ಸಿನಿಮಾ ಪ್ರದರ್ಶಕರ ‘ಕನ್ನಡ ದ್ರೋಹ’– ಗಣ್ಯರ ಪ್ರಹಾರ
ಬೆಂಗಳೂರು, ಫೆ. 25– ‘ಕನ್ನಡ ಚಿತ್ರಗಳ ಪಾಲಿಗೆ ‘ರಾಹು ಕೇತುಗಳಂತೆ’ ಕಾಡುತ್ತಿರುವ ಚಿತ್ರ ಪ್ರದರ್ಶಕರು ಮತ್ತು ವಿತರಕರ ಧೋರಣೆ ಕನ್ನಡದ್ರೋಹಿ ನಿಲುವಾಗಿದೆ’ ಎಂದು ಇಲ್ಲಿ ಇಂದು ನಡೆದ ಚಿಂತನ ಕಾರ್ಯಕ್ರಮವೊಂದರಲ್ಲಿ ಒಟ್ಟಾರೆ ಅಭಿಪ್ರಾಯ ಮೂಡಿಬಂತು.
ಕನ್ನಡ ಚಿತ್ರಗಳ ಅಳಿವು ಉಳಿವಿಗಾಗಿ ಈಗ ನಡೆದಿರುವ ಹೋರಾಟದಲ್ಲಿ ಕನ್ನಡ ಸಾಹಿತ್ಯ ಲೋಕದ ಗಣ್ಯರು ಸಕ್ರಿಯವಾಗಿ ಪಾಲ್ಗೊಂಡಲ್ಲಿ ಈ ಆಂದೋಲನ ಇನ್ನಷ್ಟು ವ್ಯಾಪಕ ಸ್ವರೂಪವನ್ನು ತಳೆದೀತು ಎಂಬ ಮನವಿಯನ್ನೂ ಈ ಚಿಂತನ ವೇದಿಕೆ ಮಾಡಿಕೊಂಡಿತು.
ಮಲಯಾಳಂ, ತೆಲುಗು ಭಾಷೆಗಳಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಂಥ ಸಾಹಿತಿಗಳೂ ಚಿತ್ರ ನಿರ್ಮಾಣದ
ಚಟುವಟಿಕೆಗಳಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿಯೂ ಇಂಥ ಬೆಳವಣಿಗೆಯಾದರೆ ಕಳಪೆ ಚಿತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಉದ್ಯಮಕ್ಕೆ ಅಂಟಿರುವ ಕಳಂಕ ನಿವಾರಣೆಯಾಗುವ ಸಾಧ್ಯತೆಯೂ ಇದೆ ಎಂದೂ ಪ್ರತಿಪಾದಿಸಲಾಯಿತು.
ಬೇಸಿಗೆಗೆ ಮೊದಲೇ ನೀರಿನ ಬವಣೆ
ಬೆಂಗಳೂರು, ಫೆ. 25– ಬೇಸಿಗೆ ಹತ್ತಿರ ಬಂದಂತೆ ಬೆಂಗಳೂರಿನಲ್ಲಿ ಚಡಪಡಿಕೆ ಶುರುವಾಗುತ್ತದೆ. ತಿಪ್ಪಗೊಂಡನಹಳ್ಳಿ, ಹೆಸರಘಟ್ಟಗಳಲ್ಲಿ ನೀರಿನ ಪ್ರಮಾಣ ಕುಗ್ಗಿ ನಲ್ಲಿಗಳು ಸೊರ್ರನೆ ‘ಅಳಲಾರಂಭಿಸುತ್ತವೆ’: ನೀರಿಗಾಗಿ ಮನೆ ಮಂದಿಯೆಲ್ಲಾ ರಾತ್ರಿ ಪಾಳಿ ಮಾಡಿ ಸುಸ್ತಾಗಿ ಜನರ ಸಹನೆ ಆವಿಯಾಗುತ್ತದೆ. ಜಲಮಂಡಲಿಗೆ ಈ ನಾಲ್ಕು ತಿಂಗಳು ಶರಶಯ್ಯೆಯ ಮೇಲೆ ಮಲಗಿದಂತೆ. ಮಿನಿ ಜಲ ವಿವಾದಗಳು ಅಲ್ಲಲ್ಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.