ADVERTISEMENT

ಸಂಗತ: ಜಿಡಿಪಿ–ಸಂತೃಪ್ತಿ ಎತ್ತಣ ಸಂಬಂಧವಯ್ಯ?

ದೇಶದ ಅಭಿವೃದ್ಧಿ ಹಾಗೂ ಜನರ ಸಂತೃಪ್ತಿ ‘ಜಿಡಿಪಿ’ಯಿಂದ ನಿರ್ಣಯವಾಗದು. ಸಂತುಷ್ಟಿಯ ಹೊಸ ಮಾನದಂಡಗಳನ್ನು ವಸ್ತುಸ್ಥಿತಿ ಆಧಾರದಲ್ಲಿ ರೂಪಿಸಬೇಕಾಗಿದೆ.

ನಡಹಳ್ಳಿ ವಂಸತ್‌
Published 5 ಜನವರಿ 2026, 23:55 IST
Last Updated 5 ಜನವರಿ 2026, 23:55 IST
<div class="paragraphs"><p>ಸಂಗತ: ಜಿಡಿಪಿ–ಸಂತೃಪ್ತಿ ಎತ್ತಣ ಸಂಬಂಧವಯ್ಯ?</p></div>

ಸಂಗತ: ಜಿಡಿಪಿ–ಸಂತೃಪ್ತಿ ಎತ್ತಣ ಸಂಬಂಧವಯ್ಯ?

   

ಭಾರತದ ‘ಒಟ್ಟು ಆಂತರಿಕ ಉತ್ಪನ್ನ’ದ ಗಾತ್ರ (ಜಿಡಿಪಿ) ಜಪಾನ್‌ಗಿಂತ ಹೆಚ್ಚಾಗಿದ್ದು, ನಾವು ವಿಶ್ವದ ನಾಲ್ಕನೆಯ ಅತಿದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಬೆಳೆದಿದ್ದೇವೆ ಮತ್ತು 2030ರ ವೇಳೆಗೆ ಭಾರತದ ಆರ್ಥಿಕ ವ್ಯವಸ್ಥೆ ಜರ್ಮನಿಯನ್ನೂ ಹಿಂದಿಕ್ಕಿ ಜಗತ್ತಿನ ಮೂರನೆಯ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಜಿಡಿಪಿ ಎನ್ನುವುದು ಬಂಡವಾಳಶಾಹಿ ಆರ್ಥಿಕತಜ್ಞರು ರೂಪಿಸಿರುವ
ಮೋಸದಾಟ ಎನ್ನುವುದನ್ನು ನಾವು ತಿಳಿಯದಿದ್ದರೆ, ಸರ್ಕಾರ
ಗಳು ಸೃಷ್ಟಿಸುವ ಭ್ರಮೆಯಲ್ಲಿ ಸಮಾಧಾನಪಡಬೇಕಾಗುತ್ತದೆ.

