ADVERTISEMENT

ಭಾನುವಾರ, 1–5–1994

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 18:30 IST
Last Updated 30 ಏಪ್ರಿಲ್ 2019, 18:30 IST

ಎಎನ್‌ಸಿಗೆ ಜಯ ಖಚಿತ

ಜೊಹಾನ್ಸ್‌ಬರ್ಗ್, ಏ. 30 (ರಾಯಿಟರ್)– ದಕ್ಷಿಣ ಆಫ್ರಿಕದಲ್ಲಿ ನಾಲ್ಕು ದಿನಗಳ ಕಾಲ ನಡೆದ ವರ್ಣರಹಿತ ಚಾರಿತ್ರಿಕ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದ್ದು, ನೆಲ್ಸನ್ ಮಂಡೇಲ ಅವರ ಆಫ್ರಿಕ ರಾಷ್ಟ್ರೀಯ ಕಾಂಗ್ರೆಸ್ ನಿಚ್ಚಳ ಜಯ ಗಳಿಸುವ ನಿರೀಕ್ಷೆ ಇದೆ.

ಅಲ್ಪಸಂಖ್ಯಾತ ಬಿಳಿಯರ ಮೂರು ಶತಮಾನಗಳ ಪ್ರಾಬಲ್ಯ ಕೊನೆಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಸರ್ಕಾರ ರಚಿಸಲು ಬಹುಸಂಖ್ಯಾತರಾದ ಕಪ್ಪುವರ್ಣೀಯರು ಉತ್ಸುಕರಾಗಿದ್ದಾರೆ. ವಿಶ್ವದ ಗಮನ ಈಗ ದಕ್ಷಿಣ ಆಫ್ರಿಕದತ್ತ ಕೇಂದ್ರೀಕೃತವಾಗಿದೆ.

ADVERTISEMENT

ಇಂದು ಬೆಳಿಗ್ಗೆ ಭಾರತೀಯ ಕಾಲಮಾನ 9 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಸ್ವತಂತ್ರ ಚುನಾವಣಾ ಆಯೋಗವು ನಡೆಸಿದ ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಬಹುಸಂಖ್ಯಾತ ಕಪ್ಪುವರ್ಣೀಯರು ಮತ ಚಲಾಯಿಸಿದ್ದಾರೆ.

ಕೋರ್ಟ್ ತೀರ್ಪಿಗೆ ಬದ್ಧ– ಕಾನ್ಸಿರಾಮ್

ಬೀದರ್, ಏ. 30– ತಮ್ಮ ಪಕ್ಷದ ಹೊಂದಾಣಿಕೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಉತ್ತರ ಪ್ರದೇಶ ಸರ್ಕಾರವು ರಾಮಜನ್ಮ ಭೂಮಿ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನೇ ಅಂತಿಮವೆಂದು ಪರಿಗಣಿಸಿ, ಅದನ್ನು ಜಾರಿಗೆ ತರುವುದೆಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಕಾನ್ಸಿರಾಮ್ ಅವರು ನಿನ್ನೆ ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಉತ್ತರ ಪ್ರದೇಶ ಸರ್ಕಾರ ರಾಮ ಮಂದಿರ ನಿರ್ಮಾಣಕ್ಕೆ ವಿರೋಧವಾಗಿಲ್ಲ. ಆದರೆ ಅದು ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿರಬೇಕು ಎಂಬ ವಿಚಾರವುಳ್ಳದ್ದಾಗಿದೆ. ಒಂದು ವೇಳೆ ಹಿಂದು ಸಂಘಟನೆಗಳು ತಾವು ನಿರ್ಧರಿಸಿದಂತೆ ಒತ್ತಾಯ ಪೂರ್ವಕವಾಗಿ ನ್ಯಾಯಾಲಯದ ಆಜ್ಞೆಯನ್ನು ಉಲ್ಲಂಘಿಸಿ ಮಂದಿರ ನಿರ್ಮಾಣಕ್ಕೆ ಪ್ರಯತ್ನಿಸಿದರೆ ಜನತೆ ಅದನ್ನು ತಡೆಯುವಲ್ಲಿ ಸಮರ್ಥವಾಗಿದೆ ಎಂದು ಅವರು ಹೇಳಿದರು.

ಆಯೋಧ್ಯೆ ಒಂದನ್ನು ಬಿಟ್ಟರೆ ಅದರ ಸುತ್ತಲಿನ ಎಲ್ಲ ವಿಧಾನ ಸಭಾ ಕ್ಷೇತ್ರಗಳನ್ನು ಬಹುಜನ ಸಮಾಜ ಪಕ್ಷ ಹಾಗೂ ಅದರ ಮಿತ್ರ ಪಕ್ಷಗಳೇ ಪಡೆದುಕೊಂಡಿವೆ. ಹಿಂದು ಸಂಘಟನೆಗಳು ಅಕ್ರಮವಾಗಿ ನಡೆಸುವ ಯಾವುದೇ ಕಾರ್ಯಕ್ಕೆ ಈ ಜನ ವಿರುದ್ಧವಾಗಿದ್ದಾರೆ ಎಂದು ಈಗಾಗಲೇ ತೋರಿಸಿಕೊಟ್ಟಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.