ಹವಾಲ: ಆರೋಪಪಟ್ಟಿ ಪರಿಶೀಲನೆ– ತೀರ್ಪು ಇಂದು
ನವದೆಹಲಿ, ಮಾರ್ಚ್ 10 (ಯುಎನ್ಐ)– ಹವಾಲ ಹಗರಣದಲ್ಲಿ ಎನ್.ಡಿ.ತಿವಾರಿ, ಜಾಫರ್ ಷರೀಫ್ ಸೇರಿ ಎಂಟು ರಾಜಕಾರಣಿಗಳು ಹಾಗೂ ಐವರು ಅಧಿಕಾರಿಗಳ ವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಗಳನ್ನು ತನಿಖೆಗೆ ಸ್ವೀಕರಿಸುವ ಕುರಿತು ಹವಾಲ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ನೀಡಲಿದೆ.
ಹವಾಲ ವಿಶೇಷ ನ್ಯಾಯಾಧೀಶ ವಿ.ಬಿ.ಗುಪ್ತಾ ಅವರು ಈ ತಿಂಗಳ 7ರಂದು ತೀರ್ಪನ್ನು ನಾಳೆಗೆ ಕಾಯ್ದಿಟ್ಟಿದ್ದರು. ಎನ್.ಡಿ.ತಿವಾರಿ, ಜಾಫರ್ ಷರೀಫ್, ಆರ್.ಕೆ.ಧವನ್, ಶರದ್ ಯಾದವ್, ಹರ್ಮೋಹನ್ ಧವನ್, ನಟವರ್ ಸಿಂಗ್, ಡಿ.ಬಿ.ಢಾಕ್ಣೆ ಮತ್ತು ರಂಜಿತ್ ಸಿಂಗ್ ಅವರ ವಿರುದ್ಧ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಗಳನ್ನು ಅವಗಾಹನೆಗೆ ತೆಗೆದುಕೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಅವರು ನಾಳೆ ತಮ್ಮ ನಿರ್ಧಾರವನ್ನು ಪ್ರಕಟಿಸುವರು.
ಸಹಕಾರಿ ಸಂಸ್ಥೆಗಳಿಗೆ ಸ್ವಾಯತ್ತತೆ– ಮಿಶ್ರಾ
ನವದೆಹಲಿ, ಮಾರ್ಚ್ 10 (ಪಿಟಿಐ)– ದುರ್ಬಲ ವರ್ಗದವರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಹಕಾರಿ ಸಂಘಗಳನ್ನು ಹೆಚ್ಚು ಪ್ರಜಾಸತ್ತಾತ್ಮಕಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದು ಎಂದು ಕೃಷಿ ಹಾಗೂ ಸಹಕಾರಿ ಖಾತೆಗಳನ್ನು ಇತ್ತೀಚೆಗೆ ವಹಿಸಿಕೊಂಡ ಡಾ. ಜಗನ್ನಾಥ ಮಿಶ್ರಾ ಹೇಳಿದ್ದಾರೆ.
ಉದ್ದೇಶಿತ ತಿದ್ದುಪಡಿಯು ಸಹಕಾರಿ ಸಂಸ್ಥೆಗಳಿಗೆ ವೃತ್ತಿಪರ ನಿರ್ವಹಣೆ, ಉತ್ತಮ ಹಣಕಾಸು ಹಾಗೂ ಹೆಚ್ಚಿನ ಸ್ವಾಯತ್ತತೆ ನೀಡಲಿದೆ ಎಂದು ಮಿಶ್ರಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.