ADVERTISEMENT

ಡಾ. ಶಿವಮೂರ್ತಿ ಮುರುಘಾ ಶರಣರ ಬರಹ: ಮಾದಕ ವ್ಯಸನ- ಗೌರವದ ಅವಸಾನ

ಅಮಲಿನ ಪಿತ್ತ ನೆತ್ತಿಗೇರಿ ಅಪಾಯದ ಬಾಗಿಲು ಬಡಿಯುವ ಮುನ್ನ...

ಡಾ.ಶಿವಮೂರ್ತಿ ಮುರುಘಾ ಶರಣರು
Published 16 ನವೆಂಬರ್ 2021, 21:30 IST
Last Updated 16 ನವೆಂಬರ್ 2021, 21:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರಾಜಕೀಯ ಕ್ಷೇತ್ರದಲ್ಲಿ ಭ್ರಷ್ಟಾಚಾರ. ಅದರೊಟ್ಟಿಗೆ ಜಾತಿ ರಾಜಕಾರಣ ಮತ್ತು ಸ್ವಜನಪಕ್ಷಪಾತ. ಅದರಿಂದಾಗಿ ಅದು ಮಲಿನಗೊಳ್ಳುತ್ತದೆ. ಹಿಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಲಂಚಗುಳಿತನ. ಇಂದಿನ ದಿನಗಳಲ್ಲಿ ಅದು ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಳ್ಳುತ್ತಿರುವುದು ಅಪಾಯಕಾರಿ. ಅದರಂತೆ, ಧಾರ್ಮಿಕ ಕ್ಷೇತ್ರದಲ್ಲಿ ಮತಾಂಧತೆ. ಎಷ್ಟೋ ದಾರ್ಶನಿಕರು ಬಂದು, ಅದರ ಬಗೆಗೆ ಜಾಗೃತಿ ಮೂಡಿಸಿದರು. ಆದರೆ ಅದಿನ್ನೂ ಚಾಲ್ತಿಯಲ್ಲಿದೆ.

ಸರ್ವಧರ್ಮ ಮತ್ತು ಸರ್ವದಾರ್ಶನಿಕರ ಹೆಸರಲ್ಲೂ ಮತಾಂಧತೆ. ಮತಾಂಧತೆಯು ಮತಾಂತರದಂತಹ ಸಮಸ್ಯೆಗೆ ಕಾರಣವಾಗಿದೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಂತೆ ಬುದ್ಧಿಪೂರ್ವಕವಾಗಿ ಮತಾಂತರಗೊಂಡರೆ ಅಭ್ಯಂತರವಿಲ್ಲ. ಅದು ಬೌದ್ಧಿಕ ಮತಾಂತರ. ಇಂದು ನಡೆಯುತ್ತಿರುವ ಮತಾಂತರವು ಆಮಿಷದಿಂದ ಕೂಡಿದೆ. ಜನಸಾಮಾನ್ಯರಿಗೆ ಅನುಕೂಲಗಳನ್ನು ತೋರಿಸುತ್ತ ಮತಾಂತರ ಮಾಡಲಾಗುತ್ತದೆ.

ಅಸ್ಪೃಶ್ಯತೆ ಆಚರಣೆಯಿಂದಾಗಿ ವಿಶ್ವಮಾನವ ಪರಿ ಕಲ್ಪನೆ ಸಾಧ್ಯವಾಗುತ್ತಿಲ್ಲ. ಈ ದಿನಗಳಲ್ಲಂತೂ ಜಾತೀಯತೆ ಮಿತಿಮೀರಿದೆ. ಸ್ವಜಾತಿಯೊಂದಿಗೆ ಗುರುತಿಸಿಕೊಳ್ಳಲು ಸರ್ವಕ್ಷೇತ್ರಗಳ ಮುಖಂಡರೂ ಹಾತೊರೆಯುತ್ತಾರೆ. ಸಾಮಾಜಿಕ ಕ್ಷೇತ್ರವು ಅಸ್ಪೃಶ್ಯತೆಯಿಂದಾಗಿ ತನ್ನ ಪಾವಿತ್ರ್ಯ ವನ್ನು ಕಳೆದುಕೊಳ್ಳುತ್ತಿದೆ. ಉಳಿದಂತೆ ಎಲ್ಲ ಕ್ಷೇತ್ರಗಳನ್ನೂ ಕಾಡುತ್ತಿರುವ ಸಮಸ್ಯೆಯೆಂದರೆ ಮಾದಕವಸ್ತು.

