ಸಿದ್ಧಾಂತಗಳು ಅಭಿಪ್ರಾಯಗಳಾಗಿ, ಪೂರ್ವಗ್ರಹಗಳು ವಿಶ್ಲೇಷಣೆಗಳಾಗಿ ವಿಜೃಂಭಿಸುತ್ತಿರುವುದನ್ನು ಕೆಲವೊಂದು ಮಾಧ್ಯಮಗಳಲ್ಲಿ ದೊಡ್ಡದಾಗಿ ಕಾಣುತ್ತಿರುವ ಕಾಲ ಇದು. ಸಾರ್ವಜನಿಕ ಹಿತಕ್ಕಿಂತ ಇಲ್ಲಿರುವುದು ಲಾಭ ಗಳಿಸುವ ದೃಷ್ಟಿ. ನಾಗರಿಕರನ್ನು ಗ್ರಾಹಕರಾಗಿ ಕಾಣುವ ಪ್ರವೃತ್ತಿ ಇದು. ಸುದ್ದಿ ಹಾಗೂ ರಂಜನೆಯನ್ನು ಮಿಳಿತಗೊಳಿಸಿ ‘ಇನ್ಫೋಟೇನ್ಮೆಂಟ್’ ಎಂಬ ಹೊಸ ಪ್ರಕಾರವನ್ನು ಸೃಷ್ಟಿಸುವ ಧಾವಂತದಲ್ಲಿ ಸುದ್ದಿ ನಿರೂಪಿಸುವವರು ಪತ್ರಕರ್ತರೆನ್ನುವುದಕ್ಕಿಂತ ಪಾತ್ರಧಾರಿಗಳಾಗಿ ಅಭಿನಯವೇ ಮೇಲುಗೈ ಪಡೆಯುತ್ತಿರುವ ಸಂದರ್ಭ ಇದು. ಇಂತಹ ದೂರುಗಳು ಮಾಧ್ಯಮಲೋಕದ ಕುರಿತಾಗಿ ಇತ್ತೀಚಿನ ವರ್ಷಗಳಲ್ಲಿ ಕೇಳಿಬರುತ್ತಿರುವುದು ಮಾಮೂಲು.
ಇದೇ ಸಂದರ್ಭದಲ್ಲೇ, ಕೆಲವೊಂದು ಸುದ್ದಿವಾಹಿನಿಗಳು ನರೇಂದ್ರ ಮೋದಿಯವರನ್ನು ಉದ್ದೇಶಪೂರ್ವಕವಾಗಿ ಬಿಂಬಿಸುತ್ತಿರುವುದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ಎಎಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಈ ವಿಚಾರದ ತನಿಖೆ ನಡೆಸಿ ಮಾಧ್ಯಮ ವ್ಯಕ್ತಿಗಳನ್ನೂ ಜೈಲಿಗೆ ಹಾಕಲಾಗುವುದು ಎಂಬಂತಹ ಕೇಜ್ರಿವಾಲ್ ಅವರ ಅತಿರೇಕದ ಹೇಳಿಕೆ ವಿವಾದವನ್ನೇ ಸೃಷ್ಟಿಸಿತು.
ಈ ಬಗ್ಗೆ ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್ (ಎನ್ ಬಿಎ), ಎಡಿಟರ್ಸ್ ಗಿಲ್ಡ್ ಹಾಗೂ ಬ್ರಾಡ್ ಕಾಸ್ಟ್ ಎಡಿಟರ್ಸ್ ಅಸೋಸಿಯೇಷನ್ (ಬಿಇಎ) ಪ್ರತಿಕ್ರಿಯೆಗಳನ್ನೂ ನೀಡಿದವು. ಕೇಜ್ರಿವಾಲ್ ಹಾಗೂ ಎಎಪಿಯ ಸುದ್ದಿಗಳನ್ನು ಬಹಿಷ್ಕರಿಸುವುದಾಗಿ ಖಾಸಗಿ ಸಂಘವಾಗಿರುವ ಎನ್ ಬಿಎ ಬೆದರಿಕೆ ಒಡ್ಡಿತು. ನಂತರ, ಸುದ್ದಿವಾಹಿನಿಗಳ ವಿರುದ್ಧದ ಆರೋಪಗಳನ್ನು ಅಲ್ಲಗಳೆದು ವಸ್ತುನಿಷ್ಠತೆ ಬಗೆಗಿನ ತನ್ನ ಬದ್ಧತೆಯನ್ನು ಪ್ರತಿಪಾದಿಸಿಕೊಳ್ಳಲು ಪ್ರಯತ್ನಿಸಿತು.