ಜಿಡಿಪಿ ಎಷ್ಟು ಅಸಂಗತ ಕಲ್ಪನೆ ಎನ್ನುವುದನ್ನು ಕುರಿತು ಮಲೇಷ್ಯಾದ ಅರ್ಥಶಾಸ್ತ್ರಜ್ಞ ಜೊಮೊ ಕ್ವಾಮೆ ಸುಂದರಮ್‌ ಹೇಳುವ ಒಂದು ತಮಾಷೆಯ ಕಥೆಯನ್ನು ಹಿರಿಯ ಪತ್ರಕರ್ತ ಪಿ. ಸಾಯಿನಾಥ್‌ ಉಲ್ಲೇಖಿಸುತ್ತಾರೆ. ಇಬ್ಬರು ಅರ್ಥಶಾಸ್ತ್ರಜ್ಞರು ರಸ್ತೆಯೊಂದರಲ್ಲಿ ಹೋಗುತ್ತಿದ್ದಾಗ, ಸತ್ತು ಬಿದ್ದಿ
ರುವ ಇಲಿಯೊಂದನ್ನು ನೋಡುತ್ತಾರೆ. ಹಿರಿಯ ಅರ್ಥಶಾಸ್ತ್ರಜ್ಞ ‘ಈ ಸತ್ತ ಇಲಿಯನ್ನು ತಿಂದರೆ ನಿನಗೆ ಒಂದು ಲಕ್ಷ ರೂಪಾಯಿ ಕೊಡುತ್ತೇನೆ’ ಎಂದು ಛೇಡಿಸುತ್ತಾನೆ. ಕಿರಿಯ ಅರ್ಥಶಾಸ್ತ್ರಜ್ಞ ಸತ್ತ ಇಲಿಯನ್ನು ತಿಂದು ಒಂದು ಲಕ್ಷ ರೂಪಾಯಿ ವಸೂಲಿ ಮಾಡಿಕೊಂಡು ಹೋಗುತ್ತಾನೆ. ಸತ್ತ ಇಲಿಯನ್ನು ತಿಂದಿರುವುದಕ್ಕೆ ಕಿರಿಯನಿಗೆ, ಹಣ ಕಳೆದುಕೊಂಡದ್ದಕ್ಕೆ ಹಿರಿಯನಿಗೆ ಬೇಸರವಾಗುತ್ತದೆ. ಮರುದಿನ ಇಬ್ಬರೂ ಹೋಗುತ್ತಿರುವಾಗ ಮತ್ತೊಂದು ಸತ್ತ ಇಲಿ ಕಾಣಿಸುತ್ತದೆ. ಆಗ ಹಿರಿಯ ಅರ್ಥಶಾಸ್ತ್ರಜ್ಞ ಕಿರಿಯನಿಗೆ, ‘ನಾನು ಇದನ್ನು ತಿಂದರೆ ನೀನು ಒಂದು ಲಕ್ಷ ರೂಪಾಯಿ ಕೊಡುವೆಯಾ?’ ಎಂದು ಕೇಳುತ್ತಾನೆ. ಕಿರಿಯ ಒಪ್ಪಿಕೊಂಡ ಕೂಡಲೇ ಹಿರಿಯ ಸತ್ತ ಇಲಿಯನ್ನು ತಿಂದು ತಾನು ಕಳೆದುಕೊಂಡಿದ್ದ ಒಂದು ಲಕ್ಷ ರೂಪಾಯಿ ಹಿಂಪಡೆಯುತ್ತಾನೆ. ಆಗ ಕಿರಿಯ ಅರ್ಥಶಾಸ್ತ್ರಜ್ಞ, ‘ನಾವಿಬ್ಬರೂ ಎಂತಹ ಮೂರ್ಖರಲ್ಲವೇ?’ ಎಂದು ಹಿರಿಯನಿಗೆ ಕೇಳಿದಾಗ ಅವನು, ‘ಅದೇನೋ ಸರಿ, ಆದರೆ ನಾವಿಬ್ಬರೂ ಸೇರಿ ದೇಶದ ಜಿಡಿಪಿಯನ್ನು ₹2 ಲಕ್ಷಗಳಷ್ಟು ಹೆಚ್ಚಿಸಿದ್ದೇವೆ. ಅದಕ್ಕಾದರೂ ಹೆಮ್ಮೆಪಡೋಣ’ ಎಂದು ಉತ್ತರಿಸುತ್ತಾನೆ! ಹೇಗಿದೆ ಜಿಡಿಪಿ ಹೆಚ್ಚುಮಾಡುವ ತಂತ್ರಗಾರಿಕೆ?

