ಕುದುರೆಮುಖ ಯೋಜನೆ ವರದಿ ಸಿದ್ಧ
ಪಣಜಿ, ಫೆ. 18 (ಪಿಟಿಐ)– ಕುದುರೆಮುಖ ಕಬ್ಬಿಣದ ಅದಿರು ಅಭಿವೃದ್ಧಿ ಯೋಜನೆ ಬಗ್ಗೆ ವಿವರಪೂರ್ಣ ಯೋಜನಾ ವರದಿಯನ್ನು ಆಖೈರುಗೊಳಿಸಲಾಗಿದೆ. ಸುಮಾರು ₹ 190 ಕೋಟಿ ರೂಪಾಯಿಗಳ ಬಂಡವಾಳದ ಅಂದಾಜನ್ನು ಹೊಂದಿರುವ ಈ ಯೋಜನೆಗೆ ಬಂಡವಾಳ ಹೂಡಿಕೆ ಬಗ್ಗೆ ನಿರ್ಧಾರ ಕೈಗೊಳ್ಳುವುದಕ್ಕಾಗಿ ವರದಿ ಸದ್ಯದಲ್ಲೇ ಕೇಂದ್ರ ಸಂಪುಟದ ಮುಂದೆ ಬರಲಿದೆ.
ಪ್ರತಿವರ್ಷ ಸುಮಾರು ಎಪ್ಪತ್ತು ಲಕ್ಷ ಟನ್ ಕಡಿಮೆ ಕಬ್ಬಿಣದ ಅಂಶವಿರುವ ಅದಿರನ್ನು ಮೊದಲ ಹಂತದಲ್ಲೇ ರಫ್ತು ಮಾಡಬಹುದೆಂದು ಹೇಳಲಾಗಿದೆ. ಮುಂದೆ ಉತ್ತಮವಾದ ಅದಿರನ್ನು ರಫ್ತು ಮಾಡಬಹುದು.
ಊದು ಕುಲುಮೆಗಾಗಿ ಜಪಾನ್ ಕಡಿಮೆ ಕಬ್ಬಿಣದ ಅಂಶವಿರುವ ಅದಿರನ್ನು ಕೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.
ಪಂಚತಾರಾ ಹೋಟೆಲ್ ಅಶೋಕ: ಏಪ್ರಿಲ್ನಲ್ಲಿ ಆರಂಭ
ಬೆಂಗಳೂರು, ಫೆ. 18– ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ಸೌಕರ್ಯಗಳುಳ್ಳ ದಕ್ಷಿಣ ಭಾರತದ ಪ್ರಥಮ ‘ಪಂಚತಾರಾ’ ಹೋಟೆಲ್ ಅಶೋಕ ಏಪ್ರಿಲ್ ತಿಂಗಳ ಆದಿಭಾಗದಲ್ಲಿ ಆರಂಭವಾಗಲಿದೆ.
ಒಂದೂವರೆ ಕೋಟಿ ರೂಪಾಯಿಗಳ ವೆಚ್ಚದ ಆರು ಮಹಡಿಗಳ ಹೋಟೆಲಿನಲ್ಲಿ 80 ಕೊಠಡಿಗಳಿವೆ. ಕುಮಾರಪಾರ್ಕಿನ, ಸರ್ಕಾರಿ ಅತಿಥಿಗೃಹ ‘ಕುಮಾರಕೃಪಾ’ದ ಪಕ್ಕದಲ್ಲಿ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಪೊರೇಷನ್ ನಿರ್ಮಿಸಿರುವ ಹೋಟೆಲಿನಲ್ಲಿ ಐದು ಡಬ್ಬಲ್ ಸೂಟ್ಗಳು, ಐದು ಲಕ್ಸುರಿ ಸೂಟುಗಳು ಹಾಗೂ ಆರನೇ ಮಹಡಿಯಲ್ಲಿ ಒಂದು ‘ಅಧ್ಯಕ್ಷೀಯ ನಿವಾಸ’ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.