ADVERTISEMENT

ಹೊರನಾಡಿನಲ್ಲಿರುವ ಹುರುಪು, ಉತ್ಸಾಹ ನಾಡಿನೊಳಗಿರದು!

ಸಮೀರ ಸಿ ದಾಮ್ಲೆ
Published 2 ನವೆಂಬರ್ 2014, 19:30 IST
Last Updated 2 ನವೆಂಬರ್ 2014, 19:30 IST

ಹೌದು, ಮತ್ತೆ ರಾಜ್ಯೋತ್ಸವ ಬಂದಿದೆ. ಸರ್ಕಾರ­ದಿಂದ ಹಲವು ಸ್ತರಗಳಲ್ಲಿ ರಾಜ್ಯೋತ್ಸವದ ಆಚರಣೆಗೆ ಹಣ ಬಿಡುಗಡೆ ಆಗುತ್ತದೆ. ಗ್ರಾಮ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಗಳಲ್ಲಿ ಹಬ್ಬ ನಡೆಯುತ್ತದೆ, ಕನ್ನಡದ ಬಗ್ಗೆ ಭೀಷಣ ಭಾಷಣಗಳು ನಡೆಯುತ್ತವೆ (ಅಲ್ಲೂ ತಪ್ಪು ತಪ್ಪಾಗಿ ಕನ್ನಡದಲ್ಲಿ ಭಾಷಣ ಮಾಡುವವರಿದ್ದಾರೆ). ಆದರೆ ಅಲ್ಲಿ ಕನ್ನಡದ ಬಗ್ಗೆ ನಿಜವಾದ ಕಾಳಜಿ ಎಷ್ಟಿದೆ ಎಂಬುದು ಪ್ರಶ್ನೆ­ಯಾಗಿಯೇ ಉಳಿಯುತ್ತದೆ.

ಇಂತಹ ಆಚರಣೆಗಳು ರಾಜಕೀಯ ನಾಯಕ­ರಿಗೆ ಪ್ರಚಾ­ರದ ವಸ್ತು. ಇನ್ನು ರಾಜಕೀಯದ ಹೊಸಮುಖಗಳಿಗೆ ಇಂತಹ ಕಾರ್ಯಕ್ರಮ ತಮ್ಮ ಸಂಘಟನಾ ಸಾಮರ್ಥ್ಯ ತೋರಿಸುವ, ರಾಜಕೀಯ ಗುರುಗಳ ಪ್ರೀತಿ ಸಂಪಾದಿಸುವ ಹಾಗೂ ತನಗೆ ಸಮಾಜದಲ್ಲಿ ಒಂದು ಗುರುತು (ಐಡೆಂಟಿಟಿ) ತರಿಸಿಕೊಳ್ಳುವ ಸಾಧನ. 

ಬೆಂಗಳೂರಿನ ಹೊರಗೆ ಸಾಮಾಜಿಕ ವ್ಯವ­ಹಾರಗಳಲ್ಲಿ ಕನ್ನಡದ ಬಳಕೆ ಕೇಳಿಬರುತ್ತದಾ­ದರೂ ಕನ್ನಡದ ಬಗೆಗಿನ ಕಳಕಳಿ ದಿನೇ ದಿನೇ ಕಡಿಮೆಯಾಗುತ್ತಿದೆ ಎಂಬುದು ಸತ್ಯ. ಎಣಿಸ­ಬಹು­­ದಾದಷ್ಟು ಸಂಸ್ಥೆಗಳು, ಕೆಲವೇ ಮಂದಿ ನಿಜಾ­ರ್ಥದಲ್ಲಿ ಕನ್ನಡದ ಉತ್ಸವ ಮಾಡುತ್ತಾರೆ; ಮತ್ತು ಅವರು ಅದನ್ನು ಪ್ರತಿದಿನವೂ ಮಾಡು­ತ್ತಾರೆ. ಅವರಿಗೆ ರಾಜ್ಯೋ­ತ್ಸವದ ನೆಪ ಬೇಕಾಗಿಲ್ಲ. ಒಟ್ಟಾರೆಯಾಗಿ ಕನ್ನಡ ನಾಡಿನಲ್ಲಿ ಕನ್ನಡ ರಾಜ್ಯೋತ್ಸವ, ಕನ್ನಡದ ಕಾಳಜಿ, ಕನ್ನಡದ ಬಳಕೆ ಎಲ್ಲಾ ನವೆಂಬರ್ ೧ ಎಂಬೊಂದು ದಿನಕ್ಕೆ ಸೀಮಿತವಾಗುತ್ತಿದೆ ಮತ್ತು ಇದು ತೋರಿಕೆಯ ವಿಷಯವಾಗಿಬಿಟ್ಟಿದೆ.