ADVERTISEMENT

ಜಿಡಿಪಿ ಎನ್ನುವ ಮಾನದಂಡವನ್ನು ಸೃಷ್ಟಿಸಿದ ಸೈಮನ್‌ ಕುಜ್ನೆಟ್ಸ್‌ ಎನ್ನುವ ರಷ್ಯಾ ಮೂಲದ ಅಮೆರಿಕದ ಆರ್ಥ ಶಾಸ್ತ್ರಜ್ಞ ಕೂಡ ಇದರ ಬಳಕೆಯ ಕುರಿತು ಎಚ್ಚರಿಕೆ ನೀಡಿದ್ದ. ಆತನ ಪ್ರಕಾರ, ರಾಷ್ಟ್ರವೊಂದರ ಒಟ್ಟು ಆದಾಯದ ಆಧಾರದ ಮೇಲೆ ಅಲ್ಲಿನ ಜನರ ಸಂತೃಪ್ತಿ, ಸಮಾಧಾನಗಳ ಮಟ್ಟವನ್ನು ಅಳೆಯಲು ಸಾಧ್ಯವಿಲ್ಲ. ಆದರೆ, ಪ್ರಸ್ತುತ ಪ್ರಪಂಚದ ಎಲ್ಲಾ ದೇಶಗಳು ತಮ್ಮ ಅಭಿವೃದ್ಧಿಯ ಹೆಚ್ಚುಗಾರಿಕೆ ಮೆರೆಸಲು ಬಳಸುವ ಏಕೈಕ ಮಾನದಂಡ ಜಿಡಿಪಿ. ಇದು ಬಂಡವಾಳಶಾಹಿ ಆರ್ಥಿಕತೆ ಸೃಷ್ಟಿಸಿದ ಭ್ರಮಾಲೋಕ. ದೇಶದಲ್ಲಿ ಸಂಪತ್ತು ಹೇಗೆ ಸೃಷ್ಟಿಯಾಗುತ್ತಿದೆ ಮತ್ತು ಹಾಗೆ ಸೃಷ್ಟಿಯಾಗುವ ಸಂಪತ್ತಿನ ಹಂಚಿಕೆ ಮತ್ತು ಬಳಕೆ ಹೇಗೆ ಆಗುತ್ತಿದೆ ಎನ್ನುವುದನ್ನು ಗಮನಿಸಿದರೆ ಮಾತ್ರ, ಆಯಾ ದೇಶಗಳ ಜನಸಾಮಾನ್ಯರ ನಿಜವಾದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು.  

ಭಾರತದಂತಹ ಅಗಾಧ ಪ್ರಾಕೃತಿಕ ಸಂಪತ್ತನ್ನು ಹೊಂದಿರುವ ದೇಶದಲ್ಲಿ ಈ ಸಂಪನ್ಮೂಲಗಳನ್ನು ಬಂಡವಾಳಶಾಹಿಗಳಿಗೆ ಚಿಕ್ಕಾಸಿಗೆ ಮಾರಿದಾಗ, ಅವರು ಅದರಿಂದ ಅಪಾರ ಆದಾಯ ಗಳಿಸಿ ದೇಶದ ಜಿಡಿಪಿ ಹೆಚ್ಚಿಸುತ್ತಾರೆ. ಮದ್ಯ ಉತ್ಪಾದನಾ ಕಂಪನಿಗಳು, ಐಪಿಎಲ್‌ ಫ್ರಾಂಚೈಸಿಗಳು, ಆನ್‌ಲೈನ್‌ ಗೇಮಿಂಗ್‌ ಕಂಪನಿಗಳ ಆದಾಯವೂ ಜಿಡಿಪಿಯ ಭಾಗವಾಗಿರುತ್ತದೆ. ಅಶ್ಲೀಲ ಚಿತ್ರಗಳನ್ನು ಸಿದ್ಧಪಡಿಸಿ ಮಾರುವುದನ್ನು ಸಾಕಷ್ಟು ದೇಶಗಳಲ್ಲಿ ಕಾನೂನುಬದ್ಧವಾಗಿ ‘ಪೋರ್ನ್‌ ಇಂಡಸ್ಟ್ರಿ’ ಎಂದು ಕರೆಯಲಾಗುತ್ತದೆ ಮತ್ತು ಆ ಕಂಪನಿಗಳಿಂದ ಬರುವ ಆದಾಯ ಕೂಡ ಜಿಡಿಪಿಯನ್ನು ಹೆಚ್ಚಿಸುತ್ತದೆ!

