‘ನನಗ ಹೊಸೂರಿಗೆ ಕರಕಂಡು ಹೋಗಿ ಪಟಾಕಿ ಕೊಡಿಸು’ ಎಂದು ಬೆಕ್ಕಣ್ಣ ದುಂಬಾಲು ಬಿದ್ದಿತ್ತು.
‘ನೀನೇ ಒಂದು ಸುರುಸುರು ಬತ್ತಿ ಪಟಾಕಿ! ನೀ ಮಾತಾಡಿಕೋತ ಮನಿ ಒಳಗ, ಹೊರಗ ಓಡಾಡತಿದ್ದರೆ ಬೆಳಕು, ಚಟಪಟ ಸದ್ದು ಎರಡೂ ಇರತೈತಿ’ ಎಂದು ಬೆಣ್ಣೆ ಹಚ್ಚಿದೆ.
‘ಹೋದವರ್ಸ ನೀನೇ ನಮ್ಮನೆಯ ಚಿನಕುರುಳಿ ಅಂತ ಹೇಳಿ ಪಟಾಕಿ ಕೊಡಸಲಿಲ್ಲ. ಎಷ್ಟರ ಜಿಪುಣಿ ಮಾಡತೀಯ’ ಎಂದು ಮೂತಿ ತಿರುವಿ, ಪೇಪರು ತಿರುವತೊಡಗಿತು.
‘ಈ ಸಲ ನಮ್ ಮೋದಿಮಾಮಾ ದೀಪಾವಳಿ ಆಚರಿಸಾಕೆ ದೇಶದ ಯಾವ ಭಾಗಕ್ಕೆ ಹೋಗತಾರೆ ಗೊತೈತೇನು?’ ಎಂದು ಕೇಳಿತು.
‘ಲಡಾಕಿನಲ್ಲಿ ವಾಂಗ್ಚುಕ್ ಮತ್ತ ಅವನ ಕಡಿಯವ್ರು ಪರಿಸರ ಹೋರಾಟ ನಡೆಸ್ಯಾರಲ್ಲ... ಆ ಎಲ್ಲ
ಹೋರಾಟಕ್ಕಿಂತ ಸೈನಿಕರ ಜೊತಿಗಿ ದೀಪಾವಳಿ ಆಚರಿಸೂದು ಮಹತ್ವದ್ದು ಎಂಬ ಸಂದೇಶ ಕೊಟ್ಟಂಗೆ ಆಗತೈತಿ ಅಂತ ಲಡಾಕಿನ ಗಡಿಭಾಗಕ್ಕೆ ಹೋಗಬೌದೇನೋ’ ಎಂದೆ ನಾನು.
‘ಸುದ್ದಿ ಓದಿ ಅಪ್ಡೇಟ್ ಆಗು! ಮೋದಿಮಾಮಾ ಈ ಸಲ ಗೋವಾಕ್ಕೆ ಹೋಗಿ, ನೌಕಾದಳದವರ ಜೊತಿಗಿ ಆಚರಿಸ್ತಾರಂತ. ನಾವೂ ಹಂಗ ದೇಶ ರಕ್ಷಣೆಯ ಸೈನಿಕರಿಗೆ ಸಿಹಿ ತಿನ್ನಿಸಿ, ದೀಪಾವಳಿ ಮಾಡೂಣು’ ಅಂತ ಹೊಸ ಯೋಜನೆ ಮುಂದಿಟ್ಟಿತು.
‘ಇಲ್ಲಿ ಹತ್ರದಲ್ಲಿ ಎಲ್ಲಿ ಸೈನಿಕರ ತುಕಡಿ ಅದಾವು’ ಎಂದು ನಾನು ರಾಗವೆಳೆದೆ.
‘ಪೊಲೀಸರು ಇರತಾರಲ್ಲ! ಇಲ್ಲೇ ಹೊಸೂರಿನತ್ರ ಹೋಗೂಣು... ಕರ್ನಾಟಕ– ತಮಿಳುನಾಡು ಗಡಿ ಭಾಗದ ಟೋಲ್ ನಾಕಾದ ಹತ್ರ ಪೊಲೀಸರಿಗೆ ಸಿಹಿ ತಿನ್ನಿಸಿ, ದೀಪಾವಳಿ ಆಚರಿಸೂಣು’ ಎಂದಿತು.
‘ಏನರೇ ಒಂದು ಉತಾವಳಿ ಹಚ್ಚತೀ ನೀ... ಬ್ಯಾರೆ ಕೆಲಸಿಲ್ಲೇನು’ ಎಂದು ಬೈದೆ.
‘ಅಷ್ಟೊತ್ತಿಗೆ ಹೊಸೂರಿನಾಗೆ ಕಡಿಮೆ ಬೆಲೆಗೆ ಪಟಾಕಿ ಮಾರತಿರತಾರೆ. ಪೊಲೀಸರಿಗೆ ದೀಪಾವಳಿ ಸಿಹಿ ತಿನ್ನಿಸಿ, ಹಂಗೇ ಒಂದಿಷ್ಟು ಪಟಾಕಿ ತಗಂಡು ಬರೂಣು’ ಎಂದು ಬೆಕ್ಕಣ್ಣ ಕಣ್ಣು ಮಿಟುಕಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.