ಮಾಧ್ಯಮ ಕುರಿತಂತೆ ಕೇಜ್ರಿವಾಲ್ ಅವರ ಬೇಜವಾಬ್ದಾರಿಯುತ ಹೇಳಿಕೆಯನ್ನು ಬಿಇಎ ಸಹ ಖಂಡಿಸಿತು. ಯಾರೇ ವ್ಯಕ್ತಿ ಅಥವಾ ಪಕ್ಷದ ಪರವಾಗಿ ಪೂರ್ವಗ್ರಹಪೀಡಿತ ಕಾರ್ಯಸೂಚಿಯನ್ನು ಟಿವಿ ಚಾನೆಲ್ ಗಳು ಅನುಸರಿಸುತ್ತಿವೆ ಎಂಬುದು ಸರಿಯಲ್ಲ ಎಂದು ಬಿಇಎ ಹೇಳಿತು.
ಚುನಾವಣೆಗಳು ಸನಿಹದಲ್ಲಿರುವಾಗ ಇಂತಹ ವಾಗ್ದಾಳಿಗಳ ಭರಾಟೆ ಹೆಚ್ಚುವುದು ಸಹಜ. ಈ ಹಿಂದೆ ಮಾಧ್ಯಮಗಳಲ್ಲಿ ಸಾಕಷ್ಟು ಸಕಾರಾತ್ಮಕ ಗಮನ ಸೆಳೆದುಕೊಂಡಿದ್ದ ಕೇಜ್ರಿವಾಲ್ ನಂತರದ ದಿನಗಳಲ್ಲಿ ಟೀಕೆಗಳಿಗೂ ಗುರಿಯಾಗಿದ್ದರು. ಸಾರ್ವಜನಿಕ ವಾಗ್ವಾದಗಳಲ್ಲಿನ ಶಿಷ್ಟಾಚಾರ, ಪ್ರಾಮಾಣಿಕತೆ ಮತ್ತು ಬದ್ಧತೆ ಕುಸಿಯುತ್ತಿರುವುದರ ಸಂಕೇತ ಇದು. ಯಾವುದೇ ಬಗೆಯ ಸರಳೀಕರಣ ಸತ್ಯದ ಪೂರ್ಣ ಮುಖವನ್ನು ಅನಾವರಣಗೊಳಿಸುವುದು ಅಸಾಧ್ಯ. ಸಾರಾಸಗಟಾಗಿ ಮಾಧ್ಯಮಗಳನ್ನು ಅಲ್ಲಗಳೆಯುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಪೂರ್ಣವಾಗಿ ಎಲ್ಲವೂ ಸರಿ ಇದೆ ಎಂದು ಹೇಳುವ ಸ್ಥಿತಿಯೂ ಸದ್ಯಕ್ಕೆ ಇಲ್ಲ. ಹಲವು ಮಾಧ್ಯಮ ಸಂಸ್ಥೆಗಳ ಅದರಲ್ಲೂ ವಿಶೇಷವಾಗಿ ಟೆಲಿವಿಷನ್ ವಾಹಿನಿಗಳ ರಾಜಕೀಯ ಹಾಗೂ ವಾಣಿಜ್ಯ ಹಿತಾಸಕ್ತಿಗಳು ಎಲ್ಲರಿಗೂ ಗೊತ್ತಿರುವಂತಹದ್ದೇ.
