ಕಲಘಟಗಿ ಬಳಿ ದರೋಡೆ: ಟ್ರಕ್ ಚಾಲಕನ ಕೊಲೆ
ಹುಬ್ಬಳ್ಳಿ, ಮೇ 4– ಇಲ್ಲಿಗೆ ಸಮೀಪದ ಕಲಘಟಗಿಯ ದೇವಿಕೊಪ್ಪದ ಜುಂಜನಬೈಲು ಬಳಿ ಮುಂಬೈಯಿಂದ ಹುಬ್ಬಳ್ಳಿ ಮೂಲಕವಾಗಿ ಮಂಗಳೂರಿಗೆ ಹೊರಟಿದ್ದ ಖಾಸಗಿ ಲಕ್ಷುರಿ ಬಸ್ಸು ಮತ್ತು ಆರು ಲಾರಿಗಳ ಮೇಲೆ ಬುಧವಾರ ರಾತ್ರಿ ಮಾರಕ ಆಯುಧಗಳೊಂದಿಗೆ ದಾಳಿ ನಡೆಸಿದ ದರೋಡೆಕೋರರು, ಕೇರಳದ ಒಬ್ಬ ಟ್ರಕ್ ಚಾಲಕನನ್ನು ಸ್ಥಳದಲ್ಲೇ ಕೊಂದು, ಸುಮಾರು 13ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿ, ಭಾರೀ ಮೊತ್ತದ ಚಿನ್ನಾಭರಣ, ನಗದು ಮತ್ತಿತರ ಸೊತ್ತುಗಳನ್ನು ಲೂಟಿ ಮಾಡಿದ್ದಾರೆ.
ರಾತ್ರಿ ಸುಮಾರು 10.30ರ ನಂತರ ಈ ದರೋಡೆ ಸಂಭವಿಸಿದೆ. ಹಲ್ಲೆಯಲ್ಲಿ ಗಾಯಗೊಂಡಿರುವ 13 ಜನರ ಪೈಕಿ 6 ಮಂದಿಯನ್ನು ನಗರದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.
ನಗರ ಸಂಚಾರ ಯೋಜನೆ ಜಮೀನು ನೀಡಲು ಒಪ್ಪಿಗೆ
ನವದೆಹಲಿ, ಮೇ 4– ಬೃಹದಾಕಾರವಾಗಿ ಬೆಳೆದು ತೀವ್ರ ಸಂಚಾರ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ಸಂಚಾರದ ಒತ್ತಡಕ್ಕೆ ನಿಯಂತ್ರಣ ಹಾಕುವ ಮಹತ್ವಾಕಾಂಕ್ಷೆಯ ಸಾಮೂಹಿಕ ಕ್ಷಿಪ್ರ ಸಂಚಾರ ಯೋಜನೆಗೆ ನೆರವಾಗಲು ಪ್ರಮುಖ ಪ್ರದೇಶಗಳಲ್ಲಿ ರಕ್ಷಣಾ ಇಲಾಖೆ ಮತ್ತು ರೈಲ್ವೆ ಇಲಾಖೆ ಹೊಂದಿರುವ ನಿವೇಶನವನ್ನು ಪಡೆಯುವಲ್ಲಿ ಕರ್ನಾಟಕ ಸರ್ಕಾರ ಇಂದು ಯಶಸ್ವಿಯಾಯಿತು.
ಇದಕ್ಕೆ ಪ್ರತಿಯಾಗಿ ಸರ್ಕಾರವು ಯಲಹಂಕದ ಬಳಿ ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣಕ್ಕೆ 300 ಎಕರೆ ಭೂಮಿ ನೀಡಲು ಒಪ್ಪಿಗೆ ಕೊಟ್ಟಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.