ADVERTISEMENT

ಕೆರೆ ಉಳಿಸಲು ಮುಂದಾಗಿದ್ದು ಭಯದಿಂದ!

ವಿಜಯಕುಮಾರ್ ಎಸ್.ಕೆ.
Published 31 ಮೇ 2019, 20:00 IST
Last Updated 31 ಮೇ 2019, 20:00 IST
ಆನಂದ ಮಲ್ಲಿಗವಾಡ
ಆನಂದ ಮಲ್ಲಿಗವಾಡ   

ಕೆರೆಗಳಿಗೆಮರುಜೀವ ನೀಡುವ ಕಾಯಕದಲ್ಲಿ ತೊಡಗಿರುವ ಟೆಕಿಆನಂದ ಮಲ್ಲಿಗವಾಡ ಅವರೊಂದಿಗೆ ಫಟಾಫಟ್‌ ಮಾತು

ಬೆಂಗಳೂರಿನಲ್ಲಿ ಮರೆಯಾಗುತ್ತಿರುವ ಕೆರೆಗಳನ್ನು ಉಳಿಸಲು ಮುಂದಾಗಿದ್ದೀರಿ. 2025ರ ವೇಳೆಗೆ45 ಕೆರೆಗಳ ಪುನರುಜ್ಜೀವನಕ್ಕೆ ಪಣ ತೊಟ್ಟಿದ್ದೀರಿ. ನಿಮ್ಮ ಈ ಕಾಯಕಕ್ಕೆ ಸ್ಫೂರ್ತಿ ಯಾರು?
ನಾನು ಈ ಕೆಲಸ ಆರಂಭಿಸಿದ್ದು ಯಾರದ್ದೋ ಸ್ಫೂರ್ತಿಯಿಂದಲ್ಲ, ಭಯದಿಂದ. 2025ರ ವೇಳೆಗೆ ಬೆಂಗಳೂರಿನಲ್ಲಿ ನೀರು ಸಿಗುವುದಿಲ್ಲ, ಅಂತರ್ಜಲ ಖಾಲಿಯಾಗಲಿದೆ ಎಂಬ 2016ರ ಬಿಬಿಸಿ ವರದಿ ನನ್ನಲ್ಲಿ ಭಯ ಹುಟ್ಟಿಸಿತು. ಬೆಂಗಳೂರು ನಮ್ಮ ರಾಜ್ಯಕ್ಕೆ ಕಿರೀಟಪ್ರಾಯ. ಇಲ್ಲಿ ಬರುವ ಆದಾಯವನ್ನು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆಸರ್ಕಾರ ಬಳಸುತ್ತಿದೆ. ಬೆಂಗಳೂರು ಉಳಿಯದಿದ್ದರೆ ಮುಂದೆ ಕಷ್ಟದ ದಿನಗಳು ಎದುರಾಗಲಿವೆ ಎಂಬ ಆತಂಕ ಕಾಡಿತು. ಈ ದೇಶ ಮತ್ತು ರಾಜ್ಯದ ನೀರು ಕುಡಿದು ಬೆಳೆದಿದ್ದೇನೆ. ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಎಂಬ ಬಯಕೆ ಇತ್ತು. ಹೀಗಾಗಿ ಕೆರೆಗಳಿಗೆ ಮರುಜೀವ ನೀಡುವ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ.

ಈ ಕೆಲಸದಲ್ಲಿ ನೀವು ಪರಿಣತಿ ಪಡೆದಿದ್ದು ಹೇಗೆ?
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಕರಮುಡಿ ಎಂಬ ಹಳ್ಳಿ ನನ್ನ ಹುಟ್ಟೂರು. ಸರ್ಕಾರಿ ಶಾಲೆಯಲ್ಲಿ ಓದಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದೇನೆ.‍ಕೆರೆಗಳ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಓದುತ್ತೇನೆ. ಈ ವಿಭಾಗದಲ್ಲಿ ಪಿ.ಜಿ ಡಿಪ್ಲೊಮಾ ಕೂಡ ಮಾಡಿದ್ದೇನೆ. ಹಳ್ಳಿಯಲ್ಲಿದ್ದಾಗ ಓದಿಗಿಂತ ಹೆಚ್ಚಾಗಿ ನಮ್ಮ ಜಮೀನಿನಲ್ಲಿರುವ ಮಲ್ಲಿಗವಾಡಕೆರೆಯಲ್ಲೇ ಹೆಚ್ಚು ಕಾಲ ಕಳೆದಿದ್ದೇನೆ. ಇವೆಲ್ಲದರಿಂದ ಈ ಕೆಲಸಕ್ಕೆ ಅನುಕೂಲವಾಯಿತು.

ADVERTISEMENT

ಈ ಕೆಲಸಕ್ಕೆ ಹಣಕಾಸಿನ ಮೂಲ ಯಾವುದು, ಬಿಬಿಎಂಪಿ ಸೇರಿ ಸ್ಥಳೀಯ ಪ್ರಾಧಿಕಾರಗಳ ಸಹಕಾರ ಇದೆಯೇ?
‘ಸನ್‌ಸೆರಾ’ ಕಂಪನಿಯಲ್ಲಿ ನಾನು ಉದ್ಯೋಗಿಯಾಗಿದ್ದೆ. ಕ್ಯಾಲಸನಹಳ್ಳಿ ಕೆರೆಯನ್ನು ಸನ್‌ಸೆರಾ ಫೌಂಡೇಷನ್‌ ವತಿಯಿಂದಲೇ ₹ 1.17 ಕೋಟಿ ವೆಚ್ಚದಲ್ಲಿ ಮರುನಿರ್ಮಾಣ ಮಾಡಲಾಯಿತು. ಇದೇ ರೀತಿ ಕಾರ್ಪೊರೇಟ್ ಕಂಪನಿಗಳ ಸಹಕಾರ ಪಡೆಯುತ್ತಿದ್ದೇನೆ. ಕೆರೆಗಳು ಸ್ಥಳೀಯ ಸರ್ಕಾರಗಳ ವ್ಯಾಪ್ತಿಯಲ್ಲಿ ಇರುತ್ತವೆ. ಮೊದ ಮೊದಲು ವಿರೋಧ ವ್ಯಕ್ತವಾಗುತ್ತಿತ್ತು. ಕಡಿಮೆ ಖರ್ಚಿನಲ್ಲಿ ಕೆರೆಗಳನ್ನು ನೈಸರ್ಗಿಕವಾಗಿ ಪುನರುಜ್ಜೀವನ ಮಾಡುತ್ತಿರುವುದರಿಂದ ಈಗ ಅವರಿಗೂ ಅರ್ಥವಾಗಿದೆ. ಅವರ ಸಹಕಾರವೂ ದೊರೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.