16ನೇ ಲೋಕಸಭೆ ಚುನಾವಣೆಗಳಿಗೆ ರಾಷ್ಟ್ರ ಸನ್ನದ್ಧವಾಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಚುನಾವಣೆಗಳಿಗೆ ಸಂಬಂಧಿಸಿದ ವರದಿಗಾರಿಕೆಯಲ್ಲಿ ಪೂರ್ವಗ್ರಹಗಳಿಲ್ಲದ ವಸ್ತುನಿಷ್ಠ ವರದಿಗಾರಿಕೆ ಎಷ್ಟರಮಟ್ಟಿಗೆ ಕಂಡು ಬರುತ್ತಿದೆ? ಎಂಬಂತಹ ಪ್ರಶ್ನೆಗಳನ್ನು ತಜ್ಞರು ಎತ್ತಿದ್ದಾರೆ. ರಾಜಕೀಯ ವಾಗ್ವಾದ ಎಂಬುದು ಮಾಧ್ಯಮಗಳಲ್ಲಿ ಕೇವಲ ಕಾಂಗ್ರೆಸ್ ನಾಯಕತ್ವದ ಕೊರತೆ ಹಾಗೂ ಗುಜರಾತ್ ಮಾದರಿಯ ಅಭಿವೃದ್ಧಿಗೆ ಸೀಮಿತವಾಗಿ ಬಿಟ್ಟಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿವೆ. ಅಮೆರಿಕದ ಸಮಾಜವಿಜ್ಞಾನಿ ನೋಮ್ ಚಾಮ್ ಸ್ಕಿ ಅವರ ‘ಒಮ್ಮತವನ್ನು ತಯಾರಿಸುವುದು’ (ಮ್ಯಾನುಫ್ಯಾಕ್ಚರಿಂಗ್ ಕನ್ ಸೆಂಟ್) ಸಿದ್ಧಾಂತವನ್ನು ಈ ಸಂದರ್ಭಕ್ಕೆ ಅನ್ವಯಿಸಲಾಗಿದೆ. ವಾಸ್ತವವಾಗಿ ಅಮೆರಿಕದ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಈ ಸಿದ್ಧಾಂತವನ್ನು ನೋಮ್ ಚಾಮ್ ಸ್ಕಿ ಅನ್ವಯಿಸಿದ್ದರು.
‘ಮ್ಯಾನುಫ್ಯಾಕ್ಚರಿಂಗ್ ಕನ್ ಸೆಂಟ್: ದಿ ಪೊಲಿಟಿಕಲ್ ಇಕಾನಮಿ ಆಫ್ ದಿ ಮಾಸ್ ಮೀಡಿಯಾ’ ಪುಸ್ತಕದಲ್ಲಿ ನೋಮ್ ಚಾಮ್ ಸ್ಕಿ ಹಾಗೂ ಎಡ್ವರ್ಡ್ ಎಸ್ ಹರ್ಮನ್ ಅವರು ಐದು ‘ಫಿಲ್ಟರ್’ಗಳ (ಜರಡಿ ಅಥವಾ ಶೋಧಕ) ಕುರಿತು ಹೇಳುತ್ತಾರೆ. ಈ ಜರಡಿಗಳಿಂದ ಹಾದು ಹೊರಬಂದ ನಂತರ, ರಸ ಹೀನ ‘ಹಿಪ್ಪೆ’ಯನ್ನು ಅಮೆರಿಕ ಮಾಧ್ಯಮ ಪ್ರಕಟಿಸುತ್ತದೆ ಎಂಬುದು ಚಾಮ್ ಸ್ಕಿ ಅವರ ವಾದ. ಸುದ್ದಿ ವರದಿಗಾರಿಕೆಗೆ ಅಳವಡಿಸಿಕೊಳ್ಳುವ ಈ ಐದು ಜರಡಿಗಳಾದರೂ ಯಾವುವು? ಮೊದಲನೆಯದಾಗಿ ಮಾಲೀಕರ ಲಾಭದ ದೃಷ್ಟಿ.
