ADVERTISEMENT

ನುಡಿ ಬೆಳಗು: ಯಾರೂ ಅರಿಯದ ವೀರರು

ದೀಪಾ ಹಿರೇಗುತ್ತಿ
Published 9 ಫೆಬ್ರುವರಿ 2026, 23:30 IST
Last Updated 9 ಫೆಬ್ರುವರಿ 2026, 23:30 IST
   

2018ನೇ ಇಸವಿಯ ಸೆಪ್ಟೆಂಬರ್‌ ಇಪ್ಪತ್ತೆಂಟನೇ ತಾರೀಕು. ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ಭೂಕಂಪ ಮತ್ತು ಸುನಾಮಿ ಒಟ್ಟೊಟ್ಟಿಗೇ ಅಪ್ಪಳಿಸಿದವು. ಪಾಲು ನಗರದ ವಿಮಾನ ನಿಲ್ದಾಣದ ವಾಯುಸಂಚಾರವನ್ನು ನಿಯಂತ್ರಿಸುವ ಗೋಪುರದಲ್ಲಿ ಎಂದಿನಂತೆಯೇ ವಿಮಾನಗಳಿಗೆ ದಾರಿ ಸುಗಮಗೊಳಿಸಿಕೊಡುವ ಕೆಲಸ ಸಾಗಿತ್ತು. ಅಷ್ಟು ಹೊತ್ತಿಗೆ ಭೂಮಿ ಕಂಪಿಸಲು ಪ್ರಾರಂಭವಾಯಿತು. ನೋಡನೋಡುತ್ತಿದ್ದಂತೆಯೇ ಸಮುದ್ರತೀರದ ನಗರ ಭೂಕಂಪಕ್ಕೆ ಒಳಗಾಯಿತು. ಒಂದು ವಿಮಾನ ಟೇಕ್‌ ಆಫ್‌ ಆಗಬೇಕಿತ್ತು. ಆದರೆ ಗೋಪುರದೊಳಗಿದ್ದ ಸಿಬ್ಬಂದಿ ಹೀಗಾಗುತ್ತಿದೆ ಎಂಬ ಫೋನ್‌ ಕರೆ ಬಂದ ತಕ್ಷಣ ಹೊರಗೆ ಓಡಿಹೋದರು. ಆದರೆ ಇಪ್ಪತ್ತೊಂದು ವರ್ಷದ ಏರ್‌ ಟ್ರಾಫಿಕ್‌ ನಿಯಂತ್ರಕ ಅಂಟೋನಿಯಸ್‌ ಗುನಾವಾನ್‌ ನಿಯಂತ್ರಣ ಗೋಪುರವನ್ನು ಬಿಟ್ಟು ಹೊರಬರಲಿಲ್ಲ. ಗೋಪುರ ಕುಸಿದು ಬೀಳುವ ಸಾಧ್ಯತೆ ದಟ್ಟವಾಗಿತ್ತು. ಸಹೋದ್ಯೋಗಿಗಳು ಹೊರಗೆ ಬರುವಂತೆ ಕರೆ ಮಾಡುತ್ತಿದ್ದರೂ ಆತ ಬರಲಿಲ್ಲ. 147 ಜನರನ್ನು ಹೊತ್ತಿದ್ದ ವಿಮಾನ ರನ್‌ವೇನಲ್ಲಿತ್ತು. ಗುನಾವಾನ್‌ ಅನುಮತಿ ಕೊಟ್ಟೊಡನೆ ವಿಮಾನ ಟೇಕ್‌ ಆಫ್ ಆಯಿತು.‌ ಅಷ್ಟು ಹೊತ್ತಿಗಾಗಲೇ ಗೋಪುರ ಕುಸಿಯಲು ಪ್ರಾರಂಭವಾಗಿತ್ತು. ರನ್‌ವೇನಲ್ಲೂ ಬಿರುಕುಗಳುಂಟಾದವು. ಗೋಪುರದ ಮೆಟ್ಟಿಲುಗಳು ಅವಶೇಷಗಳಿಂದ ಮುಚ್ಚಿಹೋದವು. ಬೇರೆ ದಾರಿ ಇಲ್ಲದೇ ಗುನಾವಾನ್‌ ನಾಲ್ಕನೇ ಮಹಡಿಯಿಂದ ಜಿಗಿದರು. ತೀವ್ರಗಾಯಗಳಾದ ಅವರನ್ನು ಬೇರೆಡೆಗೆ ಕರೆದೊಯ್ಯಲು ಹೆಲಿಕಾಪ್ಟರ್‌ ಬೇಕಾಗಿತ್ತು.

