ADVERTISEMENT

ಸಂಗತ: ಮೇಲ್ಮಟ್ಟದಲ್ಲೇ ಇರಲಿ ಮೇಲ್ಮನೆ

ಮೇಲ್ಮನೆಗಳಾದ ವಿಧಾನಪರಿಷತ್ ಹಾಗೂ ರಾಜ್ಯಸಭೆಯಲ್ಲಿ ಬುದ್ಧಿಜೀವಿಗಳು ಮತ್ತು ಪ್ರಜ್ಞಾವಂತರ ಬದಲು ರಾಜಕೀಯ ಪಕ್ಷಗಳ ಬೆಂಬಲಿಗರೇ ಕಣ್ಣಿಗೆ ಗೋಚರಿಸುತ್ತಾರೆ

ರಾಜಕುಮಾರ ಕುಲಕರ್ಣಿ
Published 6 ಮಾರ್ಚ್ 2024, 21:54 IST
Last Updated 6 ಮಾರ್ಚ್ 2024, 21:54 IST
   

ವಿಧಾನಪರಿಷತ್ತಿಗೆ ವಿವಿಧ ಕ್ಷೇತ್ರಗಳ ಪರಿಣತರು, ಬುದ್ಧಿ ಜೀವಿಗಳು ಮತ್ತು ಪ್ರಜ್ಞಾವಂತರನ್ನು ಆಯ್ಕೆ ಮಾಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಎರಡು ಪತ್ರಗಳು (ವಾ.ವಾ., ಮಾರ್ಚ್ 1, 5) ಪ್ರಕಟವಾದವು. ತಮ್ಮ ನಡೆ– ನುಡಿಯಿಂದ ಸಾರ್ವಜನಿಕರ ಮನ ಗೆಲ್ಲಬೇಕು ಎಂಬುದಕ್ಕಿಂತ ಪಕ್ಷದ ವರಿಷ್ಠರನ್ನು ಮೆಚ್ಚಿಸಬೇಕೆಂಬ ಧೋರಣೆ ರಾಜಕಾರಣಿಗಳಲ್ಲಿ ಮೇಲುಗೈ ಸಾಧಿಸಿದೆ. ಆದಕಾರಣ, ಪ್ರಜ್ಞಾವಂತರ ಸದನವೆಂಬ ಹಿರಿಮೆಗೆ ಪಾತ್ರವಾದ ಮೇಲ್ಮನೆಯಲ್ಲಿ ಕೂಗಾಟ, ಕಿರುಚಾಟ, ನಿಂದನೆ, ತೊಡೆ ತಟ್ಟುವಂತಹ ಬೀದಿರಾಜಕಾರಣದ ವರ್ತನೆ ಪದೇಪದೇ ಪುನರಾವರ್ತನೆಯಾಗುತ್ತಿದೆ.

ಸದ್ದನ್ನೇ ತುಂಬ ನೆಚ್ಚಿಕೊಂಡ ರಾಜಕಾರಣಕ್ಕೆ ಮೌನದ ಪರಿಚಯವಿಲ್ಲ ಎಂದ ಯಶವಂತ ಚಿತ್ತಾಲರ ಮಾತು ಸತ್ಯಕ್ಕೆ ಹತ್ತಿರವಾಗಿದೆ.

ಮೇಲ್ಮನೆಗಳೆಂದು ಹಿರಿಮೆ ಗಳಿಸಿರುವ ರಾಜ್ಯಸಭೆ ಮತ್ತು ವಿಧಾನಪರಿಷತ್ತಿಗೆ ಕಲಾವಿದರು, ಸಾಹಿತಿಗಳು ಮತ್ತು ಚಿಂತಕರನ್ನು ಸದಸ್ಯರನ್ನಾಗಿ ಆಯ್ಕೆ ಮಾಡುವ ಪರಿಪಾಟ ಈ ಹಿಂದೆ ಚಾಲ್ತಿಯಲ್ಲಿ ಇತ್ತು. ಸರ್ಕಾರದ ನೀತಿ–ನಿಲುವುಗಳನ್ನು ನಿಕಷಕ್ಕೆ ಒಡ್ಡುವ ಹಾಗೂ ಸಮಾಜದ ಓರೆಕೋರೆಗಳನ್ನು ಎತ್ತಿ ತೋರಿಸುವ ಮಹತ್ವದ ಜವಾಬ್ದಾರಿ ಮೇಲ್ಮನೆಗೆ ಆಯ್ಕೆಯಾದ ಸದಸ್ಯರ ಮೇಲಿದೆ. ಸದ್ಯದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸದನದಲ್ಲಿ ತಮ್ಮ ಪಕ್ಷದ ನಡೆಯನ್ನು ಸಮರ್ಥಿಸಿಕೊಳ್ಳಲು ಕೂಗಾಡುವವರು, ಕಿರುಚಾಡುವವರು ಮತ್ತು ತೊಡೆ ತಟ್ಟುವವರನ್ನು ಮೇಲ್ಮನೆಗೆ ಆಯ್ಕೆ ಮಾಡುತ್ತಿವೆ.

