ADVERTISEMENT

ಸಂಪಾದಕೀಯ: ಚಿಲ್ಲರೆ ಹಣದುಬ್ಬರ ಪ್ರಮಾಣ ಇಳಿಕೆ;ಜೀವನ ನಿರ್ವಹಣೆ ವೆಚ್ಚ ತಗ್ಗಿದೆಯೇ?

ಸಂಪಾದಕೀಯ
Published 19 ಜುಲೈ 2025, 0:30 IST
Last Updated 19 ಜುಲೈ 2025, 0:30 IST
   
ಹಣದುಬ್ಬರ ಪ್ರಮಾಣ ಇಳಿಮುಖಗೊಂಡು, ಆಹಾರ ಪದಾರ್ಥಗಳಿಗೆ ಮಾಡಬೇಕಿರುವ ವೆಚ್ಚ ಕಡಿಮೆ ಆಗಿದೆ. ಜನರ ಒಟ್ಟಾರೆ ಜೀವನ ನಿರ್ವಹಣೆ ವೆಚ್ಚ ಕಡಿಮೆ ಆಗಿಲ್ಲ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಕಳೆದ ಕೆಲವು ತಿಂಗಳುಗಳಿಂದ ಕಡಿಮೆ ಆಗುತ್ತಿದೆ. ‘ರಾಷ್ಟ್ರೀಯ ಸಾಂಖ್ಯಿಕ ಕಚೇರಿ’ಯು (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಇದನ್ನು ದೃಢಪಡಿಸಿವೆ. ‘ಗ್ರಾಹಕ ಬೆಲೆ ಸೂಚ್ಯಂಕ’ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣವು ಜೂನ್‌ ತಿಂಗಳಲ್ಲಿ ಶೇ 2.1ಕ್ಕೆ ಇಳಿದಿದೆ. ಇದು ಮೇ ತಿಂಗಳಲ್ಲಿ ಶೇ 2.82ರಷ್ಟು ಇತ್ತು. ಜೂನ್‌ನಲ್ಲಿ ದಾಖಲಾಗಿರುವ ಚಿಲ್ಲರೆ ಹಣದುಬ್ಬರ ಪ್ರಮಾಣವು ಆರು ವರ್ಷಗಳ ಕನಿಷ್ಠ ಮಟ್ಟದ್ದು. ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 4ರಲ್ಲಿ ಮಿತಿಗೊಳಿಸುವ ಹೊಣೆಯು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮೇಲಿದೆ.

ಜೂನ್‌ ತಿಂಗಳನ್ನೂ ಪರಿಗಣಿಸಿದರೆ ಚಿಲ್ಲರೆ ಹಣದುಬ್ಬರ ದರವು ಸತತ ಐದು ತಿಂಗಳುಗಳಿಂದ ಶೇ 4ಕ್ಕಿಂತ ಕಡಿಮೆ ದಾಖಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಸರಾಸರಿ ಶೇ 2.7ರಷ್ಟಾಗಿದೆ. ಇದು ‘ಆರ್‌ಬಿಐ’ನ ನಿರೀಕ್ಷೆಯಾದ ಶೇ 2.9ಕ್ಕಿಂತ ಕಡಿಮೆ. 2024ರ ನವೆಂಬರ್‌ ತಿಂಗಳಿನಿಂದ ಹಣದುಬ್ಬರ ಪ್ರಮಾಣ ಇಳಿಮುಖವಾಗಿದೆ.

2019ರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 1.97ರಷ್ಟು ದಾಖಲಾಗಿತ್ತು. ಅದಾದ ನಂತರ ಕನಿಷ್ಠ ಪ್ರಮಾಣ ದಾಖಲಾಗಿರುವುದು ಜೂನ್‌ ತಿಂಗಳಲ್ಲಿ. ಗ್ರಾಮೀಣ ಪ್ರದೇಶಗಳಲ್ಲಿ ದಾಖಲಾಗಿರುವ ಶೇ 1.97ರಷ್ಟು ಹಣದುಬ್ಬರವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ. ನಗರ ಪ್ರದೇಶಗಳಲ್ಲಿ ಶೇ 2.56ರಷ್ಟು ಹಣದುಬ್ಬರ ದಾಖಲಾಗಿದೆ. ಆಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆ ಆಗಿರುವುದು ಒಟ್ಟಾರೆ ಹಣದುಬ್ಬರ ಕಡಿಮೆ ಆಗಿರುವುದಕ್ಕೆ ಕಾರಣವಾಗಿದೆ. ಆಹಾರ ಮತ್ತು ಪಾನೀಯಗಳ ಬೆಲೆಯಲ್ಲಿ ಶೇ 0.2ರಷ್ಟು ಇಳಿಕೆ ಆಗಿದೆ. ತರಕಾರಿ ಹಾಗೂ ದ್ವಿದಳ ಧಾನ್ಯಗಳ ಬೆಲೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದೆ.

