ADVERTISEMENT

National Doctor's Day| ಜನರ ಸೇವೆ ನಡುವೆ ವೀರಪ್ಪನ್ ಭಯ ಕಾಡಲಿಲ್ಲ! ಡಾ.ಎಂ.ಮಹೇಶ್‌

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 0:03 IST
Last Updated 1 ಜುಲೈ 2023, 0:03 IST
ಡಾ.ಎಂ.ಮಹೇಶ್‌
ಡಾ.ಎಂ.ಮಹೇಶ್‌   

ಡಾ.ಎಂ.ಮಹೇಶ್‌

ಅದು ಕೂಡ್ಲೂರು. ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕುಗ್ರಾಮ. ಹನೂರಿನಿಂದ 55 ಕಿ.ಮೀ ದೂರ. 2003ರಲ್ಲಿ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆಗೊಂಡಾಗ ಆ ಪ್ರದೇಶದಲ್ಲಿ ಕಾಡುಗಳ್ಳ ವೀರಪ್ಪನ್‌ ಉಪಟಳವಿತ್ತು. ಹೀಗಾಗಿ, ನಮ್ಮ ಕೇಂದ್ರಕ್ಕೆ ಪಿಎಸ್‌ಐ, ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿತ್ತು. ನಾನು ಹನೂರು ಭಾಗದವನೇ ಆಗಿದ್ದರಿಂದ ವೀರಪ್ಪನ್‌ ಬಗ್ಗೆ ತಿಳಿದಿತ್ತು. ಒಂದು ದಿನ ಆತನನ್ನು ಎದುರಾಗಬಹುದು ಎಂದುಕೊಂಡಿದ್ದೆ, ಸಾಧ್ಯವಾಗಲಿಲ್ಲ. ಗ್ರಾಮೀಣ ಭಾಗದ ನನಗೆ ಜನರ ಕಷ್ಟಗಳು, ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿತ್ತು. ಜನರ ಸೇವೆಯೇ ಗುರಿಯಾಗಿದ್ದರಿಂದ ವೀರಪ್ಪನ್‌ ಭಯ ಕಾಡಲಿಲ್ಲ.

ಕೊಳ್ಳೇಗಾಲದಿಂದ ಬೆಳಿಗ್ಗೆ 7.30ಕ್ಕೆ ಹೊರಟ ಬಸ್‌ 9ಕ್ಕೆ ಕೂಡ್ಲೂರಿಗೆ ತಲುಪುತ್ತಿತ್ತು. ಸಂಜೆ 4ಕ್ಕೆ ಅಲ್ಲಿಂದ ವಾಪಸಾಗುತ್ತಿತ್ತು. ನಾನು ಸಂಜೆ ಊರಿನತ್ತ ಬಸ್‌ ಹತ್ತುವಾಗ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದರು. ಹೀಗಾಗಿ, ಅಲ್ಲೇ ಮನೆ ಮಾಡಿದೆ. ಸಂಜೆ 5ರ ಬಳಿಕ ಕೆಲಸ ಇರುತ್ತಿರಲಿಲ್ಲ. ಹಾಸಿಗೆ ಹಿಡಿದಿದ್ದ ರೋಗಿಗಳ ಮನೆಗೇ ತೆರಳಿ ಚಿಕಿತ್ಸೆ ನೀಡುತ್ತಿದ್ದೆ. ಕ್ರಮೇಣ ಕೇಂದ್ರದಲ್ಲೇ ದಾಖಲಿಸಿಕೊಳ್ಳಲು ಆರಂಭಿಸಿದೆವು.

ADVERTISEMENT

15 ಸಾವಿರ ಜನಸಂಖ್ಯೆಯಿದ್ದ ಊರಲ್ಲಿ ನಾಲ್ಕೂವರೆ ವರ್ಷದ ಕೆಲಸ ಮೌಲ್ಯಯುತ ಸಂದರ್ಭ. ಎಂಬಿಬಿಎಸ್‌ ಪದವೀಧರರು ಕನಿಷ್ಠ ಒಂದು ವರ್ಷ ಗ್ರಾಮೀಣ ಸೇವೆ ಮಾಡಬೇಕು ಎಂಬ ನಿಯಮವಿದೆ. ನನ್ನ ಪ್ರಕಾರ, 5 ವರ್ಷವಾದರೂ ಅಲ್ಲಿರಬೇಕು. ಜನರೊಂದಿಗೆ ಕೆಲಸ ಮಾಡಿದರೆ ವ್ಯಕ್ತಿತ್ವವೇ ಬದಲಾಗುತ್ತದೆ. ಪಿ.ಜಿ, ಎಂ.ಡಿ ಓದಿದರೆ ಸ್ಪೆಷಾಲಿಟಿ, ಸೂಪರ್‌ ಸ್ಪೆಷಾಲಿಟಿ ತಜ್ಞರಾಗಬಹುದು. ಆದರೆ, ವೈದ್ಯರಾಗಲು ಸಾಧ್ಯವಿಲ್ಲ. ಯುವ ವೈದ್ಯರು ದುಡ್ಡು, ಹೆಸರಿನ ಹಿಂದೆ ಓಡದೇ ಗ್ರಾಮೀಣರಿಗೆ ಸೇವೆ ನೀಡಬೇಕು. ಆಗ ಜೀವನ ಸಾರ್ಥಕವಾಗುತ್ತದೆ.

(ವೈದ್ಯರು ಅರಿವಳಿಕೆ ತಜ್ಞ, ಚಾಮರಾಜನಗರ ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ)

ನಿರೂಪಣೆ: ಸೂರ್ಯನಾರಾಯಣ ವಿ.

ಡಾ.ಎಂ.ಮಹೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.