ADVERTISEMENT

ಸರ್ಕಾರದಿಂದ ನಾಮಕರಣಗೊಂಡ ಸದಸ್ಯರಾಗಿಯೂ ವಿಧಾನಪರಿಷತ್ತಿನಲ್ಲಿ ಸರ್ಕಾರದ ಅನೇಕ ಧೋರಣೆಗಳನ್ನು ಟೀಕಿಸುತ್ತಿದ್ದುದನ್ನು ರಾಜ್ಯಪಾಲರು ಆಕ್ಷೇಪಿಸಿದಾಗ, ‘ನಾನು ನ್ಯಾಯನಿಷ್ಠುರಿ, ದಾಕ್ಷಿಣ್ಯ ಪರನಲ್ಲ’ ಎನ್ನುವುದು ಅಂಬೇಡ್ಕರ್‌ ಅವರ ಪ್ರತಿಕ್ರಿಯೆಯಾಗಿತ್ತು. ಆದರೆ ಇಂದಿನ ರಾಜಕಾರಣದಲ್ಲಿ ವೈಯಕ್ತಿಕ ಹಿತಾಸಕ್ತಿ ಮುನ್ನೆಲೆಗೆ ಬಂದು ಸಮಾಜದ ಹಿತಾಸಕ್ತಿ ಹಿನ್ನೆಲೆಗೆ ಸರಿದಿದೆ. ಜೊತೆಗೆ ರಾಜಕೀಯ ಪಕ್ಷಗಳು ತಮ್ಮನ್ನು ಪ್ರಶ್ನಿಸುವುದನ್ನು ಮತ್ತು ವಿರೋಧಿಸುವುದನ್ನು ಸಹಿಸಲಾರವು. ಹೊಗಳಿಕೆ, ಮುಖಸ್ತುತಿ ಮತ್ತು ಓಲೈಕೆಯನ್ನು ಅವು ಇಚ್ಛಿಸುತ್ತಿವೆ.

ಭಾರತದ ರಾಜಕಾರಣದಲ್ಲಿನ ಮಹತ್ವದ ಪ್ರಕರಣವೊಂದು ಹೀಗಿದೆ: 1958ರಲ್ಲಿ ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿಶ್ವಸಂಸ್ಥೆಯ ಮಹಾ ಅಧಿವೇಶನಕ್ಕೆ ತೆರಳುತ್ತಿದ್ದ ಭಾರತದ ನಿಯೋಗದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸದಸ್ಯರಾಗಿದ್ದರು. ಆ ಸಂದರ್ಭ ವಾಜಪೇಯಿ ಅವರನ್ನು ವಿಶ್ವ ನಾಯಕರಿಗೆ ಪರಿಚಯಿಸುವಂತೆ ಅಮೆರಿಕದಲ್ಲಿ ಭಾರತದ ಕಾಯಂ ನಿಯೋಗದ ಅಧಿಕಾರಿಯೊಬ್ಬರಿಗೆ  ನೆಹರೂ ಸೂಚಿಸಿದ್ದರು. ತಮ್ಮ ಕಟು ಟೀಕಾಕಾರರಾದ ವಾಜಪೇಯಿ ಅವರನ್ನು ವಿದೇಶಿ ಗಣ್ಯರಿಗೆ ಪರಿಚಯಿಸುವ ಸಂದರ್ಭಗಳಲ್ಲೆಲ್ಲ ‘ಈ ತರುಣ ಮುಂದೊಂದು ದಿನ ಭಾರತದ ಪ್ರಧಾನಿಯಾಗುವುದು ಖಚಿತ’ ಎಂದು ನೆಹರೂ ಹೇಳುತ್ತಿದ್ದ ಮಾತು ಇಂದಿಗೂ ಜನಮಾನಸದಲ್ಲಿ ಚಲಾವಣೆಯಲ್ಲಿದೆ. ಇಂಥದ್ದೊಂದು ನಡೆ ಇಂದು ಯಾವ ಪಕ್ಷದಲ್ಲೂ ಗೋಚರಿಸುತ್ತಿಲ್ಲ.

