ಬಸ್ ಪಾಸ್: ಹಳೆಯ ವ್ಯವಸ್ಥೆ ಮತ್ತೆ ಜಾರಿ
ಬೆಂಗಳೂರು, ಜುಲೈ 3– ವಿವಿಧ ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿರುವ ಚಳವಳಿಗೆ ಮಣಿದಿರುವ ಸರ್ಕಾರ, ವಿದ್ಯಾರ್ಥಿ ಬಸ್ ಪಾಸ್ನ ಹಳೆಯ ಪದ್ಧತಿಯನ್ನೇ ಮತ್ತೆ ಜಾರಿಗೆ ತರುವ ತೀರ್ಮಾನಕ್ಕೆ ಬಂದಿದೆ.
ಒಂದರಿಂದ ಏಳನೆಯ ತರಗತಿಯವರೆಗಿನ (12 ವರ್ಷದವರೆಗೆ) ವಿದ್ಯಾರ್ಥಿಗಳಿಗೆ ಈ ಮೊದಲು ಇದ್ದ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮುಂದುವರಿಸುವುದೂ ಈ ತೀರ್ಮಾನದಲ್ಲಿ ಸೇರಿದೆ. ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ತಿಂಗಳಿಗೆ ಐದು ರೂಪಾಯಿ ಇದ್ದ ಬಸ್ಪಾಸ್ ದರವನ್ನು ಹತ್ತು ರೂಪಾಯಿಗೆ ಹೆಚ್ಚಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಮೊದಲ ಹತ್ತು ಕಿ.ಮೀ.ವರೆಗೆ ಇದ್ದ ಹತ್ತು ರೂಪಾಯಿ ದರವನ್ನು 15 ರೂಪಾಯಿಗೆ, 10ರಿಂದ 40 ಕಿ.ಮೀ ಪ್ರಯಾಣಕ್ಕೆ ಇದ್ದ 15 ರೂಪಾಯಿ ದರವನ್ನು 20 ರೂಪಾಯಿಗೆ ಹೆಚ್ಚಿಸಲಾಗಿದೆ.
ಬರ: ಕೇಂದ್ರಕ್ಕೆ ಶೀಘ್ರ ವರದಿ
ಉಡುದೊರೆಹಳ್ಳ (ಕೊಳ್ಳೇಗಾಲ ತಾಲ್ಲೂಕು), ಜುಲೈ 3– ರಾಜ್ಯದ 80 ತಾಲ್ಲೂಕುಗಳಿಗೆ ವ್ಯಾಪಿಸಿರುವ ಬರಗಾಲದ ಸಂಪೂರ್ಣ ಚಿತ್ರಣವನ್ನು ನೀಡುವ ಸಮಗ್ರ ವರದಿಯನ್ನು ಕೇಂದ್ರಕ್ಕೆ ಜುಲೈ 15ರ ವೇಳೆಗೆ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳ ಬರಗಾಲದ ಸ್ವರೂಪ ಕುರಿತಂತೆ ಸ್ಪಷ್ಟ ಚಿತ್ರಣವನ್ನು ಜುಲೈ ಮೊದಲನೇ ವಾರದಲ್ಲಿ ಸಲ್ಲಿಸಲು ಸರ್ಕಾರ ಆದೇಶ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.