ಎರಡನೆಯದು ಜಾಹೀರಾತುದಾರರ ರಾಜಕೀಯ ಹಿತಾಸಕ್ತಿ ಹಾಗೂ ಆರ್ಥಿಕ ಅಪೇಕ್ಷಗಳಿಗೆ ಪೂರಕವಾಗುವ ಪೂರ್ವಗ್ರಹ. ಮೂರನೆಯದು ಅಧಿಕಾರಶಾಹಿ ಸುದ್ದಿಮೂಲಗಳ ಜೊತೆಗೆ ವಿಶೇಷ ಸಂಬಂಧ ಕಾಪಾಡಿಕೊಳ್ಳುವುದು. ನಾಲ್ಕನೆಯದು, ಜಾಹೀರಾತು ನಷ್ಟ ಅಥವಾ ಕಾನೂನು ಹೋರಾಟದ ಖರ್ಚು ಹೆಚ್ಚಿಸುವ ತೀವ್ರ ಟೀಕೆಗಳು ಬರದಂತೆ ಎಚ್ಚರ ವಹಿಸುವುದು. ಐದನೆಯದು ಕಮ್ಯುನಿಸಂ ವಿರೋಧ. ಶೀತಲ ಸಮರ ಅಂತ್ಯದ ನಂತರ ಇದು ‘ಭಯೋತ್ಪಾದನೆ ವಿರುದ್ಧದ ಸಮರ’ ಎಂದು ಬದಲಾಗಿದೆ ಎಂದು ಚಾಮ್ ಸ್ಕಿ ವಾದಿಸುತ್ತಾರೆ.
ಈ ಐದೂ ಜರಡಿಗಳಲ್ಲಿ ಸುದ್ದಿ ವರದಿಗಾರಿಕೆಯನ್ನು ಸೋಸಲಾಗುತ್ತದೆ. ಹೀಗಾಗಿ ಮಾರುಕಟ್ಟೆ ಶಕ್ತಿಗಳೊಂದಿಗೆ ವ್ಯವಸ್ಥೆಯನ್ನು ಬೆಂಬಲಿಸುವ ಪ್ರಚಾರ ಸಾಧನಗಳಾಗಿವೆ ಅಮೆರಿಕದ ಮುಖ್ಯವಾಹಿನಿ ಮಾಧ್ಯಮಗಳು ಎಂಬುದು ಚಾಮ್ ಸ್ಕಿ ವಾದ. ಈ ಸಿದ್ಧಾಂತವನ್ನು ಈಗಿನ ಚುನಾವಣಾ ಸಂದರ್ಭಕ್ಕೆ ಅನ್ವಯಿಸುವುದು ಸಾಧ್ಯ. ಸರ್ಕಾರದ ವಿರುದ್ಧ ವಿರೋಧವನ್ನು ‘ತಯಾರಿಸಿ’ ನಂತರ ಮೋದಿ ಪರ ಕಾರ್ಪೊರೇಟ್ ಬೆಂಬಲಿತ ಕಾರ್ಯಸೂಚಿ ಪ್ರಚಾರ ಮಾಡುವುದು ಸದ್ಯದ ವಿದ್ಯಮಾನವಾಗಿದೆ ಎಂಬಂತಹ ವಿಶ್ಲೇಷಣೆಗಳನ್ನು ಮುಂದಿಡ ಲಾಗಿದೆ.
2004ರಲ್ಲಿ ‘ಇಂಡಿಯಾ ಷೈನಿಂಗ್’ ಪ್ರಚಾರಾಂದೋಲನ ಮಾಧ್ಯಮಗಳಲ್ಲಿ ತುಂಬಿತ್ತು. ಆದರೆ ಚುನಾವಣಾ ಫಲಿತಾಂಶಗಳು ಬಂದಾಗ ಕಾಂಗ್ರೆಸ್ ಮುಂಚೂಣಿಯಲ್ಲಿದ್ದು ಯುಪಿಎ ಅಧಿಕಾರಕ್ಕೆ ಬಂತು ಎಂಬುದನ್ನು ಮರೆಯಲಾಗದು. ವರದಿಗಾರಿಕೆಯ ವಿಶ್ವಾಸಾರ್ಹತೆಯ ಪ್ರಶ್ನೆಗಳನ್ನು ಈ ವಿದ್ಯಮಾನ ಮುಂದಿಟ್ಟಿತ್ತು. ವರದಿಗಾರಿಕೆಯ ವಿಶ್ವಾಸಾರ್ಹತೆ, ನೀತಿ ಸಂಹಿತೆಯಂತಹ ವಿಚಾರಗಳು ಮಾಧ್ಯಮ ಲೋಕದಲ್ಲಿ ಆಗಾಗ್ಗೆ ಚರ್ಚೆಗೊಳಪಡುತ್ತಲೇ ಇರುತ್ತವೆ.
