ನ್ಯೂಯಾರ್ಕ್: ವಿಶ್ವಸಂಸ್ಥೆಗೆ 75 ತುಂಬಿದ ಸ್ಮರಣಾರ್ಥ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ಸೋಮವಾರ ಸೂಕ್ತ ತಿರುಗೇಟು ನೀಡಿದೆ.
ಇಸ್ಲಾಮಾಬಾದ್ ಭಯೋತ್ಪಾದಕರಿಗೆ ಕೇಂದ್ರಬಿಂದುವಾಗಿದೆ. ಉಗ್ರರಿಗೆ ಆಶ್ರಯ ಮತ್ತು ತರಬೇತಿ ನೀಡುವ ಭಯೋತ್ಪಾದನಾ ಕೇಂದ್ರಬಿಂದುವಾಗಿ ಜಾಗತಿಕವಾಗಿ ಗುರುತಿಸಿಕೊಂಡಿದೆ. ಭಯೋತ್ಪಾದಕರನ್ನು ಹುತಾತ್ಮರೆಂದು ಆ ದೇಶ ಕರೆಯುತ್ತದೆ. ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಪಾಕ್ ನಿರಂತರವಾಗಿ ಹಿಂಸಿಸುತ್ತದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.
ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ್ದ ಪಾಕಿಸ್ತಾನದ ವಿದೇಶಾಂಕ ಕಾರ್ಯದರ್ಶಿ ಶಾ ಮೆಹ್ಮೂದ್ ಖುರೇಶಿ ಅವರಿಗೆ ವಿಶ್ವಸಂಸ್ಥೆಯ ಭಾರತದ ಕಾರ್ಯದರ್ಶಿ ವಿಧಿಶಾ ಮೈತ್ರಾ ಭಾರತದ ಪರವಾಗಿ ತಿರುಗೇಟು ನೀಡಿದರು. ಖುರೇಶಿ ಅವರ ಹೇಳಿಕೆಯೂ ಭಾರತದ ಆಂತರಿಕ ವಿಚಾರಗಳ ಕುರಿತ ಎಂದೂ ಮುಗಿಯದ ಕಲ್ಪಿತ ನಿರೂಪಣೆ ಎಂದು ಗೇಲಿ ಮಾಡಿದರು.
ವಿಶ್ವಸಂಸ್ಥೆಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶೇಷ ಸಾಮಾನ್ಯ ಸಭೆಯ ಅಧಿವೇಶನವು ಸೋಮವಾರ ವರ್ಚುವಲ್ ಆವೃತ್ತಿಯ ಮೂಲಕ ಪ್ರಾರಂಭವಾಯಿತು.
"ಪಾಕಿಸ್ತಾನದ ಪ್ರತಿನಿಧಿ ನೀಡಿದ ಹೇಳಿಕೆಗೆ ಉತ್ತರಿಸುವ ಹಕ್ಕನ್ನು ನಾನು ಬಳಸಿಕೊಳ್ಳುತ್ತೇನೆ. ಜಾಗತಿಕ ಮೈಲಿಗಲ್ಲನ್ನು ಸ್ಮರಿಸುವ ಈ ಸಾಮಾನ್ಯ ಸಭೆಯು ಪಾಕಿಸ್ತಾನದ ಹೆಗ್ಗುರುತಾಗಿರುವ ಆಧಾರರಹಿತ ಸುಳ್ಳುಗಳ ಪುನರಾವರ್ತನೆಯಿಂದ ಹೊರತಾಗಿರುತ್ತದೆ ಎಂದು ಭಾರತದ ನಮ್ಮ ನಿಯೋಗ ನಂಬಿತ್ತು. ಆದರೆ, ಇಲ್ಲಿಯೂ ಅದು ಮುಂದುವರಿದಿದೆ,’ ಎಂದು ವಿಧಿಶಾ ಕುಹಕವಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.