ದಳದ ಜತೆ ಮೈತ್ರಿಗೆ ಬಿಎಸ್ಪಿ ನಕಾರ
ನವದೆಹಲಿ, ಮಾರ್ಚ್ 24 (ಪಿಟಿಐ)– ಮುಂಬರುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನ ಹತ್ತಿರ ಬರುತ್ತಿದ್ದರೂ ವಿವಿಧ ರಾಜಕೀಯ ಪಕ್ಷಗಳ ಮಧ್ಯೆ ಹೊಂದಾಣಿಕೆ ಕಸರತ್ತು ಇನ್ನೂ ಮುಗಿದಿಲ್ಲ. ದಳ–ಬಿಎಸ್ಪಿ ಮೈತ್ರಿ ಮುರಿದು ಬಿದ್ದಿದ್ದು ಇಂದಿನ ವಿದ್ಯಮಾನ.
ರಾಷ್ಟ್ರಮಟ್ಟದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಭಾರತೀಯ ಜನತಾ ಪಕ್ಷ ಸ್ಪಷ್ಟಪಡಿಸಿದ್ದು ಜನತಾದಳದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಬಹುಜನ ಸಮಾಜ ಪಕ್ಷ ತಳ್ಳಿಹಾಕಿದೆ. ಈ ನಡುವೆ, ಉತ್ತರ ಪ್ರದೇಶದಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ಕುರಿತಂತೆ ಜನತಾದಳ ಮತ್ತು ಸಮಾಜವಾದಿ ಜನತಾಪಕ್ಷಗಳು ಇಂದು ಸಭೆ ನಡೆಸಿದವು.
ಕಾಂಗೈ ಒಳಗಿನ ದುಷ್ಟಶಕ್ತಿ ತೊಲಗಿಸಲು ರಾವ್ ಪಣ
ನವದೆಹಲಿ, ಮಾರ್ಚ್ 24 (ಪಿಟಿಐ)– ಪಕ್ಷದೊಳಗೇ ಇರುವ ದುಷ್ಟಶಕ್ತಿಗಳನ್ನು ತೊಲಗಿಸಿ ಹೊಸ ರಕ್ತದೊಂದಿಗೆ ಪಕ್ಷವನ್ನು ಪುನರ್ರಚಿಸುವುದಾಗಿ ಕಾಂಗೈ ಅಧ್ಯಕ್ಷರೂ ಆಗಿರುವ ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಘೋಷಿಸಿದರು.
ದೆಹಲಿ ಪ್ರದೇಶ ಕಾಂಗೈ ಸಮಿತಿ ಏರ್ಪಡಿಸಿದ್ದ ಸಂಕಲ್ಪ ರ್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು. ಹವಾಲ ಹಗರಣವನ್ನು ಪ್ರಸ್ತಾಪಿಸದೆ ಮಾತನಾಡಿದ ಅವರು, ಪಕ್ಷದೊಳಗೆ ಕೆಲವು ದುಷ್ಟಶಕ್ತಿಗಳಿವೆ. ಅವುಗಳನ್ನು ತೊಲಗಿಸಬೇಕಾಗಿದೆ ಮತ್ತು ಪಕ್ಷದೊಳಕ್ಕೆ ಹೊಸ ಮುಖಗಳ ಸೇರ್ಪಡೆಯಾಗಬೇಕಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.