ADVERTISEMENT

ಕೃಷಿ ಚಟುವಟಿಕೆಗಳು ಉತ್ತಮವಾಗಿರುವ ಕಾರಣದಿಂದಾಗಿ ಮುಂದಿನ ದಿನ ಗಳಲ್ಲಿಯೂ ಆಹಾರ ಪದಾರ್ಥಗಳ ಬೆಲೆಯು ಕಡಿಮೆ ಮಟ್ಟದಲ್ಲಿಯೇ ಇರುವ ನಿರೀಕ್ಷೆ ಇದೆ. ನೈಋತ್ಯ ಮುಂಗಾರು ಮಳೆಯು ದೇಶದ ಬಹುಭಾಗವನ್ನು ಆವರಿಸಿದೆ. ಜೂನ್‌ ತಿಂಗಳ ಪ್ರಥಮಾರ್ಧದಲ್ಲಿ ದೇಶದಲ್ಲಿ ಮಳೆಯ ಕೊರತೆ ಇತ್ತು. ಆದರೆ ಈಗಿನ ಅಂಕಿ–ಅಂಶಗಳ ಪ್ರಕಾರ, ದೇಶದಲ್ಲಿ ಸರಾಸರಿ ಮಳೆಯ ಪ್ರಮಾಣವು ದೀರ್ಘಾವಧಿ ಸರಾಸರಿಗಿಂತ ಶೇ 9.5ರಷ್ಟು ಹೆಚ್ಚಿದೆ. ಮುಂಗಾರು ಅವಧಿಯಲ್ಲಿ ಬೆಳೆಗಳನ್ನು ಬೆಳೆಯುವ ಪ್ರಮಾಣವು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.

ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಳ ಆಗಬಹುದು ಎಂಬ ಭೀತಿಯು ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ ವಿರಾಮ ಘೋಷಣೆಯ ಕಾರಣದಿಂದಾಗಿ ತಗ್ಗಿದೆ. ಹೀಗಾಗಿ ಹಣದುಬ್ಬರ ಪ್ರಮಾಣವು ನಿಯಂತ್ರಣದಲ್ಲಿ ಇರಬಹುದು ಎನ್ನುವ ಆಶಾಭಾವನೆ ಇದೆ. ಆದರೆ, ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಆಹಾರ ಪದಾರ್ಥಗಳನ್ನು ಹೊರತುಪಡಿಸಿ ಇತರ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿದೆ ಎಂಬುದನ್ನು ಗಮನಿಸಬೇಕು. ಶಿಕ್ಷಣ, ಆರೋಗ್ಯ ಸೇವೆಗಳ ವೆಚ್ಚ, ದಿನನಿತ್ಯದ ಇತರ ಹಲವು ಅಗತ್ಯ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ ಆಗಿದೆ. ಅಂದರೆ, ಆಹಾರ ಪದಾರ್ಥಗಳಿಗೆ ಮಾಡಬೇಕಿರುವ ವೆಚ್ಚವು ಕಡಿಮೆ ಆಗಿದ್ದರೂ, ಜನರ ಒಟ್ಟಾರೆ ಜೀವನ ನಿರ್ವಹಣೆ ವೆಚ್ಚದಲ್ಲಿ ಕಡಿಮೆ ಆಗಿಲ್ಲ.

ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಆಹಾರ ಪದಾರ್ಥಗಳ ಪಾಲು ಹೆಚ್ಚಿದೆ (ಶೇ 46ರಷ್ಟು). ಹೀಗಾಗಿ, ಅವುಗಳ ಬೆಲೆಯಲ್ಲಿ ಆಗುವ ಬದಲಾವಣೆಗಳು ಹಣದುಬ್ಬರದ ಮೇಲೆ ಹೆಚ್ಚು ಪರಿಣಾಮ ಉಂಟು ಮಾಡುತ್ತವೆ. ಹಣದುಬ್ಬರಕ್ಕೆ ಸಂಬಂಧಿಸಿದ ಜೂನ್‌ ತಿಂಗಳ ಅಂಕಿ–ಅಂಶಗಳು ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಆಲೋಚನೆಗಳ ಮೇಲೆ ಪ್ರಭಾವ ಬೀರಲಿವೆಯೇ ಎಂಬುದು ಈಗಿರುವ ಮಹತ್ವದ ಪ್ರಶ್ನೆ. ‘ಎಂಪಿಸಿ’ ಸಭೆ ಆಗಸ್ಟ್‌ಗೆ ನಿಗದಿಯಾಗಿದೆ. ಕಳೆದ ತಿಂಗಳ ಸಭೆಯಲ್ಲಿ ಎಂಪಿಸಿಯು ರೆಪೊ ದರವನ್ನು ಶೇ 0.50ರಷ್ಟು ಕಡಿಮೆ ಮಾಡಿದೆ.

ಫೆಬ್ರುವರಿಯ ನಂತರದಲ್ಲಿ ರೆಪೊ ದರವು ಒಟ್ಟು ಶೇ 1ರಷ್ಟು ಇಳಿಕೆ ಆಗಿರುವುದರಿಂದ, ರೆಪೊ ದರವನ್ನು ಇನ್ನೂ ತಗ್ಗಿಸಲು ಹೆಚ್ಚು ಅವಕಾಶ ಇಲ್ಲ ಎಂದು ಎಂಪಿಸಿ ಹೇಳಿದೆ. ಮುಂದಿನ ತೀರ್ಮಾನ ತೆಗೆದುಕೊಳ್ಳುವ ಮೊದಲು ಕಾದುನೋಡುವ ಕೆಲಸ ಮಾಡಲಾಗುತ್ತದೆ ಎಂದು ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಕೂಡ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.