ಶಿಕ್ಷೆಗೊಳಗಾದವರಿಗೆ ಚುನಾವಣೆ ಸ್ಪರ್ಧೆ ನಿಷಿದ್ಧ
ನವದೆಹಲಿ, ಆಗಸ್ಟ್ 29 (ಪಿಟಿಐ)– ನ್ಯಾಯಾಲಯದಲ್ಲಿ ಆರೋಪ ಸಾಬೀತಾಗಿ ಶಿಕ್ಷೆಗೆ ಗುರಿಯಾದ ವ್ಯಕ್ತಿ ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಇಂದು ಹೊಸದಾಗಿ ಆದೇಶ ಹೊರಡಿಸಿದೆ.
ರಾಜಕೀಯದಲ್ಲಿನ ಅಪರಾಧೀಕರಣದ ಗಂಭೀರ ಸಮಸ್ಯೆಗಳ ವಿರುದ್ಧ ಹೋರಾಡಲು ಚುನಾವಣಾ ಆಯುಕ್ತ ಎಂ.ಎಸ್.ಗಿಲ್
ಅವರ ನೇತೃತ್ವದ ಮೂವರು ಸದಸ್ಯರನ್ನೊಳಗೊಂಡ ಸಮಿತಿಯು ಈ ಆದೇಶ ಹೊರಡಿಸಿದೆ.
ಈಗಾಗಲೇ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಸದಸ್ಯರಾಗಿ ಆಯ್ಕೆ ಆಗಿರುವ ಶಿಕ್ಷೆಗೊಳಗಾದ ವ್ಯಕ್ತಿಗಳಿಗೆ ಈಗ ಹೊರಡಿಸಿರುವ ಆದೇಶ ಸಂಬಂಧ ಪಡುವುದಿಲ್ಲ. ಮುಂದಿನ ವರ್ಷ ನಾಗಾಲ್ಯಾಂಡ್, ತ್ರಿಪುರಾ, ಮಿಜೊರಾಂ, ಹಿಮಾಚಲ ಪ್ರದೇಶ, ಮೇಘಾಲಯ, ದೆಹಲಿ, ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಈ ಆದೇಶ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.