ ಗೌರವ ಮತ್ತು ಪ್ರಾಮಾಣಿಕತೆಯಿಂದ ತಮ್ಮ ನಾಗರಿಕ ಹಕ್ಕುಗಳನ್ನು ಕಾಯ್ದುಕೊಳ್ಳಲು ವಿನಂತಿಸುತ್ತೇನೆ’ ಎಂದು ಹೇಳಿದರು.
ಶ್ರೀಲಂಕಾದಲ್ಲಿ ಇಂಧನ ಬೆಲೆ ಹೆಚ್ಚಳ ಮಾಡಿದ್ದಕ್ಕಾಗಿ ಹಲವು ದಿನಗಳಿಂದ ಪ್ರಜೆಗಳು ಪ್ರತಿಭಟನೆ ನಡೆಸುತ್ತಿದ್ದು, ಹಿಂಸಾಚಾರದ ವೇಳೆ 15 ಪೊಲೀಸರು ಸಹ ಗಾಯಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.