ADVERTISEMENT

25 ವರ್ಷಗಳ ಹಿಂದೆ: ಶುಕ್ರವಾರ 01.11.1996

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 22:00 IST
Last Updated 31 ಅಕ್ಟೋಬರ್ 2021, 22:00 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

ನಾಲ್ಕು ಗಂಟೆ ದೊಂಬಿ, ಭಾರಿ ನಷ್ಟ‌

ಧಾರವಾಡ, ಅ. 31– ಗದಗ ಜಿಲ್ಲೆ ರಚನೆಗಾಗಿ ಸುಮಾರು 2 ದಶಕಗಳಿಗೂ ಹೆಚ್ಚು ಕಾಲದಿಂದ ಬೇಡಿಕೆ ಸಲ್ಲಿಸುತ್ತ ಬಂದಿರುವ ಗದಗ ಪಟ್ಟಣದಲ್ಲಿ ನಿನ್ನೆ ಉದ್ರಿಕ್ತ ಜನರ ದೊಡ್ಡ ಗುಂಪು ಹಿಂಸಾಚಾರದಲ್ಲಿ ತೊಡಗಿ, ಈ ಶತಮಾನದಲ್ಲಿಯೇ ಕಂಡು ಕೇಳರಿಯದಂತಹ ವ್ಯಾಪಕ ಪ್ರಮಾಣದಲ್ಲಿ ಸರ್ಕಾರಿ ಆಸ್ತಿಪಾಸ್ತಿಯನ್ನು ನಾಶಪಡಿಸುವಂತಹ ಪೈಶಾಚಿಕ ಕೃತ್ಯ ನಡೆಸಿದೆ.

ಸುಮಾರು ನಾಲ್ಕು ತಾಸುಗಳಿಗೂ ಹೆಚ್ಚು ಕಾಲ ಇಡೀ ಪಟ್ಟಣದಲ್ಲಿ ಉಂಟಾದ ಅರಾಜಕ ಪರಿಸ್ಥಿತಿಯಿಂದಾಗಿ ಹಿಂಸಾಚಾರ, ಆಸ್ತಿಪಾಸ್ತಿ ನಷ್ಟದಲ್ಲಿ ತೊಡಗಿದ ಸಾವಿರಾರು ಸಂಖ್ಯೆಯಲ್ಲಿದ್ದ ಜನರು ಸಮೂಹಸನ್ನಿಗೆ ಒಳಗಾದಂತೆ ವರ್ತಿಸಿ ರಾಜ್ಯ ಸರ್ಕಾರದ ಹಾಗೂ ಕೇಂದ್ರದ ಹಲವಾರು ಕಚೇರಿಗಳಿಗೆ ನುಗ್ಗಿ ಪೀಠೋಪಕರಣಗಳು, ದಾಖಲೆ ಪತ್ರಗಳು, ನಗದು ಹಣ, ಸರ್ಕಾರಿ ಹಾಗೂ ಸಾರ್ವಜನಿಕರ ವಾಹನಗಳು ಸೇರಿದಂತೆ ಕಚೇರಿಯ ಸಮಸ್ತ ವಸ್ತುಗಳಿಗೆ ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ವ್ಯಾಪಕ ಹಿಂಸಾಚಾರದಲ್ಲಿ ಸುಮಾರು 15 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟ ಆಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ.

ADVERTISEMENT

ಕ್ರಿಕೆಟ್ ಸ್ಟೇಡಿಯಂ ಬಳಿ ಸ್ಫೋಟ

ಬೆಂಗಳೂರು, ಅ. 31– ವಿಶ್ವ ಸುಂದರಿ ಸ್ಪರ್ಧೆ ನಡೆಯಲಿರುವ ನಗರದ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಹೊರಗೆ ಇಂದು ರಾತ್ರಿ ಅಪರಿಚಿತರು ಸ್ಫೋಟಕ ಸಿಡಿಸಿ ಹಾನಿಯುಂಟು ಮಾಡಿದ್ದಾರೆ.

ರಾತ್ರಿ ಸುಮಾರು 8.45ರ ವೇಳೆಗೆ ಕ್ರೀಡಾಂಗಣದ ಮುಖ್ಯ ಪ್ರವೇಶ ದ್ವಾರದ ಬಳಿ ಭಾರಿ ಸದ್ದಿನೊಂದಿಗೆ ಸ್ಫೋಟಕಸಿಡಿದು ಪಕ್ಕದಲ್ಲಿದ್ದ ಮಾಹಿತಿ ಕೇಂದ್ರದ ಗಾಜುಗಳು ಪುಡಿಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.