ತಿಂಗಳೇಶ ಇನ್ನೇನು ಬೈಟು ಬಳಗ ಸೇರಲು ಮನೆಯಿಂದ ಹೊರಡಬೇಕು ಎನ್ನುವಷ್ಟರಲ್ಲಿ ಬಂಡೆಯ್ಯನ ಆಗಮನ. ದುಃಖ ತುಂಬಿದ ಕಣ್ಣುಗಳಿಗೆ ನೀಲಿ ಮಫ್ಲರ್ ಒತ್ತಿಕೊಳ್ಳುತ್ತಾ ಮೌನವಾಗಿ ಕುಳಿತ.
‘ಏನು ವಿಷಯ… ಮನೆ ಮೇಲೆ ಗುಡ್ಡ ಕುಸಿದವನ ಥರ ಇದ್ದೀಯಾ?’ ತಿಂಗಳೇಶನೇ ಮಾತಿಗಿಳಿದ.
‘ಗುಡ್ಡ ಬಿದ್ದರೆ ಹೇಗೋ ಅಜ್ಜಯ್ಯನನ್ನು ನೆನೆದು ಪಾರಾಗುತ್ತಿದ್ದೆ. ಆದರೆ ದೊಡ್ಡಯ್ಯನನ್ನು ನಂಬಿ ಗಡ್ಡ ಬಿಡುವಂತಾಗಿದೆ’ ಎಂದ ಬಂಡೆಯ್ಯ.
‘ಸಿದ್ಧಯ್ಯ ಏನಾದ್ರೂ ‘ಹಿಂದಮುಂದ’ ಮಾಡ್ಯಾನೇನು? ಅಣ್ಣ ತಮ್ಮಂದಿರ ನಡುವೆ ಒಂದು ಮಾತು ಬಂದೀತು, ಹೋದೀತು… ಮರೆತು ಬಿಡಬೇಕಪ್ಪ…’
‘ಎರಡು ವರ್ಷದ ಹಿಂದೆ ನೀವೇ ಬೆಂಗಳೂರಿನ ಮನೆಯನ್ನು ನನಗೆ ಪಾಲು ಮಾಡಿಕೊಟ್ಟಿರಿ. ಆ ಮನೆ ಕಟ್ಟಲು ನಾನು ಸಿಮೆಂಟಿಗೆ, ಕಬ್ಬಿಣಕ್ಕೆ, ಕಟ್ಟಿಗೆಗೆ ಅಂತ ಖರ್ಚು ಮಾಡಿದ್ದಕ್ಕೆ ಲೆಕ್ಕವಿಲ್ಲ. ಮಂಡ್ಯ– ರಾಮನಗರ ಕಡೆಯ ಜನ ನನ್ನ ಮೇಲಿನ ಅಭಿಮಾನದಿಂದ ಹೇಗೆಲ್ಲಾ ಸಹಾಯ ಮಾಡಿದ್ದಾರೆ, ನಾನು ಎಷ್ಟೆಲ್ಲಾ ಕಷ್ಟಪಟ್ಟಿದ್ದೇನೆ ಅನ್ನೋದು ನಿಮಗೆ ಗೊತ್ತೇಯಿದೆ’.
‘ಹೌದು ಹೌದು… ಗೃಹಪ್ರವೇಶದ ದಿನ ಅಣ್ತಮ್ಮಂದಿರು ಕಿತ್ತಾಡಿದರೆ ಸರಿ ಕಾಣಲ್ಲ, ಆತ ಎರಡೂವರೆ ವರ್ಷ ಹೊಸಮನೆಯಲ್ಲಿದ್ದು ನಂತರ ಹಳೆಮನೆಗೆ ಹೋಗಲಿ ಅಂತ ಒಪ್ಪಿಸಿದ್ದೆವಲ್ಲಾ…’
‘ನೀವು ಅವೊತ್ತು ಒಳಕೋಣೆಯಲ್ಲಿ ಹಾವೇರಿ ಪಂಚಾಯ್ತಿ ಮಾಡಿದ್ದೇ ತಪ್ಪಾಯ್ತು, ಪಡಸಾಲೆಯಲ್ಲಿ ಮಾತುಕತೆ ಆಗಿದ್ದರೆ ಗೃಹಪ್ರವೇಶಕ್ಕೆ ಬಂದ ನೆಂಟರೆಲ್ಲಾ ಸಾಕ್ಷಿ ಹೇಳುತ್ತಿದ್ದರು’.
‘ಈಗೇನಂತಾನೆ ಸಿದ್ಧಯ್ಯ…?’
‘ಐದು ವರ್ಷ ನಾನೇ ಇರ್ತೀನಿ, ಆಮೇಲೆ ನೋಡೋಣ ಅಂತಾನೆ. ಮಗ ಬೇರೆ ‘ಮನೆ ಖಾಲಿ ಇಲ್ಲ’ ಅಂತ ಹೊರಗೆ ಬೋರ್ಡ್ ಹಾಕಿದ್ದಾನೆ’.
ಇಂಗು ತಿಂದ ಹೈಕಮಾಂಡಿನಂತಾದ ತಿಂಗಳೇಶ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.