ನವದೆಹಲಿ: ‘ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯ ವಿರುದ್ಧ ಹೋರಾಡುತ್ತಿರುವ ವಿಚಾರದಲ್ಲಿ ನಾವ್ಯಾರೂ ಯಾವುದೇ ದೇಶ ಅಥವಾ ಸರ್ಕಾರಗಳ ಕೈಗೊಂಬೆಯಲ್ಲ’ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ ತೆರವಿಗಾಗಿ ಹೋರಾಡಲು ಎನ್ಸಿ ಸೇರಿದಂತೆ ಆರು ಪಕ್ಷಗಳು ಸಂಘಟಿತರಾಗಿ ಗುಪ್ಕರ್ ನಿವಾಸದಲ್ಲಿ ಕೈಗೊಂಡ ನಿರ್ಣಯ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ನೀಡಿರುವ ಹೇಳಿಕೆಗೆ ಫಾರೂಕ್ ಅಬ್ದುಲ್ಲಾ ಅವರು ಹೀಗೆ ತೀಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಶೇಷ ಸ್ಥಾನಮಾನದ ತೆರವಿನ ವಿರುದ್ಧದ ಹೋರಾಟಕ್ಕಾಗಿನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಕಾಂಗ್ರೆಸ್ ಸೇರಿದಂತೆ ಆರು ಪಕ್ಷಗಳು ಆಗಸ್ಟ್ 5ರಂದು ಸಭೆ ಸೇರಿ ತೆಗೆದುಕೊಂಡ ನಿರ್ಣಯ ಕುರಿತು ಪಾಕ್ ವಿದೇಶಾಂಗ ಸಚಿವರು, ‘ಇದು ಸಾಧಾರಣ ಘಟನೆಯಲ್ಲ, ಬಹಳ ಪ್ರಮುಖವಾದ ಬೆಳವಣಿಗೆ‘ ಎಂದಿದ್ದರು.
ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಫಾರೂಕ್ ಅಬ್ದುಲ್ಲಾ, ‘ಶಸ್ತ್ರಸಜ್ಜಿತ ಯೋಧರನ್ನು ಕಾಶ್ಮೀರಕ್ಕೆ ಕಳುಹಿಸುವುದನ್ನು ನಿಲ್ಲಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸುತ್ತೇವೆ. ಕಾಶ್ಮೀರದಲ್ಲಿ ರಕ್ತಪಾತ ಕೊನೆಯಾಗಬೇಕೆಂದು ಬಯಸುತ್ತೇವೆ. ಇದಕ್ಕಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳು ಹೋರಾಟ ನಡೆಸಲು ಸಿದ್ಧವಾಗಿವೆ’ ಎಂದು ಹೇಳಿದ್ದಾರೆ.
‘ಕದನ ವಿರಾಮ ಉಲ್ಲಂಘನೆ ಆದಾಗಲೆಲ್ಲಾ ನಮ್ಮ ಜನರು ನಿಯಂತ್ರಣ ರೇಖೆಯ ಎರಡೂ ಬದಿಗಳಲ್ಲಿ ಹತರಾಗುತ್ತಿದ್ದಾರೆ. ದೇವರ ಸಲುವಾಗಿ ಅದನ್ನು ನಿಲ್ಲಿಸಿ’ ಎಂದು ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.