ADVERTISEMENT

ಬಸವಣ್ಣ, ಬುದ್ಧ, ಗಾಂಧಿ ಮೊದಲಾದ ದಾರ್ಶನಿಕರು ಭೇದಮುಕ್ತ ಸಮಾಜ ರಚನೆಗಾಗಿ ಶ್ರಮಿಸಿದರು. ತನ್ಮೂಲಕ ಸಮಸಮಾಜ. ಈ ನಡುವೆ ಹಸಿವುಮುಕ್ತ ಸಮಾಜಕ್ಕಾಗಿ ‘ಅನ್ನಭಾಗ್ಯ’ದಂತಹ ಯೋಜನೆಗಳು ಜಾರಿಗೆ ಬಂದವು. ಕಷ್ಟಪಟ್ಟು ದುಡಿಯುವುದರಿಂದ ಸಾಲಬಾಧೆಯಂತಹ ಶೂಲವನ್ನು ತಪ್ಪಿಸಿಕೊಳ್ಳಬಹುದು. ಅದಕ್ಕಾಗಿ ಸ್ವಾಭಿಮಾನ ಅವಶ್ಯ. ಸ್ವಾಭಿಮಾನವು ಸಾಲಮುಕ್ತ ಸಮಾಜ ರಚನೆಗೆ ಒತ್ತಾಸೆ ಆಗುತ್ತದೆ. ವ್ಯಕ್ತಿಯು ತನ್ನೊಳಗಿನ ಶಕ್ತಿ ಮತ್ತು ಯುಕ್ತಿ ಬಳಸಿಕೊಂಡು, ಜೀವನದ ದಾರಿದ್ರ್ಯ ಹಾಗೂ ಬಡತನ ನಿವಾರಣೆಗೆ ಶ್ರಮಿಸಬೇಕಾಗುತ್ತದೆ.

ಸಂಘ-ಸಂಸ್ಥೆಗಳು ಉದ್ಯೋಗ ಅವಕಾಶವನ್ನು ನಿರ್ಮಿಸುವತ್ತ ಗಮನಹರಿಸುತ್ತ ಬಂದಿವೆ. ಅದನ್ನು ಇನ್ನಷ್ಟು ಸಮರ್ಪಕವಾಗಿ ಸಂಘಟಿಸಬೇಕಾಗುತ್ತದೆ. ಸರ್ಕಾರವು ಹೊಸ ಹೊಸ ಯೋಜನೆಗಳನ್ನು ಸೃಷ್ಟಿಸುತ್ತ, ಸಮೃದ್ಧ ಸಮಾಜದ ರಚನೆಗೆ ಒತ್ತು ಕೊಡಬೇಕು. ವ್ಯಕ್ತಿ, ಸಂಸ್ಥೆ ಮತ್ತು ಸರ್ಕಾರ ಕೂಡಿಕೊಂಡು ಆರೋಗ್ಯಪೂರ್ಣ ಸಮಾಜ ರಚನೆಗೆ ಯತ್ನಿಸಬೇಕು. ಅಂದರೆ ವ್ಯಸನಮುಕ್ತ ಸಮಾಜ ರಚನೆ ಆಗ ಬೇಕಿದೆ. ಇಂದು ಡ್ರಗ್ಸ್ ಮಾಫಿಯಾ ಕಳವಳಕಾರಿ ವಿದ್ಯಮಾನಕ್ಕೆ ಕಾರಣವಾಗಿದೆ. ವ್ಯಸನಮುಕ್ತ ಸಮಾಜ ರಚನೆಯು ಎಲ್ಲರ ಮುಂದಿರುವ ದೊಡ್ಡ ಸವಾಲು. ಇಂದಿನ ಯುವಜನ ಬುದ್ಧಿವಂತರಿದ್ದಾರೆ, ಪ್ರಾಮಾಣಿಕರೂ ಆಗಿದ್ದಾರೆ, ಏನಾದರೊಂದು ಸಾಧನೆ ಮಾಡಬೇಕೆಂಬ ಛಲವುಳ್ಳವರಾಗಿದ್ದಾರೆ. ಸ್ವತಃ ಇಲ್ಲವೆ ಪರಿಸರದ ಪ್ರಭಾವದಿಂದ ಮೇಧಾವಿತನವನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ. ಬಹುತೇಕ ಸಂಗ ದೋಷ. ಶುಭ್ರವಾಗಿರುವ ಬಟ್ಟೆ (ಉಡುಗೆ) ಧರಿಸಿಕೊಳ್ಳುವಂತೆ, ಉತ್ತಮ ಸ್ನೇಹಿತರ ಸಂಗ ಮಾಡಬೇಕಾಗುತ್ತದೆ. ಬಟ್ಟೆ ಶುಭ್ರವಾಗಿರಲಿ; ಸ್ನೇಹಿತರು ಉತ್ತಮರಿರಲಿ. ಕೆಟ್ಟವರ ಸಹವಾಸದಿಂದ ಚಟಾಧೀನರಾಗುವ ಸಂಭವ.

