ಸಾಹಿತ್ಯ ಪರಿಷತ್ ಲಾಂಛನ
ಬೆಂಗಳೂರು, ಡಿ. 24– ಸುಮಾರು ಆರು ದಶಕಗಳ ಕಾಲ ಕನ್ನಡ ನಾಡು ನುಡಿಯ ಸೇವೆ ಸಲ್ಲಿಸಿರುವ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಬಾರಿಗೆ ಲಾಂಛನವನ್ನು ಹೊಂದುತ್ತಿದೆ. ಹಿರಿಯ ಸಾಹಿತಿ ಶ್ರೀ ವೀ.ಸೀ ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ಲಾಂಛನ ಸಮಿತಿಯು ಆಯ್ಕೆ ಮಾಡಿದ ಈ ಲಾಂಛನವನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರ ಸಭೆ ಅಂಗೀಕರಿಸಿವೆ.
ಇಪ್ಪತ್ತು ಕಲಾವಿದರಿಂದ ಬಂದಿದ್ದ ಲಾಂಛನದ ನಮೂನೆಗಳಲ್ಲಿ ಎಚ್.ಎಸ್.ಇನಾಮತಿ ಅವರ ಕೃತಿಯನ್ನು ಸಮಿತಿಯು ಆಯ್ಕೆ ಮಾಡಿತು. ಇನ್ನು ಮುಂದೆ ಪರಿಷತ್ತಿನ ಎಲ್ಲ ಕಾರ್ಯಗಳಲ್ಲಿ ಹಾಗೂ ಪ್ರಕಟನ ವಿಭಾಗದಲ್ಲಿ ಈ ಲಾಂಛನ ಬಳಕೆಯಾಗಲಿದೆ.
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೊರಿಸಲು ಕೆಲವರ ಸನ್ನಾಹ: ಮುಖ್ಯಮಂತ್ರಿ ತೀವ್ರ ಆಪಾದನೆ
ಬೆಂಗಳೂರು, ಡಿ. 24– ಶಾಂತಿ ಮತ್ತು ಶಿಸ್ತುಪಾಲನೆ ವ್ಯವಸ್ಥೆ ಕುಸಿದಿದೆ ಎಂಬ ಕಾರಣ ಹುಟ್ಟಿಸಿ, ಮೈಸೂರಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವ ಸನ್ನಾಹ ಕೆಲವು ವಲಯಗಳಿಂದ ನಡೆದಿದೆ ಎಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನಸಭೆಯ ತುರ್ತು ಅಧಿವೇಶನದಲ್ಲಿ ತಿಳಿಸಿದರು.
‘ಗಡಿ ಸಮಸ್ಯೆಯ ಸಂಬಂಧದಲ್ಲಿ ನಾನು ರಾಜೀನಾಮೆ ನೀಡುವುದಿಲ್ಲ. ರಾಜೀನಾಮೆ ನೀಡಿದರೆ ಕರ್ತವ್ಯದಿಂದ ತಪ್ಪಿಸಿ ಕೊಂಡಂತಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.