ಆಡಳಿತ ನಡೆಸುವ ಪಕ್ಷ ಬದಲಾದಾಗ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರು ಕೂಡ ಬದಲಾಗುವುದು ಒಂದು ಸಂಪ್ರದಾಯದಂತಾಗಿದೆ. ನಾಟಕ, ಸಿನಿಮಾ, ಸಾಹಿತ್ಯದಂಥ ಸಾಂಸ್ಕೃತಿಕ ಅಕಾಡೆಮಿಗಳಿಗೆ ಪ್ರಜ್ಞಾವಂತರ ಬದಲು ರಾಜಕೀಯ ಪಕ್ಷನಿಷ್ಠರನ್ನೇ ಹೆಚ್ಚಾಗಿ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತಿದೆ. ಈ ಹಿಂದೆ ಸಾಂಸ್ಕೃತಿಕ ಕ್ಷೇತ್ರಗಳ ಸಾಧಕರು ಅಕಾಡೆಮಿಗಳ ಅಧ್ಯಕ್ಷ ಅಥವಾ ಸದಸ್ಯರಾಗಿ ನಿಯುಕ್ತಿಗೊಂಡ ಕ್ಷಣದಿಂದಲೇ ಆಳುವ ಪಕ್ಷದಿಂದ ಅಂತರವನ್ನು ಕಾಯ್ದುಕೊಂಡು, ಸಂದರ್ಭ ಎದುರಾದಾಗಲೆಲ್ಲ ಪ್ರಭುತ್ವದ ಜನವಿರೋಧಿ ನಡೆಯನ್ನು ಖಂಡಿಸಿದ ಬಹಳಷ್ಟು ಉದಾಹರಣೆಗಳಿವೆ. ಈಗ ಕಲಾವಿದರು ಮತ್ತು ಸಾಹಿತಿಗಳು ಫುಲ್‍ಟೈಮ್ ರಾಜಕಾರಣಿಗಳಾಗಿ ಅಕಾಡೆಮಿಗಳ ಮಹತ್ವದ ಸ್ಥಾನಗಳನ್ನು ಅಲಂಕರಿಸುತ್ತಿರುವಾಗ, ಅವರಿಂದ ಸಮಾಜಹಿತದ ನಡೆಯನ್ನು ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ.

ರಾಜಕಾರಣವು ವಿಶ್ವವಿದ್ಯಾಲಯಗಳ ಬೌದ್ಧಿಕ ವಲಯವನ್ನು ಕೂಡ ಮಲಿನಗೊಳಿಸಿದೆ. ಮುಕ್ತ ವಾತಾವರಣ, ಬೌದ್ಧಿಕ ಅನ್ವೇಷಣೆ, ಸಂಶೋಧನೆ, ಚರ್ಚೆ, ಸಂವಾದಗಳಿಗೆ ಅವಕಾಶ ಕಲ್ಪಿಸಿಕೊಡುವ ವಿಶ್ವವಿದ್ಯಾಲಯಗಳು ಒಂದು ಕಾಲದಲ್ಲಿ ಅತ್ಯುತ್ತಮ ರಾಜಕಾರಣಿಗಳನ್ನು ಸೃಷ್ಟಿಸಿವೆ. ವಿಶ್ವವಿದ್ಯಾಲಯಗಳ ಮಹತ್ವವನ್ನರಿತು ಆಯಾ ಅವಧಿಯ ಸರ್ಕಾರಗಳು ತಮ್ಮ ಪಕ್ಷಗಳ ಧೋರಣೆಯನ್ನು ಈ ಉನ್ನತ ಶಿಕ್ಷಣ ಕೇಂದ್ರಗಳ ಮೇಲೆ ಬಲವಂತವಾಗಿ ಹೇರುತ್ತಿವೆ.

ವಿಶ್ವವಿದ್ಯಾಲಯಗಳು, ಮೇಲ್ಮನೆಗಳು ಹಾಗೂ ಅಕಾಡೆಮಿಗಳು ತಮ್ಮ ಮೊದಲಿನ ಘನತೆ ಮತ್ತು ನೈತಿಕತೆಯನ್ನು ಉಳಿಸಿಕೊಂಡಿವೆಯೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ರಾಜಕೀಯ ಪಕ್ಷಗಳ ಮುಖವಾಣಿಯಾಗುವ ಮತ್ತು ಪ್ರಭುತ್ವದ ನಡೆಯನ್ನು ಎತ್ತಿ ಹಿಡಿಯುವ ಧಾವಂತದಲ್ಲಿರುವ ಬೌದ್ಧಿಕ ಮತ್ತು ಸಾಂಸ್ಕೃತಿಕ ವಲಯಗಳು ಸಮಾಜದ ಹಿತವನ್ನು ಕಡೆಗಣಿಸುವ ಸರ್ಕಾರ ಹಾಗೂ ಪಕ್ಷಗಳ ನಡೆಯನ್ನು ಪ್ರತಿಭಟಿಸುವ ಕಾವನ್ನು ಕಳೆದುಕೊಂಡಿವೆ. ಪ್ರಭುತ್ವ ಮತ್ತು ಪ್ರತಿಭಟನಕಾರರ ಚಹರೆ ಒಂದೇ ಆದಾಗ ಅಲ್ಲಿ ಪ್ರತಿಭಟನೆ ಮೂಲೆಗುಂಪಾಗುತ್ತದೆ. ಗೆದ್ದ ಪ್ರಭುತ್ವವು ಬಹುತ್ವದ ಚಹರೆಯನ್ನು ಅಳಿಸುತ್ತಾ ತನ್ನ ಚಹರೆಯನ್ನು ವಿಸ್ತರಿಸಿ ಬೆಳೆಯತೊಡಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.