ಗ್ರಾನೈಟ್ ಅಕ್ರಮ ಗಣಿಗಾರಿಕೆ ತಡೆ ಬಹುತೇಕ ಸಫಲ
ಬೆಂಗಳೂರು, ಏ. 26– ಗ್ರಾನೈಟ್ ಅಕ್ರಮ ಗಣಿಗಾರಿಕೆ ತಡೆಗಟ್ಟುವಲ್ಲಿ ಬಹುತೇಕ ಸಫಲತೆ ಸಾಧಿಸಲಾಗಿದೆ. ಈ ಚಟುವಟಿಕೆಗೆ ಪೂರ್ಣವಿರಾಮ ಹಾಕುವ ದಿಕ್ಕಿನಲ್ಲಿ ಈಗಿರುವ ಎಂಟರ ಜತೆಗೆ ಇನ್ನೂ ಹತ್ತು ಚೆಕ್ಪೋಸ್ಟ್ ತೆರೆಯಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಡಿ.ಜಯರಾಂ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಗ್ರಾನೈಟ್ ಗಣಿಗಾರಿಕೆ ವ್ಯವಹಾರ ಈವರೆಗೆ ಸುಮಾರು ಶೇಕಡ 75ರಷ್ಟು ಅಕ್ರಮವಾಗಿಯೇ ನಡೆಯುತ್ತಿತ್ತು. ಹೊಸ ಸರ್ಕಾರ ಬಂದ ನಂತರ ಈ ಅಕ್ರಮ ಚಟುವಟಿಕೆಯನ್ನು ಮುಕ್ಕಾಲು ಪಾಲು ತಗ್ಗಿಸಿದೆ. 20 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಗ್ರಾನೈಟ್ ವಶಪಡಿಸಿಕೊಳ್ಳಲಾಗಿದೆ. ಅಕ್ರಮ ವ್ಯವಹಾರಕ್ಕೆ ಇನ್ನು ಮುಂದೆ ಅವಕಾಶ ಕೊಡುವುದಿಲ್ಲ ಎಂದು ಅವರು ನುಡಿದರು.
ನ್ಯೂಸ್ಪ್ರಿಂಟ್ ಮುಕ್ತ ಆಮದಿಗೆ ಅನುಮತಿ
ನವದೆಹಲಿ, ಏ. 26 (ಪಿಟಿಐ)– ವೃತ್ತಪತ್ರಿಕಾ ಮುದ್ರಣ ಕಾಗದವನ್ನು (ನ್ಯೂಸ್ಪ್ರಿಂಟ್) ಸರ್ಕಾರ ಇಂದು ಹತೋಟಿಯಿಂದ ಮುಕ್ತಗೊಳಿಸಿ ವೃತ್ತಪತ್ರಿಕೆಗಳು ತಾವೇ ಈ ವಸ್ತುವನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಿರುವ ಕಾರಣ, ಗುರುವಾರ ನಡೆಸಲು ಉದ್ದೇಶಿಸಿದ್ದ ‘ಪತ್ರಿಕೆ ಬಂದ್’ ಮುಷ್ಕರವನ್ನು ಪತ್ರಿಕಾರಂಗ ವಾಪಸು ತೆಗೆದುಕೊಂಡಿತು.
ನ್ಯೂಸ್ಪ್ರಿಂಟ್ ಅನ್ನು ಮುಕ್ತ ಸಾಮಾನ್ಯ ಪರವಾನಗಿಯಲ್ಲಿ ಆಮದು ಮಾಡಿಕೊಳ್ಳಲು ಅವಕಾಶ ನೀಡುವುದಾಗಿ ಇಂದು ಸರ್ಕಾರ ಸಂಸತ್ತಿನಲ್ಲಿ ಪ್ರಕಟಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.