ಕೇರಳ ಸಂಪುಟದ ಆರು ಮಂದಿ ಸಚಿವರ ರಾಜೀನಾಮೆ
ತಿರುವನಂತಪುರ, ಅ. 17– ಬಲ ಕಮ್ಯುನಿಸ್ಟ್ ಪಕ್ಷ, ಭಾರತೀಯ ಸೋಷಲಿಸ್ಟ್ ಪಕ್ಷ, ಮುಸ್ಲಿಂ ಲೀಗ್ ಮತ್ತು ಕ್ರಾಂತಿಕಾರಿ ಸೋಷಲಿಸ್ಟ್ ಪಕ್ಷಗಳಿಗೆ ಸೇರಿದ ಆರು ಜನ ಸಚಿವರು ಇಂದು ರಾತ್ರಿ ಕೇರಳ ಸಚಿವ ಸಂಪುಟಕ್ಕೆ ರಾಜೀನಾಮೆಯನ್ನು ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಈ ನಿರ್ಧಾರವನ್ನು ತಿಳಿಸಿದರು.
ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಹಿಂದಕ್ಕೆ ತೆಗೆದುಕೊಳ್ಳುವರೇ ಎಂಬ ಪ್ರಶ್ನೆಗೆ ಅವರು, ಮುಖ್ಯಮಂತ್ರಿ ಈ ದಿನ ವಿಧಾನಸಭೆಯಲ್ಲಿತ್ತ ಹೇಳಿಕೆ ಹಾಗೂ ಸಂಪುಟಕ್ಕೆ ಬೆಂಬಲ ಹಿಂದಕ್ಕೆ ತೆಗೆದುಕೊಳ್ಳುವುದು ಮುಂತಾದ ಇತರ ವಿಷಯಗಳ ಬಗ್ಗೆ ತಾವು ವಿಧಾನ ಸಭೆಯಲ್ಲಿ ಹೇಳಿಕೆಯನ್ನು ನೀಡುವುದಾಗಿ ತಿಳಿಸಿದರು.
ಅಷ್ಟಿಷ್ಟು ಅಧಿಕಾರದ ಪಂಚಾಯ್ತಿ ಗ್ರಾಮರಾಜ್ಯ ತರಲಾರದೆಂದು ಜೆ.ಪಿ.
ಬೆಂಗಳೂರು, ಅ. 17– ರಾಜಧಾನಿಗಳಲ್ಲಿ ಅಧಿಕಾರಕ್ಕೆ ಅಂಟಿ ಕುಳಿತುಕೊಂಡ ಜನರಿಂದಾಗಿ, ಗಾಂಧೀಜಿಯ ಗ್ರಾಮರಾಜ್ಯ ವ್ಯವಸ್ಥೆ ಇನ್ನೂ ಕನಸಾಗಿಯೇ ಉಳಿದಿದೆ ಎಂದು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಇಂದು ತೀವ್ರ ವಿಷಾದ ವ್ಯಕ್ತಪಡಿಸಿದರು.
‘ಗಾಂಧೀಜಿ ಅಧಿಕಾರ ವಿಕೇಂದ್ರೀಕರಣವನ್ನು ಪ್ರತಿಪಾದಿಸಿದರು. ಆದರೆ ಕಳೆದ ಇಪ್ಪತ್ತೆರಡು ವರ್ಷಗಳಲ್ಲಿ ನಾವು ಅಧಿಕಾರವನ್ನು ಸಾಧ್ಯವಾದ ಮಟ್ಟಿಗೂ ಕೇಂದ್ರೀಕರಿಸಿದೆವು. ಇಂದು ನಮಗೆ ಗಾಂಧೀಜಿಯ ಜನ್ಮಶತಾಬ್ದಿ ಆಚರಿಸುವ ಅರ್ಹತೆ, ಹಕ್ಕು ಇದೆಯೇ?’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.