ವೇತನ–ಭತ್ಯ ಒಪ್ಪಂದಕ್ಕೆ ಸಹಿ: ಸಾರಿಗೆ ಮುಷ್ಕರ ಮುಕ್ತಾಯ
ಬೆಂಗಳೂರು, ಅ. 18– ಸಾರಿಗೆ ನೌಕರರ ಒಕ್ಕೂಟ ಹಾಗೂ ಆಡಳಿತ ವರ್ಗ ಇಂದು ರಾತ್ರಿ ಒಪ್ಪಂದವೊಂದಕ್ಕೆ ಸಹಿ ಹಾಕುವುದರೊಂದಿಗೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರ ಮುಕ್ತಾಯಗೊಂಡಿತು.
ರಾತ್ರಿ ಬಹಳ ಹೊತ್ತಿನವರೆಗೆ ಆಡಳಿತ ವರ್ಗ ಮತ್ತು ನೌಕರರ ಒಕ್ಕೂಟದ ನಡುವೆ ನಡೆದ ಮಾತುಕತೆ ಫಲಪ್ರದವಾಗಿ, ಅಂತಿಮವಾಗಿ ನೌಕರರು ಬಯಸಿದಂತೆಯೇ 1995ರ ಡಿಸೆಂಬರ್ 31ಕ್ಕೆ ಹಳೆಯ ಒಪ್ಪಂದವನ್ನು ಕೊನೆಗೊಳಿಸಲು ಆಡಳಿತ ವರ್ಗ ಒಪ್ಪಿಕೊಂಡಿತು. ಈ ಮೂಲಕ, ಕಗ್ಗಂಟಾಗಿದ್ದ ಸಂಧಾನ ಸುಸೂತ್ರವಾಗಿ ಅಂತ್ಯಗೊಂಡು ಅನಿರ್ದಿಷ್ಟ ಕಾಲದ ಉಪವಾಸ ಮುಷ್ಕರ ನಡೆಸುತ್ತಿದ್ದ ಕಾರ್ಮಿಕ ನಾಯಕರು ಆಡಳಿತ ನಿರ್ದೇಶಕ
ಪಿ.ಡಿ.ಶೆಣೈ ಅವರಿಂದ ಎಳನೀರು ಕುಡಿಯುವುದರ ಮೂಲಕ ತಮ್ಮ ಮುಷ್ಕರವನ್ನು ಅಂತ್ಯಗೊಳಿಸಿದರು.
ಉತ್ತರ ಪ್ರದೇಶಕ್ಕೆ ರಾಷ್ಟ್ರಪತಿ ಆಡಳಿತ
ನವದೆಹಲಿ, ಅ. 18 (ಯುಎನ್ಐ)– ಉತ್ತರ ಪ್ರದೇಶದಲ್ಲಿ ಇಂದು ರಾಷ್ಟ್ರಪತಿ ಆಡಳಿತವನ್ನು ವಿಧಿಸಲಾಗಿದೆ. 425 ಮಂದಿ ಸದಸ್ಯರಿರುವ ರಾಜ್ಯ ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಡಲಾಗಿದೆ.
ಇದರಿಂದ, ನೀರಿನ ಮೇಲಿನ ಗುಳ್ಳೆಯಂತಿದ್ದ ಮಾಯಾವತಿ ನೇತೃತ್ವದ ಸರ್ಕಾರ ಪತನವಾಗಿದೆ. ಈ ಬೆಳವಣಿಗೆ ಆಶ್ವರ್ಯ ತರುವಂತಹದ್ದೇನಲ್ಲ. ಆದರೆ ಲೋಕಸಭೆ ಚುನಾವಣೆವರೆಗೆ ಮಾತ್ರ ಈ ಸರ್ಕಾರಕ್ಕೆ ಬೆಂಬಲ ಮುಂದುವರಿಸುವುದಾಗಿ ಬಿಜೆಪಿಯೇ ಹೇಳುತ್ತಿತ್ತು. ಅದರ ತೀರ್ಮಾನ ಸ್ವಲ್ಪ ಮುಂಚಿತವಾಗಿಯೇ ಆಗಿದೆ. ಗುಜರಾತ್ ಸಮಸ್ಯೆ ಇನ್ನೂ ಬಗೆಹರಿಯದಿರುವಾಗಲೇ ಉತ್ತರ ಪ್ರದೇಶದ ಬಗೆಗೆ ಬಿಜೆಪಿ ತನ್ನ ನಿರ್ಧಾರವನ್ನು ತೆಗೆದುಕೊಂಡಿದ್ದು ಮಾತ್ರ ರಾಜಕೀಯ ವಲಯದಲ್ಲಿ ಕುತೂಹಲ ಉಂಟು ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.