
ಲಿಫ್ಟ್ನಲ್ಲಿ ಒಬ್ಬ ಯುವತಿ ಮತ್ತು ಆಕೆಯ ಐದಾರು ವರ್ಷದ ಮಗು ಸಿಕ್ಕರು. ಮಗುವನ್ನು ನಾನು ಮಾತಾಡಿಸುತ್ತಲೇ ಆ ಯುವತಿ ನಿಮ್ಮ ವಯಸ್ಸೆಷ್ಟು ಅಂತ ಕೇಳಿದಳು. ಹಿನ್ನೆಲೆ ಮುನ್ನೆಲೆ ಇಲ್ಲದೇ ಹಾಕಿದ ಆಕೆಯ ಪ್ರಶ್ನೆಗೆ ತಬ್ಬಿಬ್ಬಾದ ನಾನು ನಗುತ್ತಲೇ ಉತ್ತರಿಸಿದೆ. ಆಕೆಗೆ ಕೇಳಿದೆ: ವಯಸ್ಸು ಕೇಳಿದ್ದು ಏಕೆ, ಏನು ಕಾರಣ?
‘ನನ್ನ ತೀರಿ ಹೋದ ತಂದೆ ತಾಯಿ ಅವರ ವೃದ್ಧಾಪ್ಯದಲ್ಲಿ ಏನು ಯೋಚಿಸಿದ್ದಿರಬಹುದು? ನಾನು ಅವರಿಗೆ ಎಷ್ಟು ದುಃಖ ಕೊಟ್ಟಿರಬಹುದು ಅಥವಾ ಅವರನ್ನು ನಾನು ಸರಿಯಾಗಿ ನೋಡಿಕೊಳ್ಳಲಿಲ್ಲವೋ? ಹೀಗೆ ಯೋಚಿಸುತ್ತಿರುತ್ತೇನೆ’ ಎಂದು ಆಕೆ ಉತ್ತರಿಸಿದಳು.
ನಾವಿರುವ ಅಂತಸ್ತಿನ ಮೇಲಿನ ಅಂತಸ್ತಿನಲ್ಲಿ ಕೆಲವೊಮ್ಮೆ ಜೋರಾಗಿ ಕೂಗುವ, ಜಗಳಾಡುವ, ಅಳುವ ಸದ್ದು ಕೇಳುತ್ತಿರುತ್ತದೆ. ಮಹಾನಗರಗಳಲ್ಲಿ ಪಕ್ಕದ ಮನೆಯಲ್ಲಿ ಯಾರಾದರೂ ಸತ್ತರೂ ಗೊತ್ತಾಗುವುದಿಲ್ಲ. ಜಗಳಾಡಿಕೊಂಡರೂ ಯಾರೂ ಜಗಳ ನಿಲ್ಲಿಸುವುದಕ್ಕೆ ಹೋಗದ ನಾಗರಿಕತೆ ಇಲ್ಲಿದೆ. ಹಿಂದೆ ಯಾರೊಬ್ಬರ ಮನೆಯ ವಿಷಯವೂ ಗುಟ್ಟಾಗಿರುತ್ತಿರಲಿಲ್ಲ. ಒಬ್ಬರ ಕಷ್ಟಸುಖಕ್ಕೆ ಒದಗುತ್ತಿದ್ದ ಸಹಬಾಳ್ವೆಯಿತ್ತು. ರಕ್ತ ಸಂಬಂಧಿಗಳಿಗೂ ಹೆಚ್ಚಾಗಿ ನೆರೆಹೊರೆಯವರೇ ಕಷ್ಟಕ್ಕೆ ಒದಗುತ್ತಿದ್ದರು. ಹಳ್ಳಿಗಳಲ್ಲಿ ಈಗಲೂ ಅಂತಹ ಜನರಿರಬಹುದು. ಆದರೆ, ಮಹಾನಗರಗಳ ಬಹುಅಂತಸ್ತುಗಳ ಫ್ಲ್ಯಾಟುಗಳಲ್ಲಿ, ಅಪಾರ್ಟ್ಮೆಂಟುಗಳಲ್ಲಿ ನೀನ್ಯಾರೋ, ನಾನ್ಯಾರೋ! ಜನ ನಡುಗಡ್ಡೆಗಳಂತೆ ಬದುಕುತ್ತಿದ್ದಾರೆ. ಒಂದೇ ಅಂತಸ್ತಿನಲ್ಲಿದ್ದರೂ ಒಬ್ಬರಿಗೊಬ್ಬರು ಕಾಣುವುದು ಲಿಫ್ಟುಗಳಲ್ಲಿ. ಪರಿಚಯವಿದ್ದರೂ ಸಲಿಗೆ ಇರದು. ಯಾರಿಗೂ ಹತ್ತಿರವಾಗುವ ಇಚ್ಛೆಯೂ ಇರುವುದಿಲ್ಲ. ಸಿಕ್ಕಾಗ ‘ಹಲೋ’ ಹೇಳಿದರೆ ಹೆಚ್ಚು. ಹೀಗಿರುವಾಗ ಯಾಕೋ ಯುವತಿಯ ಮಾತು ಮನಕಲಕಿತು. ಮುಖದಲ್ಲಿ ಒಂದು ತರಹದ ಹುಚ್ಚುಕಳೆ, ಹಚ್ಚಿದ ಕಾಡಿಗೆ ಎಲ್ಲ ಹರಡಿಕೊಂಡಿದೆ, ನೀಟಾಗಿಲ್ಲ. ಕೂದಲು ಒಪ್ಪವಾಗಿಲ್ಲ. ಆಕೆ ತುಂಬಾ ಡಿಸ್ಟರ್ಬ್ ಆಗಿದ್ದಾಳೆ ಎಂದು ಯಾರಿಗಾದರೂ ತಿಳಿಯುತ್ತಿತ್ತು.