ಮೂಲತಃ ಯುವಜನರು ಉತ್ತಮರಿರುತ್ತಾರೆ. ಅಂಥವರನ್ನು ಕೆಲವರು ದಿಕ್ಕು ತಪ್ಪಿಸುತ್ತಾರೆ. ಈ ದಿಶೆಯಲ್ಲಿ ಪಾರ್ಟಿಯ ಪರಿಕಲ್ಪನೆ. ಮೋಜು- ಮಸ್ತಿಗೆ ಒಳಗಾಗುವುದು, ರೇವ್ ಪಾರ್ಟಿಗಳು. ಕುಡಿತದ ಚಟ ಮಾತ್ರವಲ್ಲ, ಅದರೊಟ್ಟಿಗೆ ಮಾದಕ ದ್ರವ್ಯಗಳನ್ನೂ ಸೇರಿಸಿಕೊಂಡು ಕುಡಿಯುವ ಪ್ರವೃತ್ತಿ. ಮಾದಕ ವ್ಯಸನವು ವ್ಯಕ್ತಿಯ ಗೌರವ ಮತ್ತು ಘನತೆಯನ್ನು ಹಾಳು ಮಾಡುತ್ತದೆ. ಕೆಲ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಮಕ್ಕಳು ಮತ್ತು ಆ ಕ್ಷೇತ್ರದಲ್ಲಿರುವ ಕೆಲವರು ಮಾದಕ ವ್ಯಸನಕ್ಕೆ ಒಳಗಾಗುತ್ತಿರುವ ಸಂದರ್ಭಗಳು. ಮಾದಕ ವ್ಯಸನವು ಮೆತ್ತಿಕೊಂಡಾಗ ಪ್ರತಿಭೆಯು ಮಂಕಾಗುವುದು. ಮಾದಕ ವ್ಯಸನವು ವ್ಯಕ್ತಿಯಲ್ಲಿ ಕಾರ್ಯಪ್ರವೃತ್ತಿಯನ್ನು ಕುಗ್ಗಿಸುತ್ತದೆ, ಸದಾ ಅಮಲಿನಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಹೀಗಾದಾಗ ವ್ಯಕ್ತಿಯ ಕಾರ್ಯಕ್ಷಮತೆ ಮೇಲೆ ಇನ್ನಿಲ್ಲದ ದುಷ್ಪರಿಣಾಮ ಆಗುತ್ತದೆ.

ಮಾದಕ ವ್ಯಸನವು ಅಪರಾಧ ಆಗಿದ್ದು, ಕಠೋರ ವಾದ ಕಾನೂನುಗಳಿವೆ. ಅದರಿಂದ ಕಾರಾಗೃಹದಂತಹ ಕಠಿಣ ಶಿಕ್ಷೆಗಳು. ಎಲ್ಲ ತಪ್ಪುಗಳನ್ನು ಮಾಡಿ, ಅನುಭವ ಪಡೆಯುವಷ್ಟು ಆಯುಷ್ಯ ಎಲ್ಲಿದೆ? ಅನ್ಯರ ತಪ್ಪುಗಳನ್ನು ನೋಡಿ ಪಾಠ ಕಲಿಯಬೇಕಾಗುತ್ತದೆ. ವ್ಯಸನಾಧೀನರು ಅರೆಮೂರ್ಛಾವಸ್ಥೆಯಲ್ಲಿ ಇರುತ್ತಾರೆ: ಅರೆಪ್ರಜ್ಞೆ. ತಾನು ಏನು ಮಾಡುತ್ತಿರುವೆನೆಂಬ ಅರಿವು ಮಾಯ ಆಗುತ್ತದೆ. ಅರಿವಿನ ಗೈರುಹಾಜರಿಯಲ್ಲಿ ಏನು ಬೇಕಾದರೂ ಆಗಬಹುದು.

