
‘ಈ ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ಚರ್ಚೆಯಾಗಿದ್ರಲ್ಲಿ 50 ಪರ್ಸೆಂಟ್ ಜನರ ಕಷ್ಟಗಳ ಬಗ್ಗೆ ಚರ್ಚೆಯಾಗಿದ್ರೆ ನಮ್ ರಾಜ್ಯ ಎಷ್ಟೋ ಡೆವಲಪ್ ಆಗಿರ್ತಿತ್ತು’ ಪೇಪರ್ ಓದುತ್ತಾ ವಟಗುಡತೊಡಗಿದಳು ಹೆಂಡತಿ.
‘ಅದೇ ರೈತರು, ಯುವಕರ ಸಮಸ್ಯೆ ಬಗ್ಗೆ ಬರೆದಿದ್ರೆ ನೀನೇ ಪೇಜ್ ತಿರುಗಿಸಿ ಮುಂದೆ ಹೋಗಿರ್ತಿದ್ದೆ’ ಬ್ರೇಕ್ಫಾಸ್ಟ್ ಮೀಟಿಂಗ್ ಸಮರ್ಥಿಸಿಕೊಳ್ಳುವಂತೆ ಹೇಳಿದೆ.
‘ಇಂತಹ ಉಪಾಹಾರ ಸಭೆಯಿಂದ ಯಾರಿಗೇನು ಸಂದೇಶ ಕೊಡೋಕೆ ಹೊರಟಿದಾರೆ ಇವರು?’
‘ಸಂದೇಶ ಸಿಗುತ್ತಿದೆ. ನಿನಗೆ ಗೊತ್ತಾಗ್ತಿಲ್ಲ ಅಷ್ಟೇ’.
‘ಏನ್ ಸಂದೇಶ ರೀ…’
‘ಉಪ್ಪಿಟ್ಟಲ್ಲಿ ಖಾರ ಹೆಚ್ಚಾಗಿದ್ದರೆ ಒಂದು ಸಂದೇಶ, ಉಪ್ಪು ಕಡಿಮೆ ಇದ್ದರೆ ಮತ್ತೊಂದು ಸಂದೇಶ, ಇಡ್ಲಿ ಬೆಂದಿರಲಿಲ್ಲ ಅಂದ್ರೆ ಒಂದು ಮೆಸೇಜ್, ನಾಟಿಕೋಳಿ ಸಾರಲ್ಲಿ ಪೀಸ್ಗಳಿರಲಿಲ್ಲ ಅಂದ್ರೆ ಇನ್ನೊಂದು ಮೆಸೇಜ್’.
‘ಓಹ್, ಹೀಗೆಲ್ಲ ಇದೆಯಾ? ಫಸ್ಟ್ ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಉಪ್ಪಿಟ್ಟಿಗೆ ಉಪ್ಪು ಕಡಿಮೆ ಇತ್ತಂತೆ. ಅಂದ್ರೆ ಏನರ್ಥ?’
‘ಇನ್ನೊಂದು ಬಜೆಟ್ ಮಂಡಿಸಿದ ನಂತರ ಉಪ್ಪಿಟ್ಟಿಗೆ ಉಪ್ಪು ಹಾಕಲಾಗುವುದು ಎಂದರ್ಥ’.
‘ಎರಡನೇ ಮೀಟಿಂಗ್ನಲ್ಲಿ ನಾಟಿಕೋಳಿ ಸಾರು ಖಾರ ಆಗಿತ್ತಂತೆ. ಇದರರ್ಥ ಏನಿರಬಹುದು?’
‘ಅಧಿಕಾರ ಬಿಟ್ಟು ಕೊಡದಿದ್ದರೆ ಮುಂದೆ ಎಲ್ಲ ಖಾರ ಖಾರವಾಗಿರುತ್ತೆ ಅಂತಿರಬಹುದು’.
‘ಉಪಾಹಾರ ಆದ ನಂತರ ಲೆಮನ್ ಟೀ ಕೊಟ್ಟಿದ್ರಂತೆ. ಆದರೆ, ಅದರಲ್ಲಿ ಹುಳಿಯೇ ಇರಲಿಲ್ವಂತೆ ರೀ’.
‘ಅಂದ್ರೆ, ಇಬ್ಬರ ನಡುವೆ ಹುಳಿ ಹಿಂಡೋರು ತುಂಬಾ ಜನ ಇದ್ದಾರೆ. ಮತ್ತೇಕೆ ಎಕ್ಸ್ಟ್ರಾ ಹುಳಿ ಅಂತ ಹಾಕಿಲ್ಲದೇ ಇರಬಹುದು’ ಎಂದು ನಕ್ಕೆ.
‘ರಾಜ್ಯಭಾರ ಮಾಡೋದಂದ್ರೆ ಕುಕರಿ ಶೋ ಅಂದ್ಕೊಂಡಿದಾರೇನ್ರೀ ಇವರು... ರೈತರು ರೋಸ್ಟ್ ಆಗ್ತಿದ್ದಾರೆ. ಎಲ್ಲದರ ಬೆಲೆ, ಟ್ಯಾಕ್ಸ್ ಜಾಸ್ತಿ ಆಗಿ ಜನ ಸೀದುಹೋಗ್ತಿದ್ದಾರೆ. ಇಂಥದ್ದರಲ್ಲಿ ವಿರೋಧಪಕ್ಷದವರೂ ಹೋರಾಟ ಮಾಡ್ತಿಲ್ವಲ್ರೀ’.
‘ಹನುಮ ಜಯಂತಿ ದಿನ ಕೋಳಿ ಸಾರು ಮಾಡಿದ್ದಾರೆ ಅಂತ ಹೋರಾಡ್ತಿಲ್ವ, ಇನ್ನೂ ಅವರು ಎಂತಹ ಹೋರಾಟ ಮಾಡಬೇಕು ನಿಂಗೆ’ ಎಂದೆ. ಹಣೆ ಚಚ್ಚಿಕೊಂಡು ಒಳಹೋದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.