ಜಿಡಿಪಿ ಹಂಚಿಕೆಯ ವಿಚಾರದಲ್ಲಂತೂ ವಿಶ್ವದ ಎಲ್ಲಾ ದೇಶಗಳ ಅಂಕಿಅಂಶಗಳು ಭಯಹುಟ್ಟಿಸುವಂತಿವೆ. ಸೃಷ್ಟಿ ಆಗುತ್ತಿರುವ ಸಂಪತ್ತಿನ ಹೆಚ್ಚು ಭಾಗ ಕಾರ್ಪೊರೇಟ್‌ ಖಜಾನೆಗಳನ್ನು ಸೇರುತ್ತಾ, ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ನಮ್ಮ ದೇಶದ ಶೇ 57ರಷ್ಟು ಸಂಪತ್ತು ದೇಶದ ಶೇ 7ರಷ್ಟು ಜನರ ಹಿಡಿತದಲ್ಲಿದೆ. ದೇಶದಲ್ಲಿ ಪ್ರತಿವರ್ಷ ಶತ ಕೋಟ್ಯಧಿಪತಿಗಳ ಸಂಖ್ಯೆ
ಹೆಚ್ಚುತ್ತಿದ್ದರೂ, ಶೇ 80ರಷ್ಟು ಜನರಿಗೆ ರಿಯಾಯಿತಿ ದರದ ಆಹಾರ ಸಾಮಗ್ರಿಗಳ ಅಗತ್ಯವಿದೆ. ಸಂಪತ್ತಿನ ಹಂಚಿಕೆಯ ಅಸಮಾನತೆ ಪ್ರತಿವರ್ಷವೂ ಕುಸಿಯುತ್ತಿದ್ದು, ಸದ್ಯಕ್ಕೆ 1921ರಲ್ಲಿದ್ದ ಅಸಮಾನತೆಯ ಮಟ್ಟ ತಲಪಿದ್ದೇವೆ ಎನ್ನಲಾಗುತ್ತಿದೆ.

ಸಂತೃಪ್ತಿಯ ಸೂಚ್ಯಂಕದಲ್ಲಿ ಭಾರತ 147 ದೇಶಗಳಲ್ಲಿ 118ನೇ ಸ್ಥಾನದಲ್ಲಿದೆ. ಭ್ರಷ್ಟಾಚಾರದಲ್ಲಿ 180 ದೇಶಗಳಲ್ಲಿ 96ನೇ ಸ್ಥಾನದಲ್ಲಿದೆ. ಹಸಿವಿನ ಸೂಚ್ಯಂಕದಲ್ಲಿ 123 ದೇಶಗಳಲ್ಲಿ 102ನೇ ಸ್ಥಾನದಲ್ಲಿದೆ. ಮಕ್ಕಳು, ಮಹಿಳೆಯರ ಅಪೌಷ್ಟಿಕತೆಯ ವಿಚಾರದಲ್ಲಿ ನಮ್ಮ ದೇಶದ ಪರಿಸ್ಥಿತಿ ನಿರಾಶಾದಾಯಕವಾಗಿದೆ.

ಸರ್ಕಾರಕ್ಕೆ ಈ ಎಲ್ಲಾ ಅಂಕಿಅಂಶಗಳ ಕುರಿತು ತಗಾದೆ ಇರಬಹುದಾದರೂ, ಜಿಡಿಪಿಯನ್ನು ಅಭಿವೃದ್ಧಿಯ ಮಾನ ದಂಡವಾಗಿ ಬಳಸುವುದನ್ನಂತೂ ಒಪ್ಪಲಾಗದು. ನಮ್ಮ ದೇಶದ ಜನಸಂಖ್ಯೆ, ಸಂಪನ್ಮೂಲಗಳು, ಜನರ ಅಗತ್ಯಗಳು, ನಮಗೆ ಸೂಕ್ತವಾದ ಅಭಿವೃದ್ಧಿಯ ಮಾದರಿ, ಮುಂತಾದ ಮಾನದಂಡಗಳ ಆಧಾರದ ಮೇಲೆ ಹೊಸದಾದ ಅಭಿವೃದ್ಧಿ ಸೂಚ್ಯಂಕವನ್ನು ಆರ್ಥಶಾಸ್ತ್ರಜ್ಞರು ಆವಿಷ್ಕರಿಸುವ ತುರ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.