ಮಾದಕ ವ್ಯಸನದಿಂದ ವ್ಯಕ್ತಿಯ ಪ್ರಜ್ಞೆ ಕಳೆದು ಹೋಗುತ್ತದೆ. ಅದರ ಅಮಲಿನಿಂದ ಹೊರಬರಲು ಸಮಯವೇ ಹಿಡಿಯುತ್ತದೆ. ಮಾದಕ ವ್ಯಸನಿಯೆಂಬ ಹಣೆಪಟ್ಟಿ. ಕೀರ್ತಿ, ಹಣ, ಪ್ರತಿಭೆ ಇದ್ದು, ತಲೆ ತಗ್ಗಿಸುವಂತಹ ಸಂದರ್ಭ ಎದುರಾಗುವುದು ಶೋಚನೀಯ. ಮಕ್ಕಳಿಗೆ ಪಾಲಕರು ಎಲ್ಲವನ್ನೂ ಒದಗಿಸುತ್ತಾರೆ. ಅಷ್ಟಕ್ಕೇ ಅವರ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳು ಏನು ಮಾಡುತ್ತಾರೆ? ಹೇಗೆ ಇದ್ದಾರೆ? ಎಂಥವರೊಟ್ಟಿಗೆ ಗೆಳೆತನ ಹೊಂದಿದ್ದಾರೆ ಎಂಬಂತಹ ವಿಚಾರಗಳ ಮೇಲೆ ನಿಗಾ ಇಡಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನವು ದಂಧೆ ಆಗುತ್ತಿದೆ. ಭೂ ಮಾಫಿಯಾ, ಗಣಿ ಮಾಫಿಯಾ, ಭೂಗತ ಜಗತ್ತಿನ ಮಾಫಿಯಾದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲವು ಜಗತ್ತಿನಾದ್ಯಂತ ಇದೆ. ಇದು ಪೊಲೀಸ್ ವ್ಯವಸ್ಥೆಗೆ ಅಲ್ಲದೆ ಸಮಾಜಕ್ಕೆ ದೊಡ್ಡ ಸವಾಲು.

ಮಿತಿಮೀರಿದ ಮದ್ಯ ಸೇವನೆಯಿಂದ ಮತ್ತು ಕೂಡ ಮಿತಿಮೀರಿ ಏರುತ್ತದೆ. ಮತ್ತೇರಿದವನ ಮಾತು ಮತ್ತು ವರ್ತನೆಯಲ್ಲಿ ವ್ಯತ್ಯಾಸ ಇರುತ್ತದೆ. ಶರೀರವು ನಿಯಂತ್ರಣ ಕಳೆದುಕೊಳ್ಳುತ್ತದೆ. ಮಾದಕವಸ್ತು ಸೇವನೆಯು ಅದಕ್ಕಿಂತಲೂ ಅಪಾಯಕಾರಿ.

ಕೆಲವರ ಬಳಿ ಹೇರಳವಾದ ಹಣ. ಅವರಿಗೆ ಏನೆಲ್ಲ ಖರೀದಿಸಲು ಅವಕಾಶ. ಅದರಂತೆ ಏನೆಲ್ಲ ಉಣ್ಣಬಹುದು, ಕುಡಿಯಬಹುದು. ಕಾನೂನುಬಾಹಿರವಾದುದನ್ನು ಸೇವಿಸಿದರೆ ಅಂಥವರನ್ನು ಕಾನೂನು ಬಂಧಿಸುತ್ತದೆಂಬ ಅರಿವು ಇರಬೇಕಾಗುತ್ತದೆ.

