ಹುಬ್ಬಳ್ಳಿ, ಫೆ. 21– ರಾಜ್ಯದ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಶುಲ್ಕ ಸಂಗ್ರಹ (ಸೆಸ್ ಕಲೆಕ್ಷನ್) ಹೊಣೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಪರಿ
ಶೀಲಿಸುತ್ತಿದೆ ಎಂದು ಕೃಷಿ ಮಾರುಕಟ್ಟೆ ರಾಜ್ಯ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಶೇಕಡ 50ರಷ್ಟು ಸೋರಿಕೆ ಉಂಟಾಗಿರುವುದರಿಂದ ‘ಸೆಸ್ ಕಲೆಕ್ಷನ್’ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿಕೊಡುವ ಸಂಬಂಧ ತಜ್ಞರೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುವುದು ಎಂದರು.
ದಲ್ಲಾಳಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಾಗಿರುವ ಮಾರುಕಟ್ಟೆ ಶುಲ್ಕದ ಮೊತ್ತದಲ್ಲಿ ಭಾರೀ ಪ್ರಮಾಣದ ನಷ್ಟ ಉಂಟು ಮಾಡಿದ್ದಾರೆ. ಈ ವರ್ಷ ಕೇವಲ 70 ಕೋಟಿ ಸೆಸ್ ಹಣ ಸಂಗ್ರಹವಾಗಿದೆ ಎಂದ ಅವರು, ಖಾಸಗಿಯವರಿಗೆ ಈ ಜವಾಬ್ದಾರಿ ಹೊರಿಸುವುದರಿಂದ ಎರಡು ಪಟ್ಟು ‘ಸೆಸ್’ ಸಂಗ್ರಹವಾಗುವ ಆಶಯ ವ್ಯಕ್ತಪಡಿಸಿದರು.
ಹುಬ್ಬಳ್ಳಿ, ಫೆ. 21– ರೈತರು ಬೆಳೆದ ತರಕಾರಿ, ಹಣ್ಣು, ಹಂಪಲುಗಳನ್ನು ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ‘ರೈತ ಬಜಾರ್’ ಅನ್ನು ಹುಬ್ಬಳ್ಳಿಯಲ್ಲಿ ಮಾರ್ಚ್ ತಿಂಗಳಿಂದ ಆರಂಭಿಸಲಾಗುವುದು ಎಂದು ರಾಜ್ಯ ಕೃಷಿ ಮಾರುಕಟ್ಟೆ ಸಚಿವ ಆರ್.ಬಿ. ತಿಮ್ಮಾಪುರ ಇಂದಿಲ್ಲಿ ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ಹೊಲಗಳಿಂದ ಮಾರುಕಟ್ಟೆಗೆ ತಂದು ಗ್ರಾಹಕರಿಗೆ ಮುಟ್ಟಿಸುವಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ‘ರೈತ ಬಜಾರ್’ಗಳನ್ನು ಆರಂಭಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.