ಆದರೆ ಹೊರನಾಡಿನಲ್ಲಿ ಪರಿಸ್ಥಿತಿ ತುಂಬಾ ವಿಭಿನ್ನ! ದೇಶ ಬಿಟ್ಟವರು ಎಂದರೆ ಎಲ್ಲಾ ಬಿಟ್ಟವರು ಎಂಬ ಅಭಿಪ್ರಾಯ ಹಲ­ವಾರು ಜನರಲ್ಲಿರಬಹುದು. ಆದರೆ ಯಾವತ್ತೂ ಏನನ್ನಾ­ದರೂ ಕಳೆದುಕೊಂಡರೇನೆ ಬೆಲೆ ತಿಳಿಯುವುದು ಎನ್ನುತ್ತಾರಲ್ಲ; ಹಾಗೆಯೇ ದೇಶ ಬಿಟ್ಟಾಗ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಸಣ್ಣ ಆತಂಕ ಪ್ರಾರಂಭ ಆಗುತ್ತದೆ. ತನ್ನ ನೆಲದ ಮೇಲೆ, ಭಾಷೆಯ ಮೇಲೆ ಅಭಿಮಾನ ಹೆಚ್ಚಲು ಪ್ರಾರಂಭ­ವಾಗುತ್ತದೆ. ಕನ್ನಡದ ನೆಲದ ಸುದ್ದಿ, ಆಗು­ಹೋಗುಗಳ ಕುರಿತು ತಿಳಿದು­ಕೊಳ್ಳುವ ತುಡಿತ ಹೆಚ್ಚಾಗುತ್ತದೆ. ಇಂದಿನ ತಂತ್ರಜ್ಞಾನ ಯುಗ­ದಲ್ಲಿ ಇದೇನೂ ಕಷ್ಟವಲ್ಲ. ತಂತ್ರಜ್ಞಾನದ ಸಹಾಯ­ದಿಂದ ಬಹುಶಃ ಹೊರನಾಡ ಕನ್ನಡಿಗರು ನಾಡಿನೊಳಗಿರುವ ಕನ್ನಡಿಗರಿಗಿಂತ ಹೆಚ್ಚೇ ಕನ್ನಡಕ್ಕೆ ಹತ್ತಿರವಾಗುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ಎದ್ದು ನಾನು ನೋಡುವ ಮೊಬೈಲ್ ತಂತ್ರಾಂಶ ಪ್ರಮುಖ ಕನ್ನಡ ದಿನಪತ್ರಿಕೆಗಳನ್ನು ಮೊಬೈಲಿನಲ್ಲಿ ಒದಗಿಸುವಂತಹದ್ದು. ಕನ್ನಡಿಗ ಮಿತ್ರರ ಜೊತೆಗಿನ ಮಾತು­ಕತೆಗಳಲ್ಲಿ ಚರ್ಚೆಗೆ ಬರುವ ವಿಷಯ­ಗಳೂ ಕನ್ನಡದ್ದೇ. ಲೇಖನಗಳು, ಕನ್ನಡಿಗರ ಬ್ಲಾಗು­ಗಳು, ಬೆಂಗಳೂರು, ಮಂಗ­ಳೂರು, ಮೈಸೂರಿನ ಸುದ್ದಿಗಳು!

