ADVERTISEMENT

25 ವರ್ಷಗಳ ಹಿಂದೆ | ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ: ವೇದಿಕೆ ನಿರ್ಣಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಏಪ್ರಿಲ್ 2024, 23:32 IST
Last Updated 4 ಏಪ್ರಿಲ್ 2024, 23:32 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ: ವೇದಿಕೆ ನಿರ್ಣಯ

ಹುಬ್ಬಳ್ಳಿ, ಏ. 4– ಹದಿನಾಲ್ಕು ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಸ್ಥಾಪನೆಗಾಗಿ ತೀವ್ರ ಹೋರಾಟ ಮಾಡಲು ಇಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ಸೇರಿದ ಉತ್ತರ ಕರ್ನಾಟಕ ಅಭಿವೃದ್ಧಿ ವೇದಿಕೆ ಸಭೆ ನಿರ್ಣಯಿಸಿತು.

ಇದಕ್ಕೂ ಮೊದಲು ಸಭೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಸದಸ್ಯರು ಪ್ರತ್ಯೇಕ ರಾಜ್ಯ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಇದಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಹೇಳಿದಾಗ ಎಬಿವಿಪಿ ಸದಸ್ಯರು ಮತ್ತು ವೇದಿಕೆ ಕಾರ್ಯಕರ್ತರ ನಡುವೆ ತಳ್ಳಾಟ, ಹೊಡೆದಾಟ ನಡೆಯಿತು. ಎಬಿವಿ‍ಪಿ ಹುಬ್ಬಳ್ಳಿ ಘಟಕದ ಜಂಟಿ ಕಾರ್ಯದರ್ಶಿ ಉಮೇಶ ಜೋಶಿ ಘರ್ಷಣೆಯಲ್ಲಿ ಗಾಯಗೊಂಡರು.

ಬಲಾಬಲ ಪರೀಕ್ಷೆಗೆ ಸಿದ್ಧ: ವಾಜಪೇಯಿ ಘೋಷಣೆ

ಪಣಜಿ, ಏ. 4 (ಪಿಟಿಐ, ಯುಎನ್‌ಐ)– ಲೋಕಸಭೆಯಲ್ಲಿ ಬಲಾಬಲ ಪರೀಕ್ಷೆಗೆ ತಾವು ಸಿದ್ಧ ಎಂದು ಪ್ರಧಾನಮಂತ್ರಿ ಅಟಲ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಹೇಳಿದರು.

ADVERTISEMENT

‘ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಯತ್ನ ನಡೆದಿದೆ ಎಂದು ನಮಗೆ ಗೊತ್ತು; ನಾವು ಅದನ್ನು ಸ್ವಾಗತಿಸುತ್ತೇವೆ. ಏಕೆಂದರೆ ನಮ್ಮ ಬಲವನ್ನು ಸಾಬೀತುಪಡಿಸಲು ಅದು ನಮಗೆ ಅವಕಾಶ ಒದಗಿಸುವುದು’ ಎಂದು ಅವರು ಬಿಜೆಪಿಯ ಮೂರು ದಿನಗಳ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆ ನಂತರ ಪತ್ರಕರ್ತರಿಗೆ ತಿಳಿಸಿದರು.

ಆದರೆ, ಅವಿಶ್ವಾಸ ಗೊತ್ತುವಳಿ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.