ಕೇಂದ್ರ– ರಾಜ್ಯ ಬಾಂಧವ್ಯ ಮರು ಪರಿಶೀಲನೆ ಅಗತ್ಯ– ಸಚಿವ ಶುಕ್ಲ ಒಪ್ಪಿಗೆ
ನವದೆಹಲಿ, ಮೇ 9– ಕೇಂದ್ರ ಮತ್ತು ರಾಜ್ಯಗಳ ನಡುವಣ ಬಾಂಧವ್ಯಗಳ ಬಗ್ಗೆ ‘ಮರು ಪರಿಶೀಲನೆ’ ಅಗತ್ಯವಿದೆ ಎಂದು ರಾಜ್ಯಸಭೆಯಲ್ಲಿ ಗೃಹ ವ್ಯವಹಾರಗಳ ಸ್ಟೇಟ್ ಸಚಿವ ವಿದ್ಯಾಚರಣ್ ಶುಕ್ಲ ಅವರು ಇಂದು ಒಪ್ಪಿಕೊಂಡರು.
ಆದರೆ ನಿರ್ದಿಷ್ಟ ಪರಿಹಾರ ಕಾಣುವತನಕ ಈಗಿರುವ ಸಂವಿಧಾನಾತ್ಮಕ ವ್ಯವಸ್ಥೆಗೇ ಬದ್ಧವಾಗಿರಬೇಕು, ಅದರಲ್ಲಿರುವ ನಿಯಮಗಳಂತೆಯೇ ಕೇಂದ್ರ ಮತ್ತು ರಾಜ್ಯಗಳು ವರ್ತಿಸಬೇಕು, ರಾಜಕೀಯ ಪರಿಗಣನೆಗಳನ್ನು ತರುವಂತಿಲ್ಲ ಎಂದು ಅವರು ಹೇಳಿದರು.
ಬಿರ್ಲಾ ವ್ಯವಹಾರಗಳ ತನಿಖಾ ಆಯೋಗಕ್ಕೆ ಲೋಕಸಭೆ ನಕಾರ
ನವದೆಹಲಿ, ಮೇ 9– ‘ಸಂಸತ್ ಸದಸ್ಯರೂ ಸೇರಿ, ತುಂಬಾ ಜವಾಬ್ದಾರಿಯುತ ವ್ಯಕ್ತಿಗಳು’ ಬಿರ್ಲಾ ಸಂಸ್ಥೆಗಳ ವಿರುದ್ಧ ಮಾಡಿದ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಉನ್ನತ ಅಧಿಕಾರದ ಆಯೋಗವೊಂದನ್ನು ನೇಮಿಸಬೇಕೆಂದು ಕೇಳುವ ಖಾಸಗಿ ನಿರ್ಣಯವೊಂದನ್ನು ಲೋಕಸಭೆ ಧ್ವನಿಮತದಿಂದ ತಿರಸ್ಕರಿಸಿತು.
ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ದತ್ತಾ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದ ನಂತರ, ಬಿರ್ಲಾ ಸಂಸ್ಥೆಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದೆಂಬುದನ್ನು ಸರ್ಕಾರ ಹೇಳಬಲ್ಲುದು ಎಂದು ಕೈಗಾರಿಕಾ ಅಭಿವೃದ್ಧಿ ಸಚಿವ ಫಕ್ರುದ್ದೀನ್ ಆಲಿ ಅಹಮ್ಮದ್ ತಿಳಿಸಿದರು.
ರಾಜಧನ ರದ್ದಿಗೆ ಎಂ.ಪಿ.ಗಳ ಒತ್ತಾಯ
ನವದೆಹಲಿ, ಮೇ 9– ಮಾಜಿ ರಾಜರಿಗೆ ನೀಡುತ್ತಿರುವ ರಾಜಧನ ಹಾಗೂ ವಿಶೇಷ ಹಕ್ಕುಬಾಧ್ಯತೆಗಳನ್ನು ಈ ವರ್ಷದ ಅಕ್ಟೋಬರ್ 2ರ ಹೊತ್ತಿಗೆ ರದ್ದುಗೊಳಿಸಬೇಕೆಂಬ ಖಾಸಗಿ ನಿರ್ಣಯಕ್ಕೆ ಇಂದು ಲೋಕಸಭೆಯಲ್ಲಿ ಭಾರಿ ಬೆಂಬಲ ದೊರೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.