ಯಾವುದೋ ಭಾಷೆ, ಸಂಸ್ಕೃತಿಯ ಮಧ್ಯೆ ಬದುಕುವ ಹೊರನಾಡ ಕನ್ನಡಿಗರಿಗೆ,  ಕನ್ನಡ ಶಬ್ದ­ಗಳನ್ನು ಎಲ್ಲಾದರೂ  ಕೇಳಿದರೆ  ಕಿವಿ ನೆಟ್ಟಗಾ­ಗು­ತ್ತದೆ, ಮಾತು ಪರಿಚಯ­ವಾಗು­ತ್ತದೆ. ಇಲ್ಲಿ ಉತ್ತರ ದಕ್ಷಿಣ ಕರ್ನಾಟಕಗಳೆಂಬ ಭೇದವಿಲ್ಲ; ಜಾತಿ-ಮತ-ಪಂಥಗಳ ಪ್ರಶ್ನೆಯಿಲ್ಲ; ಕನ್ನಡಿಗರೆಂಬು­ದಷ್ಟೇ ಮುಖ್ಯ! ಇಂತಹ ಪರಿಚಯಗಳು ಕನ್ನಡ ಕೂಟ­ಗಳ, ಸಂಘಗಳ ಹುಟ್ಟಿಗೆ ನಾಂದಿ­ಯಾಗು­ತ್ತವೆ.  ಇಂತಹ ಕನ್ನಡ ಸಂಘಗಳು ನಮ್ಮ ನಡುವಿನ ಬೆಸು­ಗೆ­ಯನ್ನು ಗಟ್ಟಿಮಾಡುತ್ತವೆ. ಕನ್ನಡ ಭಾಷೆಯ - ಸಂಸ್ಕೃತಿಯ ಪ್ರೀತಿಯನ್ನು ಹೆಚ್ಚು­ಮಾಡು­ತ್ತವೆ. ಹೊರನಾಡ ಕನ್ನಡಿಗರನ್ನು ಒಟ್ಟು­ಮಾಡುತ್ತವೆ. ಎಲ್ಲಾ ಕನ್ನಡಿಗರೂ ಜೊತೆ­ಸೇರ­ಬೇಕೆಂದು ಒಂದಿಲ್ಲೊಂದು ಕಾರಣ ಹುಡುಕಿ ಇಂತಹ ಸಂಘಗಳು ನಡೆಸುವ ಕಾರ್ಯಕ್ರಮಗಳು ನಿಜಾರ್ಥದಲ್ಲಿ ಕನ್ನಡದ ಉತ್ಸವಗಳಾಗಿರುತ್ತವೆ!

ನಮ್ಮ ಬ್ಯಾಂಕಾಕಿನಲ್ಲೂ ಒಂದು ಕನ್ನಡಿಗರ ಕೂಟವಿದೆ - ಥಾಯ್ ಕನ್ನಡ ಬಳಗ. ವರ್ಷಕ್ಕೆ ಮೂರು ನಾಲ್ಕು ಬಾರಿ­ಯಾ­ದರೂ ಸೇರುತ್ತೇವೆ. ರಾಜ್ಯೋತ್ಸವ, ಯುಗಾದಿ, ಆಟೋಟ ಸ್ಪರ್ಧೆ­ಗಳು, ಪ್ರವಾಸ ಹೀಗೆ ಯಾವುದಾದರೂ ಕಾರಣ ಸಿಗು­ತ್ತದೆ ಒಟ್ಟಾಗುವುದಕ್ಕೆ. ಕಾರಣ ಏನೇ ಆಗಿದ್ದರೂ ಪ್ರತೀ ಸಲ ಸೇರಿದಾಗ ಕನ್ನಡದ ಹಬ್ಬವಂತೂ ಆಗುತ್ತದೆ. ಕನ್ನಡ ನಾಡಿನ ಬಗ್ಗೆ ರಸಪ್ರಶ್ನೆ, ಕನ್ನಡ ಹಾಡುಗಳ ಅಂತ್ಯಾಕ್ಷರಿ, ಕರ್ನಾ­ಟಕದ ನೃತ್ಯ-ನಾಟ್ಯ ವೈವಿಧ್ಯಗಳು, ಅಡುಗೆ ಸ್ಪರ್ಧೆ, ಖಾದ್ಯ ವೈವಿಧ್ಯಗಳು ಹೀಗೆ ಕನ್ನಡದ ಡಿಂಡಿಮ ಮೊಳಗುತ್ತದೆ. ಇದು ನವೆಂಬರ್ ೧ಕ್ಕೆ ಸೀಮಿತ­ವಾದ ಚಟುವಟಿಕೆಗಳಲ್ಲ. ಪ್ರತೀ ಕೂಟವೂ ಕನ್ನಡದ ಹಬ್ಬವೇ. ಬ್ಯಾಂಕಾಕಿನಿಂದ ಇನ್ನೂರು ಮುನ್ನೂರು ಕಿಲೋಮೀಟರ್ ದೂರದೂರಲ್ಲಿ ನೆಲೆಸಿರುವ ಕುಟುಂಬಗಳೂ ಬಿಡುವು ಮಾಡಿ­ಕೊಂಡು ಬರುತ್ತವೆ.

