ADVERTISEMENT

‘ಯಾರಿಗ್ಯಾರೂ ಅಡ್ಡ ಮಾಡ್ಕೊಳ್ಳೋದು ಬ್ಯಾಡ್ರೀ..!’

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2018, 18:32 IST
Last Updated 11 ಆಗಸ್ಟ್ 2018, 18:32 IST

ವಿಜಯಪುರ: ‘ನೋಡ್ರೀ ನಂಗ ಇನ್‌ಐದ್ ವರ್ಸ ಅಧಿಕಾರ ಐತಿ. ನಿಮ್ಗಒಂದ್ ವರ್ಸ ಉಳಿದಿದ್ರೇ ಹೆಚ್ಚು. ಸುಮ್ನೇ ಯಾಡ್‌ ಕಡಿನೂ ತಕರಾರ್ ನಡೆಯೋದ್ ಬ್ಯಾಡ್ರೀ. ಅಭಿವೃದ್ಧಿ ಮಾಡ್ಬೇಕ್‌ ಎಂಬ ಕನ್ಸಿದೆ. ಸಹಕಾರ
ಕೊಡಂಗಿದ್ರಾ ಕೊಡ್ರೀ... ಇಲ್ಲದಿದ್ರಾ ನಿಮ್‌ ಗಾಡಿ ನಿಮ್ಗ, ನಮ್‌ ಗಾಡಿ ನಮ್ಗ. ಯಾರಿಗ್ಯಾರೂ ಅಡ್ಡ ಮಾಡ್ಕೊಳ್ಳೋದು ಬ್ಯಾಡ್ರೀ... ಅವರವರ ಹಾದೀಲಿ ನಮ್‌ ನಮ್‌ ಗಾಡಿ ಹೊಡ್ಕೊಂಡು ಹೋಗೋಣ...!’

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಖಡಕ್‌ ನುಡಿಗಳಿವು. ಕೆಲ ದಿನಗಳ ಹಿಂದೆ ನಡೆದ ಮಹಾನಗರ ಪಾಲಿಕೆಯ ತುರ್ತು ಸಭೆಯಲ್ಲಿ ಪೌರ ಸನ್ಮಾನ ಸ್ವೀಕರಿಸಿದ ಬಳಿಕ, ಪಾಲಿಕೆಯ ಕಾರ್ಯ ಕಲಾಪ ವೀಕ್ಷಿಸುತ್ತಾ ಯತ್ನಾಳ ಕುಳಿತಿದ್ದರು.

ಈ ಸಂದರ್ಭ ಪಕ್ಷಾತೀತವಾಗಿಪಾಲಿಕೆ ಆಡಳಿತದ ವಿರುದ್ಧ ಕೆಲ ಸದಸ್ಯರು ಕಿಡಿಕಾರಲಾರಂಭಿಸಿದರು. ಆಗ ಮೈಕ್‌ ಕೈಗೆತ್ತಿಕೊಂಡ ಯತ್ನಾಳ ಅವರು ಎಂದಿನ ಶೈಲಿಯ ಮಾತು ಆರಂಭಿಸಿದರು.

ADVERTISEMENT

‘ದಲಿತ ಮಹಿಳೆ ಮೇಯರ್‌ ಇದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟು, ಸಹಕಾರ ಕೊಡ್ರೀ’ ಎಂದು ಮೊನಚಾದ ಮಾತುಗಳಿಂದ ಸದಸ್ಯರನ್ನು ಸುಮ್ಮನಾಗಿಸಿದ ಯತ್ನಾಳ, ‘ನೀವ್‌ ನಮ್ಗ ಸಹಕಾರ ಕೊಟ್ರೇ ನಾವ್‌ ನಿಮ್ಗ ಸಹಕರಿಸುತ್ತೇವೆ. ಇಲ್ಲದಿದ್ರೇ ಹಿಂಗ ಹೊಯ್ಕೊಂಡ್‌ ಇರ್‍ರೀ. ನಮ್‌ ಗಾಡಿನಾ ನಾವ್‌ ಹೊಡ್ಕೊಂಡ್‌ ಹೋಗ್ತೀವಿ. ಪಾಲಿಕೆ ಚುನಾವಣೆಗೆ ಹೋದಾಗ ನಿಮ್ಗ ಅರಿವಾಗುತ್ತೆ’ ಎಂಬ ವಾಗ್ಬಾಣಗಳನ್ನು ಒಂದರ ಹಿಂದೆ ಒಂದರಂತೆ ಬಿಟ್ಟರು. ಗದ್ದಲದ ಗೂಡಾಗಿದ್ದ ಸಭೆಯು ಯತ್ನಾಳರ ಮಾತಿನ ಬಾಣಗ
ಳಿಂದಾಗಿ ಮೌನಕ್ಕೆ ಶರಣಾಯ್ತು.

ಡಿ.ಬಿ. ನಾಗರಾಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.