
25 ವರ್ಷಗಳ ಹಿಂದೆ ಈ ದಿನ
ಚಿತ್ರೀಕರಣ ವೇಳೆ ಹೆಜ್ಜೇನು ಕಚ್ಚಿ ಕ್ಯಾಮೆರಾಮನ್ ಸಾವು
ಚನ್ನಪಟ್ಟಣ, ಜ. 7– ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಆವರಣ ದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ‘ಹುಚ್ಚ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಹೆಜ್ಜೇನು
ಕಚ್ಚಿದ ಪರಿಣಾಮವಾಗಿ ಇಂದು ಮಧ್ಯಾಹ್ನ ಕ್ಯಾಮೆರಾಮನ್ ಸತ್ತು, ಇತರ ಏಳು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರೀಕರಣದಲ್ಲಿದ್ದ ಕ್ಯಾಮೆರಾಮನ್ ಸಹಾಯಕ ಕರುಣಾಕರ ಶೆಟ್ಟಿ (30) ಮೃತಪಟ್ಟಿದ್ದಾರೆ. ಓಂಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ‘ಸ್ಪರ್ಶ’ ಖ್ಯಾತಿಯ ಸುದೀಪ್ ಮತ್ತು ರೇಖಾ ನಾಯಕ ನಾಯಕಿಯಾಗಿ ನಟಿಸುತ್ತಿದ್ದು, ಭಾನುವಾರ ಹಾಡಿನ ಚಿತ್ರೀಕರಣದಲ್ಲಿ ಮುಂಬೈನ ನರ್ತಕ, ನರ್ತಕಿಯರು ಭಾಗವಹಿಸಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ರಾಣಿ ಮುಖರ್ಜಿ, ಪ್ರೀತಿ ಜಿಂಟಾ ವಿಚಾರಣೆ ಸಂಭವ
ಮುಂಬೈ, ಜ. 7 (ಪಿಟಿಐ)– ಭೂಗತ ಜಗತ್ತು ಮತ್ತು ಬಾಲಿವುಡ್ ಸಂಪರ್ಕ ಕುರಿತಂತೆ ಒಂದೆರಡು ದಿನಗಳಲ್ಲಿ ಹಿಂದಿ ಚಿತ್ರರಂಗದ ಖ್ಯಾತ ತಾರೆಯರಾದ ರಾಣಿ ಮುಖರ್ಜಿ ಮತ್ತು ಪ್ರೀತಿ ಜಿಂಟಾ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮುಂಬೈ ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ಬಾಲಿವುಡ್ ಮತ್ತು ಭೂಗತ ಜಗತ್ತಿನ ಸಂಪರ್ಕ ಸಾಕಷ್ಟು ಸಾಕ್ಷ್ಯಾಧಾರಗಳೊಂದಿಗೆ ಬಹಿರಂಗವಾಗುತ್ತಿದೆ. ಅಲ್ಲದೆ, ಬಾಲಿವುಡ್ನಲ್ಲಿ ತಯಾರಾಗುವ ಸುಮಾರು ಶೇ 60ರಷ್ಟು ಚಿತ್ರಗಳಿಗೆ ಮಾಫಿಯಾ ಗುಂಪುಗಳೇ ಹಣನೀಡುತ್ತವೆ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.