ತಲೆನೋವು ಮತ್ತು ವಾಂತಿಯಿಂದ ಬಳಲುತ್ತಿದ್ದ ಯುವಕನೊಬ್ಬ ಬೆಂಗಳೂರಿನಲ್ಲಿರುವ ನನ್ನ ಕ್ಲಿನಿಕ್ಗೆ ಇತ್ತೀಚೆಗೆ ಚಿಕಿತ್ಸೆಗೆಂದು ಬಂದಿದ್ದ. ತುಂಬ ಗಾಬರಿ
ಯಲ್ಲಿದ್ದಂತೆ ಕಾಣುತ್ತಿದ್ದ ಅವನನ್ನು ಪರೀಕ್ಷಿಸಿದಾಗ, ಅತಿಯಾದ ಗ್ಯಾಸ್ಟ್ರಿಕ್ನಿಂದ ಆಹಾರ ಪಚನವಾಗದೆ ವಾಂತಿ ಮತ್ತು ತಲೆನೋವು ಬಂದಿದೆ ಎಂಬುದು ತಿಳಿಯಿತು. ಅದಕ್ಕೆ ತಕ್ಕಂತೆ ಔಷಧಿಯ ಚೀಟಿ ಬರೆದುಕೊಟ್ಟಾಗ ಆತ ‘ಸರ್, ನನಗೆ ಭಯವಾಗುತ್ತಿದೆ. ಯಾವುದಕ್ಕೂ ಡೆಂಗಿ ರಕ್ತಪರೀಕ್ಷೆ ಮಾಡಿಸಿ’ ಎಂದು ದುಂಬಾಲು ಬಿದ್ದ. ಆದರೆ ನಾನು ಅವನ ಮಾತನ್ನು ಅಲ್ಲಗಳೆದು, ಒಂದು ದಿನ ತಾಳ್ಮೆಯಿಂದ ಇದ್ದು ಮತ್ತೆ ನಾಳೆ ಬಂದು ಭೇಟಿಯಾಗುವಂತೆ ತಿಳಿಸಿದೆ. ಆತ ಅಸಮಾಧಾನದಿಂದಲೇ ಕ್ಲಿನಿಕ್ನಿಂದ ತೆರಳಿದ್ದ.
ಮರುದಿನ ತಾನೇ ರಕ್ತಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಡೆಂಗಿಗೆ ಸಂಬಂಧಪಟ್ಟ ಎಲ್ಲಾ ಪರೀಕ್ಷೆಗಳನ್ನುಮಾಡಿಸಿಕೊಂಡಿದ್ದ ಯುವಕ, ನಾನು ಕ್ಲಿನಿಕ್ಗೆ ಬರುವುದನ್ನೇ ಕಾಯುತ್ತಿದ್ದ. ಎಲ್ಲ ವರದಿಗಳಲ್ಲೂ ಡೆಂಗಿ ನೆಗೆಟಿವ್ ಎಂದೇ ವರದಿಯಾಗಿತ್ತು. ಅವನ ತಲೆನೋವು ಮತ್ತು ವಾಂತಿ ಅದಾಗಲೇ ಗುಣವಾಗಿ ಗೆಲುವಾಗಿದ್ದ.
‘ಯಾಕ್ರೀ ಇಷ್ಟೊಂದು ದುಡ್ಡು ಖರ್ಚು ಮಾಡಿ ಇಷ್ಟೆಲ್ಲಾ ರಿಪೋರ್ಟ್ ಮಾಡ್ಸಿದ್ರಿ?’ ಎಂದು ಕೇಳಿದಾಗ, ‘ಯಾಕೆ ರಿಸ್ಕು ಬೇಕು ಸಾರ್? ನಮ್ಮೂರು
ಹೊಳೆನರಸೀಪುರದಲ್ಲಿ ಡೆಂಗಿಯಿಂದಾಗಿ ಮೊನ್ನೆಯಷ್ಟೇ ಎಂಬಿಬಿಎಸ್ ವಿದ್ಯಾರ್ಥಿಯೇ ತೀರಿಹೋದ. ಡಾಕ್ಟರುಗಳಿಗೇ ಹೀಗಾದರೆ ಇನ್ನು ನಮ್ಮಂಥವರ ಪಾಡೇನು?’ ಎಂದು ಹೇಳುತ್ತಾ, ವ್ಯಾಟ್ಸ್ಆ್ಯಪ್ನಲ್ಲಿ ಆ ಮೃತ ವಿದ್ಯಾರ್ಥಿಯ ಫೋಟೊ ತೋರಿಸಿದ.