ಜನಸಾಮಾನ್ಯರು ಪ್ರಾಥಮಿಕ ಅಗತ್ಯಗಳಾದ ಅನ್ನ, ಅರಿವೆ ಹಾಗೂ ಆಶ್ರಯಕ್ಕಾಗಿ ಪರಿತಪಿಸುತ್ತಾರೆ. ಶ್ರಮ
ಮತ್ತು ಸಾಧನೆಯಿಂದ ಅವುಗಳನ್ನು ತಮ್ಮದಾಗಿಸಿ ಕೊಂಡವರು ಉಳಿದವುಗಳತ್ತ ಗಮನಹರಿಸುತ್ತಾರೆ. ಎಲ್ಲ ಇದ್ದವರು ಧರ್ಮ, ದೇವರು, ಧ್ಯಾನ ಮುಂತಾದವುಗಳತ್ತ ತುಡಿಯುತ್ತಾರೆ. ಇವುಗಳತ್ತ ಸುಳಿಯದವರು ಸುಖದ ಹುಡುಕಾಟಕ್ಕೆ ಮುಂದಾಗುತ್ತಾರೆ. ಸುಖದ ಬೆನ್ನು ಹತ್ತಿದವರು ಹೆಚ್ಚಿನ ಸುಖಕ್ಕಾಗಿ ಹಾತೊರೆಯುತ್ತಾರೆ. ಗಾಳಿಯಲ್ಲಿ ತೇಲಾಡಬೇಕು, ಸುಖದಲ್ಲಿ ಓಲಾಡ ಬೇಕು ಎನ್ನುವವರು ಮಾದಕ ವ್ಯಸನದಂತಹ ಅನಾರೋಗ್ಯಕರವಾದ ಹಾದಿ ಹಿಡಿಯುತ್ತಾರೆ, ತೊಂದರೆ ತಂದುಕೊಳ್ಳುತ್ತಾರೆ. ಅದರಿಂದ ಮರ್ಯಾದೆ ಹೋಗುವ ಸಂದರ್ಭ ಎದುರಾದರೆ, ಖಿನ್ನತೆ ಅನುಭವಿಸುತ್ತಾರೆ. ಖಿನ್ನತೆಗೆ ಸರಿದವರು ಮುಂದೆ ಜೀವಕ್ಕೆ ಅಪಾಯ ತಂದು ಕೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ.

ಜಾಗತಿಕ ಮಟ್ಟದಲ್ಲಿ ಮಾದಕ ವಸ್ತುಗಳ ದಂಧೆಯು ವ್ಯಾಪಕವಾಗಿ ಹರಡುತ್ತಿದೆ. ಜಗತ್ತಿನಾದ್ಯಂತ ಹೆರಾಯಿನ್, ಬ್ರೌನ್ ಶುಗರ್, ಗಾಂಜಾ ಮುಂತಾದ ಮಾದಕ ವಸ್ತು ಗಳು ಮಾಫಿಯಾ ಜಗತ್ತಿಗೆ ಕೊಂಡೊಯ್ಯುತ್ತವೆ. ಮಾಫಿಯಾ ಲೋಕವು ಮಾಯಾಲೋಕವೂ ಅಹುದು, ಅಪರಾಧ ಪ್ರಪಂಚವೂ ಅಹುದು. ಇವೆಲ್ಲ ಮಾನವ ನೆತ್ತಿಯ ಶಕ್ತಿಯನ್ನು ಕಸಿಯುವ ಅಥವಾ ಕದಿಯುವ ದಂಧೆಗಳು. ಮಾದಕ ಪ್ರಪಂಚವು ಮಾಯಾತ್ಮಕ ಪ್ರಪಂಚವಾಗಿದ್ದು, ಮೆದುಳಿನ ಶಕ್ತಿಯನ್ನು ಕುಂದಿಸುವಲ್ಲಿ ಅನಾರೋಗ್ಯಕರವಾದ ಹಾಗೂ ಅಪಾಯಕಾರಿಯಾದ ವ್ಯವಹಾರ ಆಗಿರುತ್ತದೆ. ಮಾದಕವಸ್ತು ವ್ಯಸನಕ್ಕೆ ಒಳಗಾಗು ವವರು ದಡ್ಡರಲ್ಲ; ಸುಶಿಕ್ಷಿತರು. ಮದ್ಯಪಾನದ ಆಚೆಗಿನ ಹಾಗೂ ಹೆಚ್ಚಿನ ಸಂತೋಷವನ್ನು ಹುಡುಕುವವರು.

ಈ ವ್ಯಸನವು ಮರಣದೆಡೆಗೆ ಕರೆದೊಯ್ಯಬಹುದು. ಅಮಲಿನ ಪಿತ್ತ ನೆತ್ತಿಗೇರುವ ಮುನ್ನ ವ್ಯಸನಿಗಳೇ, ಒಂದು ಕ್ಷಣ ಗಂಭೀರವಾಗಿ ಯೋಚಿಸಿರಿ. ಅದರಿಂದ ಆದಷ್ಟು ಬೇಗ ಹೊರಬನ್ನಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.