ADVERTISEMENT

Mahakumbh Mela | ಮಹಾ ಧಾರ್ಮಿಕ ಸಮ್ಮಿಲನ

ವಚನಾನಂದ ಸ್ವಾಮೀಜಿ
Published 13 ಜನವರಿ 2025, 0:30 IST
Last Updated 13 ಜನವರಿ 2025, 0:30 IST
ವಚನಾನಂದ ಸ್ವಾಮೀಜಿ
ವಚನಾನಂದ ಸ್ವಾಮೀಜಿ   

ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭಮೇಳವು ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮಿಲನ. ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ವೇದಕಾಲದ ನದಿ, ಈಗ ಗುಪ್ತಗಾಮಿನಿಯಾಗಿರುವ ಸರಸ್ವತಿ ಸಂಗಮ ಪ್ರಯಾಗ್‌ರಾಜ್. ಇದು ಹಿಂದೂಗಳಿಗೆ ಅತಿ ಪವಿತ್ರ. ಕುಂಭಮೇಳದ ಮಹತ್ವ ವೇದ, ಪುರಾಣಗಳಲ್ಲಿ ವರ್ಣಿತವಾಗಿದೆ. ಈ ಸಂಗಮದಲ್ಲಿ ಕುಂಭಮೇಳ ಕಾಲದಲ್ಲಿ ಮೀಯುವುದರಿಂದ ಎಲ್ಲ ಪಾಪಗಳ ವಿಮೋಚನೆಯಾಗಿ, ಜನನ ಮರಣ ಚಕ್ರ ಕಡಿದು, ಮೋಕ್ಷ ಸಾಧ್ಯವೆಂಬ ನಂಬಿಕೆ ನಮ್ಮದು.

ಪುರಾಣದ ಸಮುದ್ರಮಥನದ ಕಥೆ ಕುಂಭಮೇಳದ ಮೂಲ ಪ್ರೇರಣೆ. ಕುಂಭಮೇಳವು ಭಾರತದ ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಮಾತ್ರವಲ್ಲ, ಖಗೋಳ ಮತ್ತು ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದಲೂ ಮಹತ್ವಪೂರ್ಣ. ಇದರ ಆಯೋಜನೆ ಗ್ರಹಗಳು ಮತ್ತು ನಕ್ಷತ್ರಗಳ ವಿಶಿಷ್ಟ ಸ್ಥಾನವನ್ನಾಧರಿಸಿದೆ. ಈ ಅವಧಿ ಗುರುಗ್ರಹವು ರಾಶಿಚಕ್ರದ 12 ರಾಶಿಗಳಲ್ಲಿ ಒಮ್ಮೆ ಸಂಪೂರ್ಣ ಚಕ್ರವನ್ನು ಪೂರ್ಣಗೊಳಿಸುವ ಕಾಲವನ್ನು ಪ್ರತಿನಿಧಿಸುತ್ತದೆ. ಕುಂಭಮೇಳದ ಸಮಯದಲ್ಲಿ ಗುರುವು ಮೇಷ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯನು ಮಕರ ರಾಶಿಯಲ್ಲಿರುತ್ತಾನೆ ಮತ್ತು ಚಂದ್ರನು ಕುಂಭ ರಾಶಿಯಲ್ಲಿ ಪ್ರವೇಶಿಸುತ್ತಾನೆ. ಇದು ಅತ್ಯಂತ ಪವಿತ್ರ ಪುಣ್ಯ ಪರ್ವಕಾಲ.

ವೇದಗಳಲ್ಲಿ ನದಿಗಳ ಮಹತ್ವ ಮತ್ತು ಅವುಗಳ ಪಾವಿತ್ರ್ಯವನ್ನು ಉದ್ಧರಿಸಲಾಗಿದೆ. ಆಧುನಿಕ ಇತಿಹಾಸದಲ್ಲಿ ಚಾಣಕ್ಯ ಚಂದ್ರಗುಪ್ತರ ಕಾಲದಲ್ಲಿ ಇದರ ಉಲ್ಲೇಖ ಬರುತ್ತದೆ. ಶಂಕರಾಚಾರ್ಯರು ಇದನ್ನು ಇನ್ನೂ ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡಿದರು. ಮೊಘಲರ ಕಾಲದಲ್ಲಿಯೂ, ಬ್ರಿಟಿಷರ ಕಾಲದಲ್ಲಿಯೂ ಇದು ಯಾವುದೇ ಅಡೆತಡೆಯಿಲ್ಲದೆ ನಡೆದಿದೆ. 

ADVERTISEMENT

ಕುಂಭಮೇಳದಲ್ಲಿ ಭಾಗವಹಿಸುವ ಪ್ರಮುಖ ಸಂಘಟನೆಗಳನ್ನು ಅಖಾಡಾಗಳು ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಕುಂಭಮೇಳದಲ್ಲಿಯೂ ವಿವಿಧ ಅಖಾಡಾಗಳ ಸದಸ್ಯರು, ವಿಶೇಷವಾಗಿ ನಾಗಾ ಸಾಧುಗಳು, ರಾಜಮಾರ್ಗಗಳ ಮೂಲಕ ಶೋಭಾಯಾತ್ರೆಯಲ್ಲಿ ಭಾಗವಹಿಸುತ್ತಾರೆ ಮತ್ತು ಶಾಹೀ ಸ್ನಾನಕ್ಕೆ (ಪವಿತ್ರ ಸ್ನಾನ) ಮುನ್ನ ಶುದ್ಧೀಕರಣ ಸ್ನಾನವನ್ನು ಮಾಡುತ್ತಾರೆ. ಭಾರತದ ಎಲ್ಲ ಮತ ಪಂಥಗಳಿಗೂ ಪ್ರಾತಿನಿಧ್ಯವಿರುವುದು ಕುಂಭ ಮೇಳದ ವಿಶೇಷಗಳಲ್ಲೊಂದು.

ಲೇಖಕ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.