ಕರ್ನಾಟಕ ಕಾಂಗ್ರೆಸ್ ಪಕ್ಷದ ಐವರು ಶಾಸಕರು ದಳಕ್ಕೆ
ಬೆಂಗಳೂರು, ಮೇ 20– ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಪಕ್ಷದ ಐವರು ವಿಧಾನಸಭಾ ಸದಸ್ಯರು ಇಂದು ಇಲ್ಲಿ ಆಡಳಿತ ಪಕ್ಷವಾದ ಜನತಾದಳ ಸೇರಿದರು.
ಜನತಾದಳ ಶಾಸಕಾಂಗ ಪಕ್ಷದ ಕಾರ್ಯದರ್ಶಿ ವಿ.ಸೋಮಣ್ಣ ಈ ವಿಷಯವನ್ನು ಪ್ರಕಟಿಸಿದ್ದಾರೆ.
ಮಾಲೀಕಯ್ಯ ಗುತ್ತೇದಾರ್ (ಅಫ್ಜಲಪುರ), ಸುಭಾಷ್ ಗುತ್ತೇದಾರ್ (ಆಳಂದ್), ಬಸವಯ್ಯ (ಚಿಕ್ಕನಾಯ್ಕನ
ಹಳ್ಳಿ), ರಾಜ ವೆಂಕಟಪ್ಪ ನಾಯಕ (ಸುರಪುರ) ಹಾಗೂ ವಸಂತ ಅಸ್ನೋಟಿಕರ (ಕಾರವಾರ) ಕೆಸಿಪಿಯನ್ನು ತೊರೆದು ದಳ ಸೇರಿದ ಶಾಸಕರಾಗಿದ್ದಾರೆ.
ಕನ್ನಡಿಗರು– ಒಂದೆರಡು ದಿನದಲ್ಲಿ ಸ್ಪಷ್ಟನೆ
ಬೆಂಗಳೂರು, ಮೇ 20– ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿ ಶಿಕ್ಷಣ ಕೋರ್ಸ್ಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಕೂರಬಯಸುವ ವಿದ್ಯಾರ್ಥಿಗಳ ಅರ್ಹತೆ ವಿಚಾರದಲ್ಲಿ ಎದ್ದಿರುವ ‘ಕನ್ನಡಿಗರು ಮತ್ತು ಕರ್ನಾಟಕದವರು’ ಎನ್ನುವ ವಿವಾದವನ್ನು ಇನ್ನು ಒಂದೆರಡು ದಿನಗಳಲ್ಲಿಯೇ ಇತ್ಯರ್ಥಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಇಂದು ಆಶ್ವಾಸನೆ ನೀಡಿದರು.
ಹತ್ತು ವರ್ಷದಿಂದ ಕರ್ನಾಟಕದಲ್ಲಿ ನೆಲೆಸಿರುವವರೆಲ್ಲರೂ ಕನ್ನಡಿಗರೇ ಎಂಬ ತತ್ವವನ್ನು ಸರ್ಕಾರ ಒಪ್ಪಿಕೊಂಡಿರುವಾಗ ಗೊಂದಲಕ್ಕೆ ಕಾರಣವೇ ಇಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.