ಆಲಮಟ್ಟಿ ಕೆಲಸ ನಿಲ್ಲದು
ನವದೆಹಲಿ, ಆ. 11– ಆಲಮಟ್ಟಿ ಅಣೆಕಟ್ಟಿನ ವಿಚಾರದಲ್ಲಿ ಆಂಧ್ರಪ್ರದೇಶದ ವಾದ ‘ರಾಜಕೀಯ ಸ್ಟಂಟ್’ ಎಮದು ಟೀಕಿಸಿದ ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್.ಪಟೇಲ್, ಅಣೆಕಟ್ಟಿನ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಘೋಷಿಸಿದರು.
ಕಾಮಗಾರಿತೆ ತಡೆ ನೀಡಿರುವ ಆಂಧ್ರ ಹೈಕೋರ್ಟ್ನಲ್ಲಿ ನಾಳೆ ಅಫಿಡವಿಟ್ ಸಲ್ಲಿಸಿ ಕಾಮಗಾರಿ ಎಂದಿನಂತೆ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
4 ಮುಖ್ಯಮಂತ್ರಿಗಳ ಸಮಿತಿ ರಚನೆ: ಇಂದು ವರದಿ ಸಲ್ಲಿಕೆ
ನವದೆಹಲಿ, ಆ. 11– ಆಲಮಟ್ಟಿ ಅಣೆಕಟ್ಟು ಯೋಜನೆಯ ಬಗೆಗೆ ಆಂಧ್ರಪ್ರದೇಶ ಎತ್ತಿರುವ ಆಕ್ಷೇಪಗಳ ಬಗೆಗೆ ವಿಚಾರಣೆ ಮಾಡಿ ನಾಳೆಯೇ ವರದಿ ನೀಡಲು ಇಂದು ನಡೆದ ಸಂಯುಕ್ತ ರಂಗದ ಚಾಲನಾ ಸಮಿತಿ ಸಭೆಯು ನಾಲ್ವರು ಮುಖ್ಯಮಂತ್ರಿಗಳ ಸಮಿತಿ ಯೊಂದನ್ನು ರಚಿಸುವ ಮೂಲಕ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ನಿರ್ಧರಿಸಿತು.
ಮುಖ್ಯಮಂತ್ರಿಗಳಾದ ಜ್ಯೋತಿಬಸು, ಲಾಲೂ ಪ್ರಸಾದ್ ಯಾದವ್, ಎಂ. ಕರುಣಾ ನಿಧಿ ಮತ್ತು ಪ್ರಫುಲ್ಲ ಕುಮಾರ್ ಮಹಂತ ಅವರು ನಾಳೆ ಸಭೆ ಸೇರಿ, ಆಂಧ್ರದ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ದು ಮತ್ತು ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಅಭಿಪ್ರಾಯ ಕೇಳಿ ನಾಳೆ ಸಂಜೆಯೊಳಗೇ ತಮ್ಮ ವರದಿಯನ್ನು ಸ್ಥಾಯಿ ಸಮಿತಿಗೆ ಒಪ್ಪಿಸಲಿದ್ದಾರೆ ಎಂದು ದಳದ ವಕ್ತಾರ ಎಸ್. ಜೈಪಾಲ್ ರೆಡ್ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.