ಅವನು ಹೇಳಿದ ಎಲ್ಲ ಸಂಗತಿಗಳೂ ನಿಜವಾಗಿದ್ದವು. ಡಾಕ್ಟರುಗಳೂ ಎಲ್ಲರಂತೆ ಮನುಷ್ಯರೇ ಎಂದೂ, ಡಾಕ್ಟರ್ ಅಂದಮಾತ್ರಕ್ಕೆ ಸೊಳ್ಳೆಯಿಂದ, ಕಾಯಿಲೆಯಿಂದ, ಸಾವಿನಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲವೆಂದೂ ಅವನಿಗೆ ಹೇಗೆ ತಿಳಿಸಿ ಹೇಳುವುದು?
ಕಾಯಿಲೆ ಬಂದಾಗ ಸ್ವಲ್ಪಮಟ್ಟಿಗಿನ ತಾಳ್ಮೆ ಇರಬೇಕಾದುದು ಅವಶ್ಯ. ಪ್ರತಿವರ್ಷ ಮಳೆಗಾಲದ ಶುರುವಿನಲ್ಲಿ ಡೆಂಗಿ, ಮಲೇರಿಯ, ಚಿಕೂನ್ಗುನ್ಯ
ದಿಂದಾಗಿ ಸಂಭವಿಸುವ ನೂರಾರು ಸಾವುಗಳು
ಜನಸಾಮಾನ್ಯರಲ್ಲಿ ಜೀವಭಯ ಹುಟ್ಟಿಸುವುದು ಸಹಜ.
ಮೊನ್ನೆ ಭೇಟಿ ಮಾಡಿದ್ದ ಇನ್ನೊಬ್ಬರು ರೋಗಿ ‘ಸರ್, ನಮ್ಮ ಅಪ್ಪನಿಗೆ ಡೆಂಗಿ ಕಾಯಿಲೆಯಾಗಿದೆ. ಕುಟುಂಬದ ನಾಲ್ಕು ಜನ ಚಿಕ್ಕ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದೇವೆ. ಅವರು ಬಳಸಿದ ತಟ್ಟೆ, ಸಾಬೂನು ಬಳಸಬಹುದೇ?’ ಎಂದು ಆತಂಕದಿಂದ ಕೇಳಿದ್ದರು. ಆದರೆ ಈ ಕಾಯಿಲೆ ರೋಗಕಾರಕ ಸೊಳ್ಳೆ ಕಚ್ಚುವುದರಿಂದ ಮಾತ್ರ ಬರುತ್ತದೆ.
ಸಾಂಕ್ರಾಮಿಕ ಕಾಯಿಲೆಯ ಇಂತಹ ದುರಿತ ಸಂದರ್ಭಗಳಲ್ಲಿ ನಿಜವಾದ ಕಾಯಿಲೆ ತಂದೊಡ್ಡುವ ಸಂಕಟಗಳು ಒಂದೆಡೆಯಾದರೆ, ಕಾಯಿಲೆಗೆ ಸಂಬಂಧಿಸಿದ ರಣರೋಚಕ ಸುದ್ದಿಗಳು ಜನರನ್ನು ವಿಚಿತ್ರ ಭಯಕ್ಕೆ ದೂಡುತ್ತವೆ. ಕೆಲವು ಆರೋಗ್ಯ ಸಂಸ್ಥೆಗಳು ಜನರ ಭಯವನ್ನೇ ಬಂಡವಾಳ ವಾಗಿಸಿಕೊಂಡು ಸುಲಿಗೆಯಲ್ಲಿ ನಿರತವಾಗಿಬಿಡುವುದು ಇನ್ನೊಂದು ರೀತಿಯ ಸಂಕಟ.
ಸಾವಿಲ್ಲದ ಮನೆಯಲ್ಲಿ ಸಾಸಿವೆಯನ್ನು ತರಲು ಹೇಗೆ ಸಾಧ್ಯವಿಲ್ಲವೋ ಹಾಗೇ ಈ ಭೂಮಿಯ ಮೇಲೆ ಸೊಳ್ಳೆಯಿರದ ಜಾಗವೇ ಇಲ್ಲವೇನೊ. ಜಗತ್ತಿನಾ
ದ್ಯಂತ ಪ್ರತಿವರ್ಷ ಡೆಂಗಿಯಿಂದ ಇಪ್ಪತ್ತೈದು ಸಾವಿರ ಜನ ಸಾವೀಗೀಡಾಗುತ್ತಿದ್ದಾರೆ ಎಂದು ವರದಿಗಳು ತಿಳಿಸುತ್ತವೆ. ಕರ್ನಾಟಕದಲ್ಲಿ ಇದೇ ವರ್ಷದ ಜೂನ್ನಿಂದ ಇಲ್ಲಿಯವರೆಗೆ ಒಂಬತ್ತು ಸಾವಿರ ಡೆಂಗಿ ಪ್ರಕರಣಗಳು ದಾಖಲಾಗಿವೆ.
