ADVERTISEMENT

ಸಂಪಾದಕೀಯ: ಹಳೆಯ ವಾಹನಗಳ ಗುಜರಿ ನೀತಿ; ಗ್ರಾಹಕರಿಗೂ ಉದ್ಯಮಕ್ಕೂ ಪ್ರೋತ್ಸಾಹವಿರಲಿ

ಹೆಚ್ಚು ಪರಿಸರ ಮಾಲಿನ್ಯ ಉಂಟುಮಾಡದ ವಾಹನ ತಯಾರಿಕೆಗೆ ಪ್ರೋತ್ಸಾಹ ದೊರೆತಷ್ಟೂ ಉದ್ದೇಶಿತ ನೀತಿಯು ಹೆಚ್ಚು ಪರಿಣಾಮಕಾರಿ ಆಗಬಲ್ಲದು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 1:34 IST
Last Updated 30 ಮಾರ್ಚ್ 2021, 1:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಭಾರತದ ರಸ್ತೆಗಳಲ್ಲಿ ಸಂಚರಿಸುತ್ತಿರುವ ಹಳೆಯ ವಾಹನಗಳು ಎಷ್ಟು ಎಂಬ ಲೆಕ್ಕವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದೆ. ಒಟ್ಟು ನಾಲ್ಕು ಕೋಟಿ ವಾಹನಗಳು ‘ಹಳೆಯವು’ ಎಂಬ ಹಣೆಪಟ್ಟಿ ಹೊತ್ತುಕೊಳ್ಳಲು ಅರ್ಹವಾಗಿವೆ. ಇದರಲ್ಲಿ ಒಂದು ಗಮನಾರ್ಹ ಅಂಶವೆಂದರೆ, ಅತಿಹೆಚ್ಚಿನ ಸಂಖ್ಯೆಯ ಹಳೆಯ ವಾಹನಗಳು ಇರುವುದು ಕರ್ನಾಟಕದಲ್ಲಿ. ರಾಜ್ಯದಲ್ಲಿ 70 ಲಕ್ಷಕ್ಕೂ ಹೆಚ್ಚು ಇಂತಹ ವಾಹನಗಳು ಇವೆ ಎಂದು ಸಚಿವಾಲಯ ಕಲೆಹಾಕಿರುವ ಅಂಕಿ–ಅಂಶಗಳು ಹೇಳುತ್ತವೆ. ಹಳೆಯ ವಾಹನಗಳ ಸಂಖ್ಯೆಯ ಪಟ್ಟಿಯಲ್ಲಿ ಉತ್ತರ ಪ್ರದೇಶ ಹಾಗೂ ದೆಹಲಿ ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನದಲ್ಲಿ ಇವೆ. ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪದಲ್ಲಿ ಇರುವ ಇಂತಹ ವಾಹನಗಳ ವಿವರ ಕಲೆಹಾಕಲು ಸದ್ಯಕ್ಕೆ ಸಾಧ್ಯವಾಗಿಲ್ಲ. ಅಲ್ಲಿಂದಲೂ ಸಮಗ್ರ ವಿವರ ದೊರೆತ ನಂತರ, ಈ ಪಟ್ಟಿಯಲ್ಲಿ ತುಸು ಬದಲಾವಣೆಗಳು ಆಗಲೂಬಹುದು. ಅದೇನೇ ಇದ್ದರೂ, ಹಳೆಯ ವಾಹನಗಳ ಸಂಖ್ಯೆಯನ್ನು ಕೇಂದ್ರ ಸರ್ಕಾರವು ಈಚೆಗೆ ಪ್ರಕಟಿಸಿರುವ ಹಳೆಯ ವಾಹನಗಳ ಗುಜರಿ ನೀತಿಯ ಜೊತೆ ಇರಿಸಿ ಅರ್ಥ ಮಾಡಿಕೊಳ್ಳಬೇಕು. ಹದಿನೈದು ವರ್ಷಗಳಿಗಿಂತ ಹಳೆಯದಾದ ಪ್ರಯಾಣಿಕ ವಾಹನಗಳ ಮೇಲೆ, ಎಂಟು ವರ್ಷಗಳಿಗಿಂತ ಹಳೆಯ ದಾದ ಸರಕು ಸಾಗಣೆ ವಾಹನಗಳ ಮೇಲೆ ‘ಹಸಿರು ತೆರಿಗೆ’ ವಿಧಿಸುವ ಪ್ರಸ್ತಾವ ಇದೆ. ವಿದ್ಯುತ್ ಚಾಲಿತ ವಾಹನಗಳು, ಸಿಎನ್‌ಜಿ ಅಥವಾ ಎಲ್‌ಪಿಜಿ ಬಳಸುವ ವಾಹನಗಳು, ಹೈಬ್ರಿಡ್ ಎಂಜಿನ್ ಹೊಂದಿರುವ ವಾಹನಗಳು ಈ ತೆರಿಗೆಯ ವ್ಯಾಪ್ತಿಯಿಂದ ಹೊರಗೆ ಇರಲಿವೆ. ರೈತರು ಕೃಷಿ ಚಟುವಟಿಕೆಗಳಿಗೆ ಬಳಸುವ ಟ್ರ್ಯಾಕ್ಟರ್‌, ಟಿಲ್ಲರ್‌ಗಳು ಕೂಡ ಈ ತೆರಿಗೆಯಿಂದ ಹೊರಗೆ ಇರಲಿವೆ.

