ನಾಗಪುರದಲ್ಲಿ ಕೋಮು ಗಲಭೆ: ಹದಿಮೂರು ಜನರ ಸಾವು
ನಾಗಪುರ, ಜೂ. 11– ಸೋಮವಾರ ನಾಗಪುರದಲ್ಲಿ ಆರಂಭವಾದ ಕೋಮು ಗಲಭೆಯು ಇಂದು ನಾಗಪುರದ ಇತರ ಕೆಲವು ಪ್ರದೇಶಗಳಿಗೂ ವ್ಯಾಪಿಸಿ ರಾತ್ರಿಯ ಹೊತ್ತಿಗೆ ಹದಿಮೂರು ಮಂದಿಯನ್ನು ಬಲಿ ತೆಗೆದುಕೊಂಡಿತು.
ಗಲಭೆಗೆ ಮೂಲ 60 ಪೈಸೆ ವಿವಾದ: 60 ಪೈಸೆ ಬಾಕಿ ಕೊಡುವ ಬಗ್ಗೆ ಒಬ್ಬ ಬೌದ್ಧ ಮತೀಯ ಹಾಗೂ ಒಬ್ಬ ಮುಸ್ಲಿಂ ಕ್ಷೌರಿಕನ ನಡುವೆ ಭಾನುವಾರ ಮಧ್ಯಾಹ್ನ ಜಗಳ ತೋರಿದುದು ಗಲಭೆಗೆ ಮೂಲ.
**
ಮತ್ತೆರಡು ಕಡೆ ಘರ್ಷಣೆ
ನಾಗಪುರ, ಜೂ. 11– ಅನಧಿಕೃತ ವರದಿಗಳ ಪ್ರಕಾರ ಮಂಗಳವಾರ ರಾತ್ರಿ ನಾಗಪುರದ ಇನ್ನೆರಡು ಪ್ರದೇಶಗಳಲ್ಲಿ ಕೋಮು ಗಲಭೆ ಸಂಭವಿಸಿದ್ದು ಕನಿಷ್ಠ ಎರಡು ಮನೆಗಳಿಗೆ ಅಗ್ನಿಸ್ಪರ್ಶ ಮಾಡಿರುವುದನ್ನು ರಾತ್ರಿ ಕಂಡುದುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಬೌದ್ಧ ಮತೀಯರು ಮತ್ತು ಮಹರ್ ಮತೀಯರು ಹೆಚ್ಚಾಗಿ ವಾಸಿಸುವ ಬಾಮಿರ್ ಖೇಡಾ ಪ್ರದೇಶದಲ್ಲಿ ರಾತ್ರಿ 8 ಗಂಟೆ ಸಮಯದಲ್ಲಿ ಸುಮಾರು ಇಪ್ಪತ್ತು ಮನೆಗಳಿಗೆ ಬೆಂಕಿ ಹತ್ತಿಸಲಾಯಿತೆಂದು ಪೊಲೀಸರು ಹೇಳಿದ್ದಾರೆ.
**
ಖನಿಜ ವಸ್ತುಗಳ ರಾಜ್ಯಧನ ಏರಿಕೆ
ನವದೆಹಲಿ, ಜೂ. 11– ಕಲ್ಲಿದ್ದಲು ಮತ್ತು ಕಬ್ಬಿಣದ ಅದುರುಗಳನ್ನು ಬಿಟ್ಟು ಉಳಿದ ಖನಿಜಗಳ ಮೇಲಿನ ರಾಜ್ಯಧನ ನೀಡಿಕೆ ದರಗಳನ್ನು ಹೆಚ್ಚಿಸುವ ನಿರ್ಧಾರವನ್ನು ಇಂದು ಕೇಂದ್ರ ಸರ್ಕಾರ ಪ್ರಕಟಿಸಿತು.
ಕಬ್ಬಿಣ, ಕಲ್ಲಿದ್ದಲುಗಳ ವಿಷಯ ಪ್ರತ್ಯೇಕ ಪರಿಶೀಲನೆಯಲ್ಲಿದೆ.
**
ಕುದುರೆಮುಖ ಕಬ್ಬಿಣ ಅದುರು ಅಭಿವೃದ್ಧಿಯಲ್ಲಿ ಅಮೆರಿಕ ಸಂಸ್ಥೆ ಆಸಕ್ತಿ
ನವದೆಹಲಿ, ಜೂ. 11– ಅಮೆರಿಕದ ಸಂಸ್ಥೆ ಮಾರ್ಕೋನಾ ಕಾರ್ಪೋರೇಷನ್ನ ತಾಂತ್ರಿಕ ಹಾಗೂ ಆರ್ಥಿಕ ಸಹಕಾರದಿಂದ ಮೈಸೂರು ರಾಜ್ಯದಲ್ಲಿನ ಕುದುರೆಮುಖದಲ್ಲಿರುವ ಮ್ಯಾಗ್ನಟೈಟ್ ಕಬ್ಬಿಣದ ಅದುರಿನ ನಿಕ್ಷೇಪವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಸೂಚನೆಯೊಂದು ಬಂದಿದೆ.
‘ಮನ್’ ಎಂಬ ಒಂದೇ ಹೆಸರಿನಿಂದ ಪ್ರಸಿದ್ಧವಾಗಿರುವ ಮೂರು ಸಂಸ್ಥೆಗಳ ಪ್ರತಿನಿಧಿಗಳು ಒಟ್ಟಾಗಿ ಉಕ್ಕು ಮತ್ತು ಗಣಿಗಳ ಸಚಿವಖಾತೆಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದರೆಂದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.