‘ಇಷ್ಟೊಂದು ಚಿಂತಿಸಬೇಡ, ನೀನು ಖುಷಿಯಾಗಿದ್ದರೆ ಅಪ್ಪ-ಅಮ್ಮನ ಆತ್ಮವೂ ಖುಷಿಯಾಗಿರುತ್ತದೆ. ನಿನ್ನ ಮುಂದಿನ ಬದುಕು ನೋಡು. ಮುದ್ದಾದ ಮಗಳಿದ್ದಾಳೆ, ಮನಸ್ಸನ್ನು ಕ್ರಿಯಾಶೀಲವಾಗಿಡು. ಒಳ್ಳೆಯ ಪುಸ್ತಕಗಳನ್ನು ಓದು, ಸಂಗೀತ ಕೇಳು, ಯಾವುದಾದರೂ ಹಾಬಿ ಕ್ಲಾಸ್ ಸೇರಿಕೋ’ ಎಂದೆಲ್ಲ ಅವಳನ್ನು ಸಮಾಧಾನಿಸಿದೆ. ‘ನಿಮ್ಮೊಂದಿಗೆ ಮಾತಾಡಬೇಕು, ಮನೆಗೆ ಬರ್ತೀನಿ, ಯಾವ ನಂಬರು’ ಎಂಬ ಪ್ರಶ್ನೆಗಳಿಗೆ ಉತ್ತರಿಸಿದೆನಾದರೂ ಹೃದಯ ಮರುಗುತ್ತಿತ್ತು.
ಗೌರೀಶ್ ಕಾಯ್ಕಿಣಿ ಒಂದೆಡೆ ಬರೆಯುತ್ತಾರೆ: ‘ಇಂದು ಪ್ರಪಂಚದಲ್ಲಿ ಮರುಭೂಮಿ ಹಬ್ಬುತ್ತಿದೆಯಂತೆ. ಈ ಭೌಗೋಳಿಕ ಆಪತ್ತಿಗೂ ಮಿಗಿಲಾಗಿ ನಮ್ಮ ಇಂದಿನ ಜೀವನದಲ್ಲಿ ನಮ್ಮ ನಿಮ್ಮ ಹೃದಯಗಳಲ್ಲಿ ಘೋರವಾದ ಒಂದು ಮರುಭೂಮಿ ಬೆಳೆದು ಹಬ್ಬುತ್ತಿದೆ. ಎದೆ ಎದೆಯೊಳಗಿನ ನಡುವಿನ ಎಲ್ಲ ಹಸಿರು ಹಸಿ ತೇವು ತಂಪು ಆರಿ ಭಣಗುಡುವ ಅಂತರಂಗದ ಈ ಜನ್ಮಸ್ಥಾನ ಶೂನ್ಯವಾಗುತ್ತ ಸುತ್ತಲೂ ವಿಸ್ತರಿಸುತ್ತ ಸಾಗಿದೆ. ಸದ್ಯ ಪ್ರಯೋಜನ, ಸಂಕುಚಿತ ಸ್ವಾರ್ಥ, ಕಾರ್ಪಣ್ಯ ದೋಷೋಪಹತ ಸ್ವಭಾವ. ಅದರಿಂದ ಅನಿವಾರ್ಯವಾಗಿ ಬೆಳೆದ ಬದುಕಿನ ಹೋರಾಟ –ಏರಾಟ ಅದರ ತುಳಿದಾಟದಲ್ಲಿ ಬಾಂಧವ್ಯ –ಬಂಧನವಾಗಿ, ಅದೂ ಹರಿದು ಚೂರಾಗಿ ಬಿಡಿ ಬಿಡಿ ವ್ಯಕ್ತಿಗಳು ಹಾಕುವ ಹುಸಿ ಹುಡದಿಯಲ್ಲಿ ಬಾಳೆಲ್ಲ ಹುಡು ಹುಡಿ ಆಗಿದೆ.’
ಎಷ್ಟು ಸೊಗಸಾಗಿ ವ್ಯಾಖ್ಯಾನಿಸಿದ್ದಾರೆ. ಮನುಷ್ಯ ನಡುಗಡ್ಡೆಯಷ್ಟೇ ಅಲ್ಲ, ಮರುಭೂಮಿಯೂ ಆಗುತ್ತಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.