ಇಂಗಾಲದ ಡೈ ಆಕ್ಸೈಡ್‌ ಅನಿಲವನ್ನು ಅತಿಯಾಗಿ ಹೊರಸೂಸುವ ವಾಹನಗಳ ಬಳಕೆಯನ್ನು ನಿರುತ್ತೇಜಿಸುವುದು, ಪರಿಸರವನ್ನು ಮಲಿನಗೊಳಿಸದ ವಾಹನಗಳ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಗುಜರಿ ನೀತಿಯ ಹಿಂದಿನ ಉದ್ದೇಶ. ಇದರ ಜೊತೆಯಲ್ಲೇ, ದೇಶದ ಒಟ್ಟು ಆಂತರಿಕ ಉತ್ಪಾದನೆಗೆ (ಜಿಡಿಪಿ) ಸರಿಸುಮಾರು ಶೇಕಡ 7.5ರಷ್ಟು ಕೊಡುಗೆ ನೀಡುವ ಆಟೊಮೊಬೈಲ್‌ ಉದ್ಯಮಕ್ಕೆ ಇನ್ನಷ್ಟು ಚೈತನ್ಯ ತಂದುಕೊಡುವ ಕೆಲಸ ಕೂಡ ವಾಹನಗಳ ಗುಜರಿ ನೀತಿಯಿಂದ ಸಾಧ್ಯವಾಗುವ ನಿರೀಕ್ಷೆ ಇದೆ. ಒಳ್ಳೆಯ ಉದ್ದೇಶ ಹೊಂದಿರುವಂತೆ ಕಾಣಿಸುವ ಈ ನೀತಿಯ ಅನುಷ್ಠಾನವು ನಿಂತಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಷ್ಟರ ಮಟ್ಟಿಗೆ ಸಮನ್ವಯದಿಂದ ಕೆಲಸ ನಿಭಾಯಿಸುತ್ತವೆ ಎಂಬುದರ ಮೇಲೆ. ಈ ನೀತಿಯು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕು ಎಂದಾದರೆ, ಕೇಂದ್ರದ ಜೊತೆ ರಾಜ್ಯಗಳು ಕೈಜೋಡಿಸಬೇಕಿರುವುದು ಅನಿವಾರ್ಯ. ಹಾಗೆಯೇ, ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿಯನ್ನು ಅನುಷ್ಠಾನಕ್ಕೆ ತರಬೇಕಿರುವುದು ಕೇಂದ್ರದ ಹೊಣೆ. ಹಳೆಯ ವಾಹನಗಳನ್ನು ತಪಾಸಣೆಗೆ ಒಳ‍ಪಡಿಸಿ, ಅವು ಎಷ್ಟರಮಟ್ಟಿಗೆ ಸುಸ್ಥಿತಿಯಲ್ಲಿ ಇವೆ ಎಂಬ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ರಾಜ್ಯಗಳ ಸಾರಿಗೆ ಇಲಾಖೆಗೆ ಬಹಳ ಒಳ್ಳೆಯ ಹೆಸರೇನೂ ಇಲ್ಲ. ವಾಹನಗಳ ಫೋಟೊ ತಂದರೆ ಸಾಕು, ಅವುಗಳ ಹೊಗೆ ತಪಾಸಣೆ ನಡೆಸಿ, ಪ್ರಮಾಣಪತ್ರ ಕೊಡುವ ಕೇಂದ್ರಗಳನ್ನು ಈಗಲೂ ಕಾಣಬಹುದು. ಹೊಸ ನೀತಿಯು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು, ಅದರಿಂದ ವಾಹನ ಉದ್ಯಮಕ್ಕೆ, ಪರಿಸರಕ್ಕೆ ಒಳ್ಳೆಯದಾಗಬೇಕು ಎಂದಾದರೆ ಇಂತಹ ‘ಜಾಣ ವ್ಯವಹಾರ’ಗಳನ್ನು ನಿಗ್ರಹಿಸಲೇಬೇಕಾಗುತ್ತದೆ. ಹಳೆಯ ವಾಹನ ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ, ಹೊಸ ವಾಹನದ ಬೆಲೆಯಲ್ಲಿ ಶೇಕಡ 5ರಷ್ಟು ರಿಯಾಯಿತಿ ಇರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಈಚೆಗೆ ಘೋಷಿಸಿದ್ದಾರೆ. ಇಂತಹ ಸ್ವಾಗತಾರ್ಹ ಕ್ರಮಗಳ ಜೊತೆಯಲ್ಲೇ, ಪರಿಸರ ಮಾಲಿನ್ಯ ಹೆಚ್ಚು ಉಂಟುಮಾಡದ ವಾಹನ ತಯಾರಿಕೆಯನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು. ಆಗ, ಉದ್ದೇಶಿತ ನೀತಿಯು ಹೆಚ್ಚು ಪರಿಣಾಮಕಾರಿ ಆಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT