ಆನಂದಮಾರ್ಗ ಆಶ್ರಮದ ಮೇಲೆ ದಾಳಿ– 11 ಮಂದಿ ಬಂಧನ
ಕಲ್ಕತ್ತ, ಡಿ. 24 (ಪಿಟಿಐ, ಯುಎನ್ಐ)– ಪಶ್ಚಿಮ ಬಂಗಾಳದ ಪುರುಲಿಯ ಜಿಲ್ಲೆಯಲ್ಲಿ ಅಪರಿಚಿತ ವಿಮಾನವೊಂದು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಇಳಿಸಿ ಹೋಗಿದ್ದರ ಹಿನ್ನೆಲೆಯಲ್ಲಿ, ಅಲ್ಲಿನ ಆನಂದಮಾರ್ಗ ಆಶ್ರಮದ ವಿಶ್ವ ಕಚೇರಿ ಮೇಲೆ ದಾಳಿ ನಡೆಸಿ ಐವರು ವಿದೇಶಿಯರು ಸೇರಿ 11 ಜನರನ್ನು ಬಂಧಿಸಲಾಗಿದೆ.
ಪೊಲೀಸ್ ಮತ್ತು ಅರೆಸೇನಾ ಪಡೆ ಸಿಬ್ಬಂದಿ ನಿನ್ನೆ ಮಧ್ಯರಾತ್ರಿ ಆನಂದಮಾರ್ಗ ಪ್ರದೇಶವನ್ನು ಸುತ್ತುವರಿದು ಹಠಾತ್ ಶೋಧ ಆರಂಭಿಸಿದರು.
ಎಂಆರ್ಪಿಎಲ್ ಕೊಳವೆ ಮಾರ್ಗ ಸಮಸ್ಯೆ ಇತ್ಯರ್ಥ
ಬೆಂಗಳೂರು, ಡಿ. 24– ಮಂಗಳೂರು ತೈಲಾಗಾರವು ಸಮುದ್ರಕ್ಕೆ ತ್ಯಾಜ್ಯ ವಸ್ತು ಬಿಡಲು ಕೊಳವೆ ಅಳವಡಿಸುತ್ತಿರುವುದರ ವಿರುದ್ಧ ಚಳವಳಿ ನಡೆಸುತ್ತಿರುವ ಮೀನುಗಾರರ ಮುಖಂಡರು, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು, ಸಂಸತ್ ಸದಸ್ಯರು, ಕಂಪನಿಯ ಪ್ರತಿನಿಧಿಗಳು ಹಾಗೂ ಪರಿಸರವಾದಿಗಳ ಜತೆಗೆ ಇಂದು ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಇಲ್ಲಿ ನಡೆಸಿದ ಮಾತುಕತೆಯಿಂದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ಸಮುದ್ರ ಸೇರುವ ತ್ಯಾಜ್ಯ ವಸ್ತುವಿನಿಂದ ಜಲಮಾಲಿನ್ಯ ಉಂಟಾಗಿ ತಮ್ಮ ಬದುಕಿಗೆ ಆಧಾರವಾಗಿರುವ ಮೀನುಗಳ ನಾಶಕ್ಕೆ ಕಾರಣವಾಗುತ್ತದೆ ಎಂದು ಆತಂಕಗೊಂಡಿರುವ ಮೀನುಗಾರರು ಚಳವಳಿ ತೀವ್ರಗೊಳಿಸಿದ್ದರಿಂದ ಉಂಟಾದ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.