ವಿಶ್ವ ಆರೋಗ್ಯ ಸಂಸ್ಥೆಯು ರೋಗಕಾರಕ ಸೊಳ್ಳೆ, ನೊಣ ಮತ್ತು ಇತರ ಕ್ರಿಮಿಕೀಟಗಳಿಂದ ಹರಡುವ ರೋಗಾಣುಗಳನ್ನು ತಡೆಗಟ್ಟಲು ಪ್ರತಿವರ್ಷ 13.5 ಕೋಟಿ ಡಾಲರ್ ಖರ್ಚು ಮಾಡಿದರೆ, ಕೇಂದ್ರ ಸರ್ಕಾರ ಪ್ರತಿವರ್ಷದ ಬಜೆಟ್ನಲ್ಲಿ ₹ 1,400 ಕೋಟಿ ಮೀಸಲಿಡುತ್ತದೆ. ಹಾಗೆಯೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಜೆಟ್ನಲ್ಲಿ ಗಣನೀಯ ಪ್ರಮಾಣದ ಹಣ ವಿನಿಯೋಗವಾಗುತ್ತದೆ. ಸರ್ಕಾರಗಳು ಇಷ್ಟೆಲ್ಲಾ ಖರ್ಚು ಮಾಡಿದರೂ ಸೊಳ್ಳೆಗಳ ನಿಯಂತ್ರಣ ಎಂಬುದು ಸಂಪೂರ್ಣವಾಗಿ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇರುವಾಗ, ಇದಕ್ಕೆ ನಾಗರಿಕರ ಸಹಾಯ ಕೂಡ ಅವಶ್ಯವಾಗುತ್ತದೆ. ಡೆಂಗಿ ಉಂಟುಮಾಡುವ ಸೊಳ್ಳೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ತುಂಬ ಕ್ರಿಯಾಶೀಲವಾಗಿ ಇರುವುದರಿಂದ, ಈ ಸಂದರ್ಭಗಳಲ್ಲಿ
ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು.
ತೀವ್ರ ಜ್ವರ, ತಲೆನೋವು, ಕಣ್ಣು ಗುಡ್ಡೆಗಳ ಹಿಂಭಾಗದಲ್ಲಿ ತೀವ್ರತೆರನಾದ ನೋವು, ಸ್ನಾಯುಸೆಳೆತ ಹಾಗೂ ಮಾಂಸಖಂಡಗಳಲ್ಲಿ ನೋವು, ಮೈ ಮೇಲೆ ಕಾಣುವ ಕೆಂಪು ದದ್ದೆಗಳು, ವಾಂತಿ ಮತ್ತು ಕೆಲವೊಮ್ಮೆ ರಕ್ತಮಿಶ್ರಿತ ಭೇದಿಯಾಗುತ್ತಿದ್ದರೆ ಡೆಂಗಿಗೆ ಸಂಬಂಧಿಸಿದ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು.
ಕೆಲವೊಮ್ಮೆ ಈ ಮೇಲಿನ ಯಾವ ಚಿಹ್ನೆಗಳನ್ನೂ ತೋರಿಸದೆ ವೈರಸ್ ನಮ್ಮೊಳಗೆ ಬೆಳೆಯುತ್ತಿರಬಹುದು. ಅದು ಸಣ್ಣಪುಟ್ಟ ಲಕ್ಷಣಗಳನ್ನು ತೋರಿಸುತ್ತಿರುವಾಗಲೇ
ವೈದ್ಯರಲ್ಲಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಗಾಬರಿಗೆ ಒಳಗಾಗದೆ ಧೈರ್ಯವಾಗಿದ್ದರೆ ಯಾವುದೇ ಕಾಯಿಲೆಯನ್ನು ಸುಲಭವಾಗಿ ಗೆಲ್ಲಬಹುದು.
‘ಭಯ ಬೇಡ, ಎಚ್ಚರ ಇರಲಿ’ ಎಂಬ ಮಾತು ಎಲ್ಲ ಕಾಯಿಲೆಗಳಿಗೂ ಅನ್ವಯಿಸುವ ಘೋಷವಾಕ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.