ರಕ್ಷಣಾ ಇಲಾಖೆಯಲ್ಲಿನ ಅವ್ಯವಹಾರಗಳನ್ನು ‘ತೆಹೆಲ್ಕಾ’ ಪತ್ರಿಕೆ ಬಹಿರಂಗಗೊಳಿಸಿದ ರೀತಿ (ಸ್ಟಿಂಗ್ ಪತ್ರಿಕೋದ್ಯಮ), ತನಿಖಾ ಪತ್ರಿಕೋದ್ಯಮದಲ್ಲಿ ನೀತಿ ಸಂಹಿತೆಯ ಪ್ರಮುಖ ಚರ್ಚೆಯನ್ನು ಹುಟ್ಟು ಹಾಕಿದುದನ್ನು ಮರೆಯುವಂತಿಲ್ಲ. ನಂತರದ ದಿನಗಳಲ್ಲಿ ಹೆಣ್ಣು ಭ್ರೂಣಗಳ ಲಿಂಗ ಪತ್ತೆಗಾಗಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಯಂತ್ರಗಳನ್ನು ಬಳಸುವ ವೈದ್ಯರ ಅಕ್ರಮ ದಂಧೆಯನ್ನು ಬಯಲುಗೊಳಿಸಲು, ತಮ್ಮ ಗುರುತು ಮರೆಮಾಚಿ ಮಾಹಿತಿಗಳನ್ನು ಪಡೆಯುವಂತಹ ತಂತ್ರಗಳನ್ನು ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೆಲವು ಪತ್ರಕರ್ತರಷ್ಟೇ ಅಲ್ಲ ಮಹಿಳಾ ಹೋರಾಟಗಾರರೂ ಬಳಸಿಕೊಂಡಿದ್ದರು. ವೈದ್ಯರನ್ನು ತಮ್ಮ ಬಲೆಗೆ ಬೀಳಿಸಲೆಂದೇ ಗರ್ಭಿಣಿ ಮಹಿಳೆ(ಡೀಕಾಯ್) ಯೊಬ್ಬರನ್ನು ಜೊತೆಯಲ್ಲಿ ಕರೆದೊಯ್ದು ಮಾಹಿತಿಯನ್ನು ಪಡೆಯುವ ಪ್ರಯತ್ನ ಇಲ್ಲಿರುತ್ತಿತ್ತು.
ಕೈಚೀಲಗಳಲ್ಲಿ ಅಡಗಿಸಿಟ್ಟ ಟೇಪ್ ರೆಕಾರ್ಡರ್ ಹಾಗೂ ಕ್ಯಾಮ್ ಕಾರ್ಡರ್ (ದೃಶ್ಯ–ಶ್ರವ್ಯಗಳನ್ನು ಸೆರೆ ಹಿಡಿಯುವ ಪುಟ್ಟ ಸಾಧನ)ಗಳಲ್ಲಿ ಸಂದರ್ಶನದ ವಿವರಗಳನ್ನು ರೆಕಾರ್ಡ್ ಮಾಡಲಾಗುತ್ತಿತ್ತು. ವೈದ್ಯರ ಕುಕೃತ್ಯವನ್ನು ಬಯಲಿಗೆಳೆಯಲು ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಬಳಸಿದ ಈ ವಿಧಾನ ಎಷ್ಟರ ಮಟ್ಟಿಗೆ ಸರಿ ಎಂಬ ವಿಚಾರಗಳು ಆಗ ಚರ್ಚೆಯಾಗಿದ್ದವು. ಆದರೆ ಇಂತಹ ರಹಸ್ಯ ಕಾರ್ಯಾಚರಣೆಗೆ ಸಾರ್ವಜನಿಕ ಹಿತವೇ ಪ್ರೇರಣೆ ಎಂಬುದು ಸಂಪಾದಕರಿಗೆ ಮನವರಿಕೆ ಆಗಿರಬೇಕು ಎಂಬುದು ಪ್ರೆಸ್ ಕೌನ್ಸಿಲ್ ಮಾರ್ಗಸೂಚಿಗಳಲ್ಲಿದೆ. ಸುಪ್ರೀಂಕೋರ್ಟ್ ಕೂಡ ಈ ಕ್ರಮಕ್ಕೆ ಮಾನ್ಯತೆ ನೀಡಿದೆ. ಹಾಗೆಯೇ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಲು ಫೋನ್ ನಲ್ಲಿರುವ ಆಡಿಯೊ, ವಿಡಿಯೊ ಬಳಕೆ ಮಾಡಿಕೊಳ್ಳಬೇಕೆಂದು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರೂ ಹೇಳಿದ್ದುದನ್ನು ನೆನಪಿಸಿಕೊಳ್ಳಬಹುದು.
