‘ಡ್ಯಾಡೀ, ನಮ್ಮ ಎಸ್ಸೆಸ್ಸೆಲ್ಸಿ ಎಕ್ಸಾಂ ರದ್ದು ಮಾಡಿ, ರೀ-ಎಕ್ಸಾಂ ಮಾಡ್ತಾರಾ?’ ಮಗಳು ಆತಂಕದಿಂದ ಕೇಳಿದಳು.
‘ಇಲ್ಲವಲ್ಲಾ, ಪರೀಕ್ಷೆ ಮುಗಿದು ರಿಸೆಲ್ಟ್ ಅನೌನ್ಸ್ ಆಗಿ ನಿನಗೆ ಎಬೋ ನೈಂಟಿ ಪರ್ಸೆಂಟ್ ಬಂದಿದೆ, ಮರು ಪರೀಕ್ಷೆ ಇಲ್ಲ, ಆತಂಕಪಡಬೇಡ...’ ಅಂದ ಶಂಕ್ರಿ.
‘ಹಾಗಲ್ಲಾ, ಪ್ರತಿ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸುತ್ತಾರೆ, ಪರೀಕ್ಷೆಯಲ್ಲಿ ಅಕ್ರಮ ನಡೆದಿರಬಹುದು, ಮರು ಪರೀಕ್ಷೆ ನಡೆಸಲು ಒತ್ತಾಯಿಸಬೇಕು ಎಂದು ಹುಡುಗರು ಮಾತನಾಡಿಕೊಳ್ತಿದ್ರು...’
‘ಬಾಲಕರಿಗೆ ಮಂಪರು ಪರೀಕ್ಷೆ ನಡೆಸಬಹುದೇ ಹೊರತು ಎಸ್ಸೆಸ್ಸೆಲ್ಸಿ ಮರು ಪರೀಕ್ಷೆ ಮಾಡೋದಿಲ್ಲ’ ಮಗಳಿಗೆ ಸಮಾಧಾನ ಹೇಳಿ ಕಳಿಸಿದೆ.
‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆಯಂತೆ, ಕಾಪಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಕಣ್ರೀ’ ಎಂದಳು ಸುಮಿ.
‘ಹೌದು. ಅಕ್ರಮಗಳನ್ನು ತಡೆಯಲಾಗದಿದ್ದರೆ ಪರೀಕ್ಷೆ ನಡೆಸುವುದರಲ್ಲಿ ಅರ್ಥವಿಲ್ಲ’.
‘ಪರೀಕ್ಷಾ ಪದ್ಧತಿಯನ್ನೇ ರದ್ದು ಮಾಡಿಬಿಡಬೇಕು ಕಣ್ರೀ...’
‘ವಿದ್ಯಾರ್ಥಿಗಳ ಜ್ಞಾನಮಾಪನ ಮಾಡಲು ಪರೀಕ್ಷೆ ಬೇಕಲ್ವೇ?’
‘ಮಂಪರು ಪರೀಕ್ಷೆ ನಡೆಸಿಯೋ, ತಾಂಬೂಲ ಪ್ರಶ್ನೆಯಿಂದಲೋ ವಿದ್ಯಾರ್ಥಿಗಳ ಜ್ಞಾನ ಪರೀಕ್ಷಿಸಿ ಮಾರ್ಕ್ಸ್ ನೀಡುವ ಪದ್ಧತಿ ಜಾರಿಗೆ ತರಬೇಕು’.
‘ಪಠ್ಯಪುಸ್ತಕ ಸಿದ್ಧಪಡಿಸುವವರಿಗೂ ಮಂಪರು ಪರೀಕ್ಷೆ ಅಗತ್ಯವಿದೆ ಅನ್ಸುತ್ತೆ. ಪಾಠದ ಆಯ್ಕೆಯೇ ಪಡಿಪಾಟಲಾಗಿ ನಗೆಪಾಟಲಾಗಿದೆ’.
‘ಅದು ಪಂಥ ವಿವಾದ. ಮಕ್ಕಳು ಎಡ ಪಂಥದ ಪಾಠ ಓದಬೇಕೊ, ಬಲ ಪಂಥದ್ದು ಓದಬೇಕೊ ಅಂತ’.
‘ಪಂಥ ಫಜೀತಿ ಮುಗಿಯುವಂತಿಲ್ಲ. ಪಂಕ್ತಿ ಭೇದಕ್ಕಿಂತ ಪಂಥೀ ಭೇದ ಅಪಾಯಕಾರಿ’.
‘ಪಠ್ಯದಲ್ಲಿ ಎಡ ಪಂಥಕ್ಕೆ 50, ಬಲ ಪಂಥಕ್ಕೆ 50 ಅಂಕದ ಪಾಠ ಸಿದ್ಧಪಡಿಸಲು ಸರ್ಕಾರ ಅವಕಾಶ ನೀಡಿದ್ರೆ ವಿವಾದ ಬಗೆಹರಿಯಬಹುದು. ಮಕ್ಕಳು ತಮಗೆ ಬೇಕಾದ ಪಂಥ ಓದಿಕೊಳ್ತಾರೆ...’ ಬೇಸರದಿಂದ ಹೇಳಿದಳು ಸುಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.