ವಿಶ್ವಸಂಸ್ಥೆ: ದೀಪಾವಳಿ ಹಬ್ಬದ ಅಂಗವಾಗಿ ವಿಶ್ವಸಂಸ್ಥೆಯ ಅಂಚೆ ವಿಭಾಗ ಅಂಚೆ ಚೀಟಿ ಬಿಡುಗಡೆ ಮಾಡಿದೆ.
ವಿಶ್ವಸಂಸ್ಥೆಯ ಈ ನಿರ್ಧಾರಕ್ಕೆ ಭಾರತ ಧನ್ಯವಾದ ಸಲ್ಲಿಸಿದೆ.
‘ದುಷ್ಟಶಕ್ತಿಗಳ ವಿರುದ್ಧ ಸಂಘರ್ಷ ಪ್ರತಿನಿತ್ಯ ನಡೆಯುತ್ತಲೇ ಇರುತ್ತದೆ. ದುಷ್ಟಶಕ್ತಿಗಳನ್ನು ದಮನ ಮಾಡುವ ಹೋರಾಟದಲ್ಲಿ ಜಯ ಸಾಧಿಸುವ ಸಂಕೇತವಾಗಿ ಅಂಚೆ ಚೀಟಿ ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದಗಳು’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದಾರೆ.
ವಿಶ್ವಸಂಸ್ಥೆ ಪ್ರಧಾನ ಕಚೇರಿ ಕಟ್ಟಡದ ಚಿತ್ರದ ಜತೆಗೆ ದೀಪ ಬೆಳಗುತ್ತಿರುವ ಚಿತ್ರವನ್ನು ಈ ಅಂಚೆ ಚೀಟಿ ಒಳಗೊಂಡಿದ್ದು, ಶುಭಾಶಯ ಕೋರಲಾಗಿದೆ.
ಲಂಡನ್ನಲ್ಲಿ ಕಾಳಿ ಪೂಜೆ:ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಲಂಡನ್ ಉಪನಗರ ಕ್ರೊಯ್ಡಾನ್ನಲ್ಲಿ ಬುಧವಾರ ಕಾಳಿ ಪೂಜೆ ಮಾಡಲಾಯಿತು.
‘ಕ್ರೊಯ್ಡಾನ್ ಬೆಂಗಾಲಿ ಕನೆಕ್ಷನ್’ (ಸಿಬಿಸಿ) ಎನ್ನುವ ಸಂಘಟನೆ ಈ ಕಾರ್ಯಕ್ರಮ ಆಯೋಜಿಸಿತ್ತು.
ಕಾಳಿ ಪೂಜೆ ನಡೆಸಲು ರಾಣಿ ಎಲಿಜಬೆತ್– 2 ಒಪ್ಪಿಗೆ ನೀಡಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭಾಶಯ ಕೋರಿದ್ದರು.
ಇಮ್ರಾನ್, ಮೈಕ್ ಪಾಂಪಿಯೊ ಶುಭಾಶಯ:ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.
‘ಕತ್ತಲು ಕಳೆದು ಬೆಳಕು ಮೂಡಿಸುವ ಸಂಕೇತದ ಹಬ್ಬ ಇದಾಗಿದೆ. ಈ ದೀಪಾವಳಿ ಪ್ರತಿಯೊಬ್ಬರಿಗೂ ಸುಖ ಮತ್ತು ಸಂತೋಷ ನೀಡಲಿ.ಪ್ರತಿಫಲದ ನಿರೀಕ್ಷೆಯಿಲ್ಲದೇ ನಿಸ್ವಾರ್ಥ ಸೇವೆ ಸಲ್ಲಿಸಲು ಇದು ಸುಸಂದರ್ಭ’ ಎಂದು ಅವರು ತಿಳಿಸಿದ್ದಾರೆ.
ಕೆಡುಕಿನ ಮುಂದೆ ಒಳಿತಿಗೆ ಎಂದಿಗೂ ಜಯ ಸಿಗುತ್ತದೆ. ಹಾಗೆಯೇ ಕರುಣೆ ದ್ವೇಷವನ್ನು ಮರೆಸುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಸಹ ದೀಪಾವಳಿ ಶುಭಾಶಯ ಕೋರಿದ್ದಾರೆ.
‘ಎಲ್ಲ ಹಿಂದೂ ನಾಗರಿಕರಿಗೂ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.