
‘ಸಿಎಂ ಕುರ್ಚಿ ಮ್ಯಾಲೆ ನಾಟಿ ಕೋಳಿ ಕುಂತೇತಲೇ ಪರಾಕ್!’ ಎಂದ ಗುಡ್ಡೆ.
‘ಯಾವುದಲೆ ಇದು ಹೊಸ ಕಾರಣಿಕ?’ ದುಬ್ಬೀರ ನಕ್ಕ.
‘ಈ ಕಾರಣಿಕದ ಪ್ರಕಾರ ಕೋಳಿ ಬಲಿಯಿಂದಾಗಿ ಬಂಡೆ ಸಿಎಂ ಆಗೋ ಎಲ್ಲ ಲಕ್ಷಣಗಳೂ ಕಾಣ್ತದಾವೆ. ದೇವಾನುದೇವತೆಗಳೆಲ್ಲ ಸಂತೃಪ್ತರಾಗಿ ಸಿಎಂ ಕುರ್ಚಿ ಮೇಲೆ ಪುಷ್ಪವೃಷ್ಟಿ ಮಾಡಾಕೆ ಕಾಯ್ತದಾವಂತೆ...’
‘ಏನೋಪ್ಪ, ಈ ತೆಪರನ ಟೀವೀಲಿ ನವೆಂಬರ್ ಕ್ರಾಂತಿ ಅಂತಿದ್ರು, ನವೆಂಬರ್ ಮುಗಿದೇ ಹೋತು...’
‘ನವೆಂಬರ್ ಮುಗಿದ್ರೆ ಏನಾತು, ಡಿಸೆಂಬರ್ ಕ್ರಾಂತಿ ಇಲ್ವಾ?’ ತೆಪರೇಸಿ ನಕ್ಕ.
‘ಅದೂ ಆಗದಿದ್ರೆ?’ ಕೊಟ್ರೇಶಿ ಕೊಕ್ಕೆ.
‘ಜನವರಿನಲ್ಲಿ ‘ಸಂ’ಕ್ರಾಂತಿ!’
‘ಆದ್ರೂ ನೀವು ಟೀವಿಯೋರು ಅದೀರಲ್ಲ, ಮಹಾ ಸುಳ್ಳು ಕಣಲೆ ತೆಪರ, ಕೋಳಿ ಸಾರು ತಿಂದು ಡಿಕೆಶಿ ಕಿವಿಯಲ್ಲಿ ಸಿಎಂ ಏನು ಹೇಳಿದ್ರು ಗೊತ್ತಾ ಅಂತ ನಿಮ್ ಟೀವೀಲಿ ತೋರಿಸ್ತಿದ್ರಿ. ಏನು ಕುರ್ಚಿ ಬಿಡ್ತೀನಿ ಅಂತ ಹೇಳಿದ್ರಾ?’ ಮಂಜಮ್ಮ ಕೇಳಿದಳು.
‘ಇಲ್ಲ, ಕೋಳಿ ಸಾರು ಬೊಂಬಾಟಾಗಿದೆ ಅಂದ್ರಂತೆ... ನೀವು ಏನೇನೋ ಕಲ್ಪನೆ ಮಾಡ್ಕಂಡ್ರೆ ನಾವೇನ್ ಮಾಡಾಕಾಗುತ್ತೆ?’ ತೆಪರೇಸಿ ವಾದಿಸಿದ.
‘ಆದ್ರೂ ಒಂದು ಕೋಳಿ ಏನೆಲ್ಲ ಮಾತಾಡಿಸಿಬಿಡ್ತು... ನಾವು ಪುರಾತನ ಕಾಲದಿಂದ್ಲೂ ಬ್ರದರ್ಸ್, ನಮ್ಮದು ಒಂದೇ ಪಕ್ಷ, ಒಂದೇ ಸಿದ್ಧಾಂತ ಅಂದ್ರಂತೆ ಸಿಎಂ...’ ದುಬ್ಬೀರಂಗೆ ಆಶ್ಚರ್ಯ.
‘ಒಂದೇ ಪಕ್ಷ, ಒಂದೇ ಸಿದ್ಧಾಂತ ಸರಿ, ಒಂದೇ ಕುರ್ಚಿ, ಬಿಡಕಾಗಲ್ಲ ಅನ್ಲಿಲ್ವಾ?’ ಕೊಟ್ರ ಕಿಸಕ್ಕೆಂದ.
‘ಲೇಯ್, ಹೆಂಗೋ ಇಬ್ರೂ ಖುಷ್ ಖುಷಿಯಾಗಿ ಒಂದಾಗಿದಾರೆ, ನಿನ್ನಂಥೋರು ಕಡ್ಡಿ ಆಡಿಸಿ ಎಲ್ಲ ಕೆಡಿಸ್ತೀರ...’ ದುಬ್ಬೀರಂಗೆ ಸಿಟ್ಟು ಬಂತು.
‘ಅದೆಲ್ಲ ಇರ್ಲಿ, ಸಿಎಂ– ಡಿಸಿಎಂ ಕದನ ವಿರಾಮದ ವಿಷ್ಯ ಟ್ರಂಪ್ಗೆ ಗೊತ್ತಾಗ್ಲಿಲ್ವಾ?’
‘ಇಲ್ಲ, ಯಾಕೆ?’
‘ಗೊತ್ತಾಗಿದ್ರೆ ಅವರ ಕುರ್ಚಿ ಕದನ ನಿಲ್ಸಿದ್ದು ನಾನೇ ಅಂತಿದ್ರು!’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.