ADVERTISEMENT

25 ವರ್ಷಗಳ ಹಿಂದೆ: ಶನಿವಾರ 8-11-1997

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:30 IST
Last Updated 7 ನವೆಂಬರ್ 2022, 19:30 IST
   

‘ಮುಖ್ಯಮಂತ್ರಿ ಸ್ಥಾನ ಬಿಡುತ್ತೇನೆ, ಏನಾದರೂ ಮಾಡಿಕೊಳ್ಳಿ’– ಪಟೇಲ್

ಬೆಂಗಳೂರು, ನ. 7– ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪುತ್ರ ಎಚ್‌.ಡಿ. ರೇವಣ್ಣ ಅವರ ಮನೆಯಲ್ಲಿ ಈಚೆಗೆ ಕರೆದಿದ್ದ ಜನತಾದಳದ ಶಾಸಕರ ಸಭೆ ಬಗ್ಗೆ ಮನ ನೊಂದಿರುವ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು, ‘ಬೇಕಿದ್ದರೆ ಈ ಸ್ಥಾನ ಬಿಟ್ಟುಬಿಡುತ್ತೇನೆ; ಏನಾದರೂ ಮಾಡಿಕೊಳ್ಳಿ’ ಎಂದು ಸಂಪುಟ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಪುಟ ಸಭೆಯ ಕಾರ್ಯಕ್ರಮ ಪಟ್ಟಿಯ ವಿಷಯಗಳೆಲ್ಲಾ ಪೂರ್ಣಗೊಂಡ ನಂತರ ಪಟೇಲ್ ಅವರು ತಾವಾಗಿಯೇ ಶಾಸಕರ ಸಭೆ ವಿಷಯ ಪ್ರಸ್ತಾಪಿಸಿ, ‘ಈ ರೀತಿಯ ಚಟುವಟಿಕೆ ನೋಡಿ ಸಾಕಾಗಿ ಹೋಗಿದೆ. ಯಾಕೆ ಬೇಕಿತ್ತು ಇಂತಹ ಸಭೆ’ ಎಂದು ಅತೃಪ್ತಿ ಹೊರಗೆಡವಿದರು ಎಂದು ಹೇಳಲಾಗಿದೆ.

ADVERTISEMENT

‘ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿ ವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಿರುವುದ ರಿಂದ ಜನತೆಯಲ್ಲಿ ಒಳ್ಳೆಯ ಭಾವನೆ ಮೂಡು ತ್ತಿರುವಾಗ, ಈ ರೀತಿಯ ಸಭೆಗಳನ್ನು ನಡೆ ಸುವುದರಿಂದ ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗುವುದಿಲ್ಲವೆ’ ಎಂದು ಪಟೇಲರು ಖಾರವಾಗಿಯೇ ಹೇಳಿದರು.

ಕೇಂದ್ರಕ್ಕೆ ಬೆಂಬಲ ವಾಪಸ್: ಡಿಎಂಕೆ ಬೆದರಿಕೆ
ಚೆನ್ನೈ, ನ. 7 (ಪಿಟಿಐ)–
ಕಾವೇರಿ ವಿವಾದದ ಬಗ್ಗೆ ಕೇಂದ್ರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಇಂದು ಆರೋಪಿಸಿರುವ ತಮಿಳುನಾಡಿನ ಮುಖ್ಯ ಮಂತ್ರಿ ಎಂ. ಕರುಣಾನಿಧಿ ಅವರು ಕೇಂದ್ರದ ಸಂಯುಕ್ತರಂಗ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸು ಪಡೆಯುವ ಬೆದರಿಕೆ ಹಾಕಿದ್ದಾರೆ.

ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪಿನ ಜಾರಿಗಾಗಿ ರಚಿಸಲು ಉದ್ದೇಶಿಸಿರುವ ಕಾವೇರಿ ಪ್ರಾಧಿಕಾರದ ಬಗ್ಗೆ ತಕ್ಷಣ ಅಧಿಸೂಚನೆ ಹೊರಡಿಸಬೇಕೆಂಬ ರಾಜ್ಯದ ಮನವಿಗೆ ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಸೂಕ್ತವಾಗಿ ಪ್ರತಿಕ್ರಿಯೆ ನೀಡದೇ ಇರುವುದರ ವಿರುದ್ಧ ಕಿಡಿಕಾರಿದ ಅವರು ಕೇಂದ್ರ ಸಂಪುಟದಲ್ಲಿ ಮುಂದುವರಿಯುವ ಬಗ್ಗೆ ತಮ್ಮ ಪಕ್ಷದ ಪುನರ್ ಪರಿಶೀಲಿಸುವ ಪರಿಸ್ಥಿತಿ ಉಂಟಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.