‘ತೆಹೆಲ್ಕಾ’ ನಂತರ ರಾಡಿಯಾ ಟೇಪ್ ಗಳ ಹಗರಣ ಮಾಧ್ಯಮದ ನೀತಿ ಸಂಹಿತೆ ಕುರಿತ ಚರ್ಚೆಯನ್ನು ಮತ್ತೊಂದು ಮಜಲಿಗೆ ಒಯ್ದಿತ್ತು. ವಾಣಿಜ್ಯ ಪತ್ರಿಕೋದ್ಯಮದ ಹುಳುಕುಗಳು, ವೃತ್ತಿಪರತೆ ಹಾಗೂ ನೈತಿಕ ವಿಶ್ವಾಸಾರ್ಹತೆಯ ಕೊರತೆಯನ್ನು ಇದು ಬಯಲಿಗೆಳೆದಿತ್ತು.
ತೆಹೆಲ್ಕಾ ‘ಸ್ಟಿಂಗ್’ ಕಾರ್ಯಾಚರಣೆ, ವ್ಯವಸ್ಥೆಯೊಳಗಿನ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದೇನೋ ಸರಿ. ಆದರೆ ಗುರಿ ಸರಿ ಇದ್ದಾಗ ಅದಕ್ಕಾಗಿ ತುಳಿಯುವ ಯಾವುದೇ ಮಾರ್ಗ ಸರಿಯೆ ಎಂಬಂತಹ ನೈತಿಕ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದೂ ನಿಜ. ಏಕೆಂದರೆ ನಂತರದ ಕೆಲವು ‘ಸ್ಟಿಂಗ್’ ಕಾರ್ಯಾಚರಣೆಗಳು ಶಿಕ್ಷಾ ಭಯವಿಲ್ಲದ ಸಂಸ್ಕೃತಿಗೆ ಮಾದರಿಯಾಗಿದ್ದವು.
ವೃತ್ತಿಪರತೆಯ ಗುಣಮಟ್ಟವೂ ಪಾತಾಳಕ್ಕಿಳಿದ ನಿದರ್ಶನಗಳಿವೆ. ಶಾಲಾ ವಿದ್ಯಾರ್ಥಿನಿಯರನ್ನು ಲೈಂಗಿಕ ದಾಸ್ಯಕ್ಕೆ ಒದಗಿಸುವ ಜಾಲದ ಭಾಗವಾಗಿದ್ದರೆಂದು ದೆಹಲಿ ಅಧ್ಯಾಪಕಿ ಉಮಾ ಖುರಾನಾ ಮೇಲೆ ಸುಳ್ಳು ಆರೋಪ ಹೊರಿಸಿದ ಪ್ರಕರಣ ಇದಕ್ಕೆ ಒಂದು ಉದಾಹರಣೆ. ಬ್ರಿಟನ್ ನ ‘ನ್ಯೂಸ್ ಆಫ್ ದಿ ವರ್ಲ್ಡ್’ ಫೋನ್ ಹ್ಯಾಕಿಂಗ್ ಹಗರಣವಂತೂ ಮಾಧ್ಯಮ, ಪೊಲೀಸ್ ಹಾಗೂ ರಾಜಕಾರಣಿಗಳ ನಡುವಿನ ಅಪವಿತ್ರ ಮೈತ್ರಿಗೆ ದೊಡ್ಡ ಉದಾಹರಣೆ. ಸ್ವಯಂ ನಿಯಂತ್ರಣದ ವ್ಯವಸ್ಥೆಯ ವೈಫಲ್ಯಕ್ಕೂ ಇದು ದೊಡ್ಡ ಪ್ರತೀಕ.