ವಿಪರ್ಯಾಸವೆಂದರೆ ಹಲವಾರು ಬಾರಿ ಇಂತಹ ಕಾರ್ಯ­ಕ್ರಮಗಳಿಗೆ ನಾವು ಕರ್ನಾಟಕ­ದಿಂದ ಆಹ್ವಾನಿಸಿದ ತಂಡದ ಸದಸ್ಯರಿಗೇ ಸರಿ­ಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ! ಮೊದಲೇ ಹೇಳಿದೆನಲ್ಲಾ - ದೇಶ ಬಿಟ್ಟವರು ಎಲ್ಲಾ ಬಿಟ್ಟವರು ಎಂಬುದು ಮನಸ್ಸಿನಲ್ಲಿರುತ್ತದೆ­ಯೇನೋ. ಹಾಗಾಗಿ ಕಳಪೆ ಸದಸ್ಯರಿದ್ದರೂ ಪರ­ವಾಗಿಲ್ಲ ಎಂದು ಭಾವಿಸುತ್ತಾರೇನೋ! ಹೊರ­ನಾಡಿನವರೆಂದರೆ ಅವರಿಗೆ ಕನ್ನಡದ ಬಗ್ಗೆ ಏನೂ ತಿಳಿ­ದಿಲ್ಲ ಅಂದುಕೊಂಡು ಬರುವವರೇ ಹೆಚ್ಚು. ಇತ್ತೀ­ಚೆಗೆ ಅಮೆ­ರಿ­ಕದ ‘ಅಕ್ಕ’ ಸಮ್ಮೇಳನಕ್ಕೆ ಹೋಗು­ವು­ದಕ್ಕೆ ಸರ್ಕಾರದ ಯಾವುದೋ ಇಲಾ­ಖೆಯಿಂದ ಒಂದಷ್ಟು ಹಣ ಬಿಡುಗಡೆ ಮಾಡಿ­­ಸಿ­ಕೊಂಡು ಹೊರಟಿದ್ದ ಒಂದು ತಂಡ ಬ್ಯಾಂಕಾಕ್ ಮೂಲಕ ಹೋಗುತ್ತಿತ್ತು. ವಾರದ ಮಧ್ಯ­ವಾದರೂ ಊರಿನಿಂದ ಬರುತ್ತಿದ್ದಾರೆ ಎಂದು ಕಾರ್ಯಕ್ರಮ ಆಯೋಜಿಸಿ­ದರೆ ಮೊದಲಾಗಿ ಸಮಯಕ್ಕೆ ಸರಿಯಾಗಿ ಬರಲಿಲ್ಲ. ತಡವಾಗಿ ಬಂದರೂ ಅವರಿಗೆ ಸಮಯದ ಚಿಂತೆ ಇರಲಿಲ್ಲ. ಇನ್ನು ಅದರಲ್ಲಿ ಅರ್ಧ ಮಂದಿಗೆ ಸರಿಯಾಗಿ ಕನ್ನಡ ಉಚ್ಚಾರ ಬರು­ತ್ತಿರಲಿಲ್ಲ. ಇನ್ನು ಒಬ್ಬ­ರಂತೂ ಯಾರೋ ಬರೆದ ಬರಹವನ್ನು ತಪ್ಪು­ತಪ್ಪಾಗಿ ಓದಿ ನಮಗೆ ಕನ್ನಡ ಪಾಠ ಮಾಡಿದರು. ಸಂತಸವೆಂದರೆ ಒಂದಿಬ್ಬರು ಸುಂದರ ಚುಟುಕು­ಗಳನ್ನು ರಚಿಸಿ ನಗಿಸಿದರು. ಇನ್ನಿಬ್ಬರು ಕನ್ನಡ ಹಾಡುಗಳನ್ನು ಹಾಡಿ ನಮ್ಮನ್ನು ಕುಣಿಸಿದರು.

ಈ ಸಲ ರಾಜ್ಯೋತ್ಸವ ವಾರಾಂತ್ಯಕ್ಕೆ ಬಂದದ್ದ­ರಿಂದ ನಮ್ಮಲ್ಲಿ ಎರಡೂ ದಿನ ಆಚರಣೆ, ಸಂಭ್ರಮ, ಕನ್ನಡದ ಹಬ್ಬ. ಇನ್ನು ನಾಲ್ಕು ತಿಂಗಳಲ್ಲಿ ಮತ್ತೊಮ್ಮೆ ನಮ್ಮಲ್ಲಿ ಕನ್ನಡದ ಹಬ್ಬ ಬರುತ್ತದೆ. ಕನ್ನಡ ನಾಡಿನೊಳಗೆ ಕಾದಂತೆ ಇನ್ನೊಂದು ನವೆಂಬರ್ ೧ರವರೆಗೆ ನಾವು ಕಾಯು­ವುದಿಲ್ಲ. ಸರ್ಕಾರದ ಅನು­ದಾನಗಳ ಹಂಗಿಲ್ಲದೆ ನಮಗೋಸ್ಕರ ನಾವು ಮಾಡುವ ನಮ್ಮ ಕನ್ನಡದ ಹಬ್ಬದ ಸಂಭ್ರಮ ನಾಡಿನೊಳಗಿರದು!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.