ದುರ್ದೈವವಶಾತ್‌ ಭೂಕಂಪ, ಸುನಾಮಿಯ ಕಾರಣದಿಂದ ಅದು ತಲುಪುವುದು ತಡವಾಗಿ ಗುನಾವಾನ್ ಮೃತಪಟ್ಟರು. ಅವತ್ತು ಸುಲಾವೆಸಿ ದ್ವೀಪದಲ್ಲಿ ಸಾವಿರದ ಇನ್ನೂರಕ್ಕೂ ಹೆಚ್ಚು ಜನ ಮೃತಪಟ್ಟರು. ಆದರೆ ಸಾವು ಬಾಗಿಲಲ್ಲಿದ್ದರೂ ಓಡದೇ ವಿಮಾನದಲ್ಲಿದ್ದ 147 ಜನರ ಪ್ರಾಣ ಉಳಿಸಿದ ಇಪ್ಪತ್ತೊಂದರ ಎಳೆಯನ ತ್ಯಾಗ ಅಂತಿಂಥದ್ದಲ್ಲ. ಏನೇ ಆದರೂ ತನ್ನ ಕರ್ತವ್ಯಪ್ರಜ್ಞೆಯನ್ನು ಮರೆಯದ ಅಪರೂಪದ ಉದ್ಯೋಗಿಯವರು. ಕಳೆದವಾರ ಮಧ್ಯಪ್ರದೇಶದಲ್ಲಿ ತನ್ನ ಅಂಗನವಾಡಿಯ ಇಪ್ಪತ್ತು ಮಕ್ಕಳನ್ನು ಜೇನುನೊಣಗಳ ದಾಳಿಯಿಂದ ಬಚಾವು ಮಾಡಿ, ಅವುಗಳ ಕಡಿತದಿಂದ ಮೃತಪಟ್ಟ ಕಂಚನ್‌ ಬಾಯಿ ಎಂಬ ಅಂಗನವಾಡಿ ಸಹಾಯಕಿಯ ತ್ಯಾಗವೂ ಈ ಕರ್ತವ್ಯಪ್ರಜ್ಞೆಯ ಮತ್ತೊಂದು ಉದಾತ್ತ ಉದಾಹರಣೆ.

ಕುವೆಂಪು ಅವರ ‘ಯಾರೂ ಅರಿಯದ ವೀರ’ ಕಥೆ ಅನಾಮಧೇಯ ತ್ಯಾಗಿಗಳ ತ್ಯಾಗದ ಪ್ರಾಮುಖ್ಯತೆಯನ್ನು ಕುರಿತು ಹೇಳುತ್ತದೆ. ದೋಣಿಯಲ್ಲಿ ಜನ ಜಾಸ್ತಿಯಾಗಿ ಮುಳುಗುವ ಸಂದರ್ಭ ಬಂದಾಗ ಗೌಡರ ಮನೆಯ ಆಳು ಲಿಂಗ ದೋಣಿಯಿಂದ ನದಿಗೆ ಹಾರಿ ಅವರೆಲ್ಲರ ಪ್ರಾಣ ಉಳಿಸಿದ್ದಷ್ಟೇ ಅಲ್ಲ, ವಾಪಾಸು ಈಜಿ ಬಚಾವಾಗಿ ಬಂದ ಮೇಲೂ ತಾನು ನೀರಿಗೆ ಹಾರಿದ ವಿಚಾರ ಯಾರಿಗೂ ಹೇಳದೇ ಮುಗ್ಗರಿಸಿ ಬಿದ್ದೆ ಎಂದೇ ಹೇಳುವುದು ವಿಶೇಷ. ಅದು ಈ ಯಾರೂ ಅರಿಯದ ವೀರನ ಮಹಾನ್‌ ಗುಣ. ಸಾಮಾನ್ಯರಾಗಿದ್ದೂ ಅಸಾಮಾನ್ಯರಾದ ಇಂತಹ ಯಾರೂ ಅರಿಯದ ವೀರರು ಇರುವುದರಿಂದಲೇ ಜಗತ್ತು ಇಂದಿಗೂ ವಾಸಿಸಲು ಯೋಗ್ಯವಾದ ಸ್ಥಳವಾಗಿಯೇ ಉಳಿದಿದೆ. ಯಾವುದೇ ಹಾರ ತುರಾಯಿಗಳ ಅಪೇಕ್ಷೆ ಇಲ್ಲದೇ ಇಂಥವರು ಸಮಾಜಕ್ಕಾಗಿ ಕೆಲಸ ಮಾಡುತ್ತಲೇ ಇರುತ್ತಾರೆ. ಮತ್ತೆ ಕೆಲವರು ತಮಗೆ ಸಂಬಂಧವೇ ಇಲ್ಲದ ಜನರಿಗಾಗಿ ಸಾವನ್ನೂ ಅಪ್ಪಿಕೊಳ್ಳುತ್ತಾರೆ. ಈ ಹಿಂದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೂಡ ಕೋಟ್ಯಂತರ ಜನರು ತಮ್ಮದೇ ಆದ ರೀತಿಯಲ್ಲಿ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಇಂತಹ ಎಲ್ಲ ಯಾರೂ ಅರಿಯದ ವೀರರಿಗೆ ನಮ್ಮ ಕೃತಜ್ಞತೆಗಳು ಸದಾ ಸಲ್ಲಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.