‘ದಿ ಮ್ಯಾಂಚೆಸ್ಟರ್ ಗಾರ್ಡಿಯನ್’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಸಿ. ಪಿ. ಸ್ಕಾಟ್ ಹೇಳಿದ ಮಾತುಗಳಿವು: ‘ಸುದ್ದಿ ಎಂಬುದು ಪವಿತ್ರವಾದದ್ದು, ಆದರೆ ಅಭಿಪ್ರಾಯ ಮುಕ್ತವಾದುದು’. ಮುದ್ರಿತ ರೂಪದಲ್ಲಿರುವ ಸುದ್ದಿ ಪರಮ ಸತ್ಯ ಹಾಗೂ ಆಡು ನುಡಿಗಿಂತ ಹೆಚ್ಚು ಶಕ್ತವಾದದ್ದು ಎಂಬ ಭಾವನೆ ಭಾರತದಲ್ಲಿ ಯಾವಾಗಲೂ ಇತ್ತು. ಆದರೆ ಈಗ ಅಂತಹ ಸನ್ನಿವೇಶ ಇದೆಯೇ ಎಂಬುದರ ಆತ್ಮಾವಲೋಕನ ಅಗತ್ಯ.
ಅಮರ್ತ್ಯ ಸೇನ್ ಅವರಂತೂ ಪದೇ ಪದೇ ಹೇಳಿದ್ದಾರೆ: ‘ಪ್ರಜಾಪ್ರಭುತ್ವದಲ್ಲಿ ಎಂದೂ ದೊಡ್ಡ ಕ್ಷಾಮ ಉಂಟಾಗುವುದಿಲ್ಲ. ಏಕೆಂದರೆ ಜಾಗೃತ ಮಾಧ್ಯಮಗಳು ಸರ್ಕಾರದ ಆಡಳಿತ ಯಂತ್ರ ಸದಾ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಕ್ಷಾಮವನ್ನು ತಡೆಗಟ್ಟಲು ಪ್ರಜಾಪ್ರಭುತ್ವವೇ ಅತ್ಯುತ್ತಮ ಮಾರ್ಗ. ಇದನ್ನು ಜೀವಂತವಾಗಿರಿಸುವುದು ಮುಕ್ತ ಪತ್ರಿಕೋದ್ಯಮ.
ಸ್ವಾತಂತ್ರ್ಯಾನಂತರದ ದಿನಗಳ ಅನುಭವ ಇದನ್ನು ದೃಢ ಪಡಿಸುತ್ತದೆ. ಬ್ರಿಟಿಷ್ ಆಡಳಿತದ ಅವಧಿಯಲ್ಲಿ, ರಾಷ್ಟ್ರಕ್ಕೆ ಸ್ವಾತಂತ್ರ್ಯ ಬರುವವರೆಗೂ ಕ್ಷಾಮ ಎಂಬುದು ಭಾರತವನ್ನು ಕಾಡುತ್ತಲೇ ಇತ್ತು. ಆದರೆ ನಂತರ ಬಹುಪಕ್ಷಗಳ ಪ್ರಜಾಪ್ರಭುತ್ವ ಹಾಗೂ ಮುಕ್ತ ಪತ್ರಿಕೆಗಳಿಂದ ಇದು ಕಾಣೆಯಾಯಿತು’ ಎಂಬುದು ಅವರ ವಾದ.
ಆದರೆ ಇಂದಿನ ಪತ್ರಿಕೋದ್ಯಮ ಎಷ್ಟರ ಮಟ್ಟಿಗೆ ಕ್ರಿಯಾಶೀಲವಾಗಿದೆ? ‘ಬ್ರೇಕಿಂಗ್ ನ್ಯೂಸ್’ನ ಈ ಕಾಲದ ಪತ್ರಿಕೋದ್ಯಮ ಬರೀ ಘಟನೆಗಳನ್ನಾಧರಿಸಿದ್ದಾಗಿದೆ. ಪ್ರಕ್ರಿಯೆಯಾಗಿ ಇಡಿಯಾಗಿ ಪರಿಭಾವಿಸುವ ದೃಷ್ಟಿಕೋನವೇ ಮರೆಯಾಗುತ್ತಿರುವುದು ಎದ್ದು ಕಾಣುತ್ತದೆ. ಹೂರಣವಿಲ್ಲದ ಮೇಲ್ಪದರದ ಮಾಹಿತಿಯಲ್ಲಿ ಚಿಕಿತ್ಸಕ ಮನೋಭಾವ, ವಿಮರ್ಶಾತ್ಮಕ ಒಳನೋಟ ಹಾಗೂ ಚಾರಿತ್ರಿಕ ದೃಷ್ಟಿಯ ಕೊರತೆ ಎದ್ದು ಕಾಣಿಸುತ್ತಿರುತ್ತದೆ. ಫೀಲ್ಡ್ ಗಳಿಗೆ ವರದಿಗಾರರು ಹೋಗುವುದಕ್ಕಿಂತ ಹೆಚ್ಚಾಗಿ ಟಿವಿ ಸ್ಟುಡಿಯೊಗಳಿಂದಲೇ ಸುದ್ದಿಗಳ ತಯಾರಿಕೆ ಪ್ರವೃತ್ತಿ ಹೆಚ್ಚಾಗಿದೆ.
ಊಹಾಪೋಹಗಳನ್ನೇ ವಾಸ್ತವವೆಂಬಂತೆ ಬಿಂಬಿಸುವ ಅತಿರಂಜಿತ ವರದಿಗಾರಿಕೆ, ಕಾಸಿಗಾಗಿ ಸುದ್ದಿ, ಅವೈಜ್ಞಾನಿಕ ಹಾಗೂ ತಪ್ಪುದಾರಿಗೆಳೆಯುವ ಸಮೀಕ್ಷೆಗಳಂತಹ ಕಪ್ಪು ಚುಕ್ಕೆಗಳು ಮಾಧ್ಯಮಗಳ ವಿಶ್ವಾಸಾರ್ಹತೆಗೆ ಕುಂದಾಗುತ್ತಿವೆ ಎಂಬಂತಹ ಟೀಕೆಗಳನ್ನು ಮಾಧ್ಯಮಲೋಕ ಎದುರಿಸುತ್ತಿದೆ. ಆದರೆ ಟೀಕೆಟಿಪ್ಪಣಿ, ವಿಮರ್ಶೆಗಳನ್ನು ಮಾಧ್ಯಮಲೋಕ ಸರಿಯಾದ ನೆಲೆಗಳಲ್ಲಿ ಗ್ರಹಿಸಿರುವಂತಹ ಪರಂಪರೆಯೂ ಭಾರತದಲ್ಲಿದೆ ಎಂಬುದೇ ಸಮಾಧಾನಕರ. ಇಂತಹದೊಂದು ಮುಕ್ತತೆ, ಸರಿಯಾದ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯಕ್ಕೆ ಪೂರಕವಾಗುವಂತಹದ್ದು. ಮಾಹಿತಿ ಎನ್ನುವುದು ಜನರನ್ನು ಸಶಕ್ತರನ್ನಾಗಿಸುತ್ತದೆ. ಜನರನ್ನು ಸಶಕ್ತರನ್ನಾಗಿಸುವುದೇ ಮಾಧ್ಯಮದ ಬಲ.
ಮಾಧ್ಯಮ ಎಂಬುದು ಇತರ ವಾಣಿಜ್ಯ ಉಧ್ಯಮಗಳಂತಲ್ಲ. ಸಮಾಜದ ಪ್ರವರ್ಧನೆಗೆ ಅದು ಪ್ರಶ್ನೆಗಳನ್ನು ಕೇಳುತ್ತಲೇ ಇರಬೇಕು. ಇದಕ್ಕಾಗಿಯೇ ನಮ್ಮ ಸಂವಿಧಾನ ಹಾಗೂ ವಿಶ್ವದ ಇತರ ರಾಷ್ಟ್ರಗಳಲ್ಲೂ ಪತ್ರಿಕಾ ಸ್ವಾತಂತ್ರ್ಯವನ್ನು ನೀಡಲಾಗಿದೆ. ಆದರೆ ಈ ಸ್ವಾತಂತ್ರ್ಯದ ಬಳಕೆಯಲ್ಲಿ ಸ್ವಯಂ ನಿಯಂತ್ರಣ ಬೇಕು ಎಂಬ ಪಾಠ ಮಾತ್ರ ಮರೆಯಬಾರದು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.